3 ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತ ಮೈಸೂರಲ್ಲಿ ಡೆಂಗ್ಯೂಗೆ ಬಲಿ
ಮೈಸೂರು, ಜೂನ್ 29: ಮೈಸೂರಿನಲ್ಲಿ ಇದೀಗ ಡೆಂಗ್ಯೂ ಮಹಾಮಾರಿಗೆ ನವಾವಿವಾಹಿತ ಬಲಿಯಾಗಿದ್ದಾನೆ. ಹರವೆ ಗ್ರಾಮದ ನಿವಾಸಿ ಸಣ್ಣತಮ್ಮಯ್ಯ ಎಂಬುವರ ಪುತ್ರ ರವಿಚಂದ್ರ(32) ಡೆಂಗ್ಯೂಗೆ ಬಲಿಯಾದ ದುರ್ದೈವಿ. ಈತ ಮೂರು ತಿಂಗಳ ಹಿಂದೆಯಷ್ಟೆ ಕಟ್ಟೆಮಳಲವಾಡಿ ಗ್ರಾಮದ ನಿವಾಸಿ ವೆಂಕಟೇಶ ಎಂಬುವರ ಪುತ್ರಿ ಶಿಲ್ಪಾ ಎಂಬಾಕೆಯನ್ನು ವಿವಾಹವಾಗಿದ್ದ.
ದಾಂಪತ್ಯ ಬದುಕನ್ನು ಆರಂಭಿಸಿ, ಆಷಾಢಕ್ಕೆ ಪತ್ನಿಯನ್ನು ತವರಿಗೆ ಕಳುಹಿಸುವ ಸಿದ್ಧತೆಯಲ್ಲಿದ್ದಾಗಲೇ ರವಿಚಂದ್ರ ಡೆಂಗ್ಯೂಗೆ ಬಲಿಯಾಗಿರುವುದು ಮನಕಲಕುವಂತಿದೆ. ಡೆಂಗ್ಯೂ ಜ್ವರ ಮೈಸೂರು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಒಬ್ಬರಾದ ಮೇಲೆ ಒಬ್ಬರು ಎಂಬಂತೆ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ.
ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?
ಓರಿಯಂಟಲ್ ಇನ್ಷೂರೆನ್ಸ್ ಕಂಪೆನಿಯಲ್ಲಿ ನೌಕರನಾಗಿದ್ದ ರವಿಚಂದ್ರನಿಗೆ ವಾರದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಮಾಮೂಲಿ ಜ್ವರ ಇರಬಹುದೆಂದು ಮಾತ್ರೆ ತೆಗೆದುಕೊಂಡರೂ ಕಡಿಮೆಯಾಗದಿದ್ದಾಗ ಹುಣಸೂರು ಸಾರ್ವಜನಿಕ ಆಸ್ಪತೆಯಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ.
ಆ ನಂತರ ಕೂಡ ವಾಸಿಯಾಗದಿದ್ದಾಗ ಮೈಸೂರಿನ ಗೋಪಾಲ್ ಗೌಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿಯೂ ಚೇತರಿಕೆ ಕಾಣದೆ ಅಪೋಲೋ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿಯೂ ಯಾವುದೇ ರೀತಿ ಚೇತರಿಕೆ ಕಾಣದ್ದರಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಅಲ್ಲಿ ಎರಡು ದಿನ ಚಿಕಿತ್ಸೆ ನೀಡಲಾಯಿತಾದರೂ ಸ್ಪಂದಿಸದೆ ರವಿಚಂದ್ರ ಮೃತಪಟ್ಟಿದ್ದಾನೆ.
ಮಾರಕ ರೋಗಗಳ ತಡೆಗೆ ಸಸ್ಯ ತಂತ್ರಜ್ಞಾನ
ಗ್ರಾಮೀಣ ಪ್ರದೇಶದಲ್ಲಿ ಡೆಂಗ್ಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದರ ಬಗ್ಗೆ ಅರಿವಿಲ್ಲದೆ ಜ್ವರವೆಂದು ಹಗುರವಾಗಿ ಪರಿಗಣಿಸಿ ಮಾತ್ರೆಗಳನ್ನು ತೆಗೆದುಕೊಂಡು ಉಲ್ಭಣವಾದ ಬಳಿಕ ಆಸ್ಪತ್ರೆಗೆ ದಾಖಲಾಗುತ್ತಿರುವುದೇ ಸಾವಿಗೆ ಕಾರಣ ಎನ್ನಲಾಗಿದೆ.