ಸಿದ್ದರಾಮಯ್ಯಗಿಂತ ಮೋದಿ ಒಳ್ಳೆಯವರು ಎಂದ ಜಿಟಿ ದೇವೇಗೌಡ
ಮೈಸೂರು, ಫೆಬ್ರವರಿ 10 : ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಮಗ ರಾಕೇಶ್ ವಿದೇಶಕ್ಕೆ ಹೋಗಿ ತೀರಿಕೊಂಡರಲ್ಲಾ, ಅವರ ಸಾವಿನ ಕಾರಣ ಬಹಿರಂಗಪಡಿಸಿದಿರಾ? ಮುಖ್ಯಮಂತ್ರಿಯ ಮಗ ತೀರಿಕೊಂಡರೆ ಆ ಬಗ್ಗೆ ತನಿಖೆಯನ್ನೇ ಮಾಡಲಿಲ್ಲ. ಬೇಡದ ವಿಚಾರಕ್ಕೆ ತನಿಖೆ ಮಾಡುತ್ತೀರಾ. ನಿಮಗೆ ನಾಚಿಕೆಯಾಗಬೇಕು.
- ಹೀಗೆ ವಾಗ್ದಾಳಿ ನಡೆಸಿದವರು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ. ನಿಮ್ಮ ಅಪ್ಪ, ಅಮ್ಮ ಹಾಗೂ ಪೂರ್ವಜರ ಸಮಾಧಿ ಬಳಿ ರಾಕೇಶ್ ಮಣ್ಣು ಮಾಡದೆ ಕಾಡಿನಲ್ಲಿ ಮಾಡಿದಿರಿ. ನಿಮ್ಮ ಮಗನ ಮೇಲೆ ಕೋಪ ಇತ್ತಾ? ರಾಕೇಶ್ ಮೃತ ದೇಹವನ್ನ ಯಾಕೆ ಕಾಟೂರ್ ತೋಟದಲ್ಲಿ ಮಣ್ಣು ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ಜಿ.ಟಿ.ದೇವೇಗೌಡ ಮಗನ ಮೇಲೆ ಎಫ್ ಐಆರ್, ಸಿದ್ದು ಷಡ್ಯಂತ್ರ ಎಂದ ಜಿಟಿಡಿ
ಸೋಲಿನ ಭಯದಿಂದ ನನ್ನ ಮಗನ ವಿರುದ್ಧ ಪ್ರಕರಣ ದಾಖಲಿಸಿ ಸೇಡಿನ ರಾಜಕಾರಣ ಮಾಡ್ತಿದ್ದೀರಿ. ಆದರೆ ನಿಮ್ಮ ಮಗ ವಿದೇಶದಲ್ಲಿ ಯಾಕೆ ಮೃತಪಟ್ಟ ಎಂಬುದನ್ನು ಬಹಿರಂಗ ಪಡಿಸಿ. ನಿಮ್ಮ ಮಗ ತೀರಿಕೊಂಡಾಗ ಪ್ರಧಾನಿ ನರೇಂದ್ರ ಮೋದಿ ಹೇಗೆ ನಡೆದುಕೊಂಡರು, ಶವ ತರಿಸಲು ಸುಷ್ಮಾ ಸ್ವರಾಜ್ ಯಾವ ರೀತಿ ಸಹಾಯ ಮಾಡಿದರು ಎಂಬುದು ಮರೆತು ಹೋಯಿತಾ ಎಂದು ಪ್ರಶ್ನಿಸಿದರು.
ಸತೀಶ್ ಜಾರಕಿಹೊಳಿ ಹಣದ ಗಂಟು ಹಂಚಿದರು
ಯಾರು ತಮ್ಮ ಪರ ದುಡಿದಿದ್ದಾರೆ ಅವರನ್ನು ಮುಗಿಸುವುದೇ ಸಿದ್ದರಾಮಯ್ಯ ಗುರಿ. ಸತೀಶ್ ಜಾರಕಿಹೊಳಿ ಹಣದ ಗಂಟು ತಂದು ನಿಮ್ಮ ಪರ ಹಣ ಹಂಚಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಅವರನ್ನೇ ಮಂತ್ರಿ ಸ್ಥಾನದಿಂದ ಕಿತ್ತು ಹಾಕುತ್ತೀರಾ? ನಿಮ್ಮ ಏಳಿಗೆಗಾಗಿ ದುಡಿದ ಎಲ್ಲ ನಾಯಕರನ್ನೂ ಮುಗಿಸಿಹಾಕಿದಿರಿ ಎಂದು ಜಿಟಿಡಿ ಆರೋಪಿಸಿದರು.
ಚಾಮುಂಡೇಶ್ವರಿ ಉಪ ಚುನಾವಣೆ ಗೆಲ್ಲಲು ಶ್ರೀನಿವಾಸ ಪ್ರಸಾದ್ ಕಾರಣರು
ನಿಮ್ಮ ಸಂಪುಟದ ಸತೀಶ್ ಜಾರಕಿಹೊಳಿ, ಶ್ರೀನಿವಾಸ್ ಪ್ರಸಾದ್, ಚಿತ್ರನಟ ಅಂಬರೀಶ್, ಡಿ.ಕೆ.ಶಿವಕುಮಾರ್ ಸೇರಿ ಸಾಕಷ್ಟು ನಾಯಕರಿಗೆ ನೀವು ಕಿರುಕುಳ ಕೊಟ್ಟಿದ್ದೀರಿ. ನಾನು ಇಷ್ಟು ದಿನ ಸಂಯಮದಿಂದ ವರ್ತಿಸುತ್ತಾ ಬಂದಿದ್ದೇನೆ. ಚಾಮುಂಡೇಶ್ವರಿ ಉಪ ಚುನಾವಣೆ ಗೆಲ್ಲಲು ಶ್ರೀನಿವಾಸ ಪ್ರಸಾದ್ ಕಾರಣರು. ಅಂಥ ಹಿರಿಯ ನಾಯಕರನ್ನೇ ಮಂತ್ರಿ ಸ್ಥಾನದಿಂದ ಕೈಬಿಟ್ಟಿರಿ. ನಿಮಗೆ ತುಳಿದು ಬೆಳೆಯುವುದೇ ಕೆಲಸವಾಗಿದೆ ಎಂದು ಹರಿಹಾಯ್ದರು.
ನನ್ನನ್ನು ಮುಗಿಸಲು ಪ್ಲಾನ್
ಕುಮಾರಪರ್ವ ಸಮಾವೇಶ ದಿನವೇ ನನ್ನ ಮೇಲಿನ ಪ್ರಕರಣಗಳನ್ನು ಎಸಿಬಿ ಆದೇಶ ಮಾಡಿ, ನನ್ನನ್ನು ಮುಗಿಸಲು ಪ್ಲಾನ್ ಮಾಡಲಾಗಿತ್ತು. ಭ್ರಷ್ಟಾಚಾರ ಮುಚ್ಚಿ ಹಾಕಲು ಲೋಕಾಯುಕ್ತವನ್ನೇ ಮುಚ್ಚಿ, ಎಸಿಬಿ ತೆರೆದು ಎಲ್ಲ ಪ್ರಕರಣಗಳನ್ನು ಅಲ್ಲಿಗೆ ವರ್ಗಾಯಿಸುವ ಪ್ರಯತ್ನ ನಡೆಯುತ್ತಿದೆ. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ ನಿಮ್ಮನ್ನು ಜೈಲಿಗಟ್ಟದೆ ಸುಮ್ಮನಿದ್ದಾರಲ್ಲಾ ಮೋದಿ ಅವರೇ ಒಳ್ಳೆಯವರು, ನಿಜಕ್ಕೂ ಸಂವಿಧಾನದ ರೀತಿ ನೀತಿಗಳನ್ನು ಉಳಿಸುತ್ತಿರುವುದು ಅವರೇ. ಮುಖ್ಯಮಂತ್ರಿ ವಿರುದ್ಧ ಹಕ್ಕು ಚ್ಯುತಿ ಮಂಡಿಸಿ, ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದುತಿಳಿಸಿದರು
ಸಿದ್ದರಾಮಯ್ಯಗೆ ಪಂಥಾಹ್ವಾನ
ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಿ. ನೀವು ಬರುವುದನ್ನು ಇಲ್ಲಿನ ಜನ ಕಾಯುತ್ತಿದ್ದಾರೆ. ನಿಮ್ಮ ಸೋಲು ಶತಾಯ ಗತಾಯ ಯಾರೂ ತಪ್ಪಿಸಲಾಗದು. ಇದು ಶತಸಿದ್ಧ ಎಂದು ಶಾಸಕ ಜಿ.ಟಿ ದೇವೇಗೌಡ ಪಂಥಾಹ್ವಾನ ಮಾಡಿದರು.