ಅಂದು ತುಂಬಿ ತುಳುಕುತ್ತಿದ್ದ ಕೋಣನೂರು ಕೆರೆ ಇಂದು...!
ಮೈಸೂರು, ಜುಲೈ 11 : ಬೇಸಿಗೆಯಲ್ಲಿ ಕೆರೆಗಳು ಬತ್ತಿ ನೀರಿಗೆ ಹಾಹಾಕಾರವಾದಾಗ ಮಾತ್ರ ಎಚ್ಚೆತ್ತುಕೊಳ್ಳುವ ನಮ್ಮ ಸರ್ಕಾರ, ಮಳೆಗಾಲದಲ್ಲಿ ಮಳೆ ನೀರನ್ನು ಹಿಡಿದಿಡಲು ಹಿಂದಿನ ಕಾಲದಲ್ಲಿ ನಿರ್ಮಿಸಿದ್ದ ಕೆರೆಗಳನ್ನು ಅಬಿವೃದ್ಧಿ ಪಡಿಸುವ ಗೋಜಿಗೆ ಹೋಗುವುದಿಲ್ಲ.
ಕೆಲಸಕ್ಕೆ ಬಾರದ ಯೋಜನೆಗಳಿಗೆ ಕೋಟ್ಯಂತರ ಹಣವನ್ನು ವ್ಯಯ ಮಾಡುವ ಸರ್ಕಾರ ಕೆರೆಗಳ ಅಭಿವೃದ್ಧಿಗೆ ಮುಂದಾಗುವುದಿಲ್ಲ. ಪರಿಣಾಮ ಒಂದು ಕಾಲದಲ್ಲಿ ನೀರಿನಿಂದ ತುಂಬಿ ತುಳುಕುತ್ತಿದ್ದ ಕೆರೆಗಳು ಇವತ್ತು ಹೂಳು ತುಂಬಿ ಗಿಡಗಂಟಿಗಳು ಬೆಳೆದು ಅವಸಾನದ ಅಂಚಿಗೆ ಬಂದು ತಲುಪಿವೆ.
ಮಾನವ ಶಕ್ತಿ ಬಳಸಿ ಹಿಂದಿನ ಕಾಲದವರು ನಿರ್ಮಿಸಿದ್ದ ಕೆರೆಯನ್ನು, ಇವತ್ತು ಆಧುನಿಕ ಯಂತ್ರಗಳು ಬಂದಿದ್ದರೂ ಅದರ ಹೂಳು ತೆಗೆದು ಸ್ವಚ್ಛಗೊಳಿಸಲು ಸಾಧ್ಯವಾಗದಿರುವುದು ಮಾತ್ರ ದುರಂತದ ಸಂಗತಿಯಾಗಿದೆ. ಕೆರೆಗಳನ್ನು ಪುನರುಜ್ಜೀವನ ಮಾಡಲು ಎಷ್ಟೇ ಮನವಿ ಮಾಡಿಕೊಂಡರೂ, ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. [ಬೆಂಗಳೂರು ಕೆರೆಗಳ ಮೇಲೆ 24 ಗಂಟೆ ಕಣ್ಗಾವಲು]
ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಕೆರೆಗಳಿದ್ದರೂ ಅವುಗಳಲ್ಲಿ ಕೆಲವೇ ಕೆಲವು ಮಾತ್ರ ಕಾಲಕಾಲಕ್ಕೆ ನಿರ್ವಹಣೆ ಮಾಡುತ್ತಿರುವುದರಿಂದ ಸುಸ್ಥಿತಿಯಲ್ಲಿವೆ. ಉಳಿದಂತೆ ಹೆಚ್ಚಿನ ಕೆರೆಗಳು ಅಸ್ತಿತ್ವ ಕಳೆದುಕೊಂಡಿವೆ. ಹಳ್ಳಿಗಳದ್ದೇ ಈ ಕಥೆಯಾದರೆ, ನಗರದ ಕೆರೆಗಳನ್ನಂತೂ ಕೇಳುವುದೇ ಬೇಡ.
ಇದಕ್ಕೆ ಸಾಕ್ಷಿಯಾಗಿ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆ ಗೋಚರಿಸುತ್ತದೆ. ಹಿಂದೆ ಈ ಕೆರೆಯಲ್ಲಿ ನೀರು ತುಂಬಿ ತುಳುಕುತ್ತಿತ್ತು. ಇದರಿಂದ ಸುತ್ತಲಿನ ಜಾನುವಾರು ಮಾತ್ರವಲ್ಲದೆ ಕೃಷಿ ಚಟುವಟಿಕೆಗೂ ನೀರು ಬಳಕೆಯಾಗುತ್ತಿತ್ತು. ಆದರೆ ಕಾಲ ಕಾಲಕ್ಕೆ ಕೆರೆಯಲ್ಲಿ ತುಂಬಿದ್ದ ಹೂಳನ್ನು ತೆಗೆಯದ ಕಾರಣ ನೀರು ಸಂಗ್ರಹವಾಗುತ್ತಿಲ್ಲ. ಜತೆಗೆ ಗಿಡಗಂಟಿಗಳು ಬೆಳೆದು ಕೆರೆಯ ಅಸ್ತಿತ್ವವೇ ಕಳೆದುಹೋಗಿದೆ. [ಕಲುಷಿತ ನೀರಿಗೆ ಜಲಚಿಕಿತ್ಸೆ, ಸಪ್ತಗಿರಿ ವಿದ್ಯಾರ್ಥಿಗಳ ಸಾಧನೆ]
ಸುಮಾರು ಎಂಟು ಎಕರೆ ಪ್ರದೇಶದ ವ್ಯಾಪ್ತಿಯನ್ನು ಹೊಂದಿದ್ದ ಕೆರೆ ಈಗ ಮೈದಾನದಂತಾಗಿದೆ. ಇನ್ನು ಕುರಚಲು ಪೊದೆಗಳು ಕೆರೆಯನ್ನು ಆಕ್ರಮಿಸಿರುವುದರಿಂದಾಗಿ ಚಿರತೆ, ಹಂದಿಗಳು ವಾಸ ಮಾಡುತ್ತಿದ್ದು ಜನ ಅತ್ತ ತೆರಳಲು ಭಯಪಡುವಂತಾಗಿದೆ. ಅಷ್ಟೇ ಅಲ್ಲ ಹಾವು ಚೇಳಿನಂತಹ ವಿಷ ಜಂತುಗಳು ಇಲ್ಲಿ ವಾಸ ಮಾಡುತ್ತಿವೆ.
ಗ್ರಾ.ಪಂ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆರೆಯನ್ನು ಅಭಿವೃದ್ದಿ ಪಡಿಸಿದ್ದೇ ಆದರೆ, ಮಳೆಗಾಲದಲ್ಲಿ ಪೋಲಾಗುವ ನೀರು ಕೆರೆಯಲ್ಲಿ ಸಂಗ್ರಹವಾಗಿ ಅಂತರ್ಜಲ ಹೆಚ್ಚಾಗುತ್ತದೆ. ಇನ್ನಾದರೂ ಸಂಬಂಧಿಸಿದವರು ಕೆರೆಯ ಅಭಿವೃದ್ಧಿಗೆ ಮುಂದಾಗಬೇಕಿದೆ. [ಮೈಸೂರಿನ ಕಾರಂಜಿಕೆರೆಯಲ್ಲಿ ನಿತ್ಯ ಪ್ರೇಮೋತ್ಸವ]