ನಂಜನಗೂಡು ಉ.ಚು: 'ತೆನೆ' ಬಿಟ್ಟು 'ಕೈ' ಹಿಡಿದ ಕಳಲೆ ಕೇಶವಮೂರ್ತಿ
ಮೈಸೂರು, ಫೆಬ್ರವರಿ 8: ನಿರೀಕ್ಷೆಯಂತೆ ನಂಜನಗೂಡು ಜೆಡಿಎಸ್ ನಾಯಕ ಕಳಲೆ ಎನ್ ಕೇಶವಮೂರ್ತಿ ಜಾತ್ಯಾತೀತ ಜನತಾದಳಕ್ಕೆ ಗುಡ್ ಬೈ ಹೇಳಿದ್ದಾರೆ. 'ತೆನೆ' ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ಅಧಿಕೃತ ರಾಜೀನಾಮೆ ನೀಡಿರುವ ಕಳಲೆ 'ಕೈ' ಪಕ್ಷವನ್ನು ಅಪ್ಪಿಕೊಳ್ಳಲು ಹೊರಟಿದ್ದಾರೆ.
ಬುಧವಾರ ಜನತಾದಳದ ಪ್ರಾಥಮಿಕ ಸದಸ್ಯತ್ವ ಹಾಗೂ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಕಳಲೆ ರಾಜೀನಾಮೆ ಸಲ್ಲಿಸಿದರು. ಮೈಸೂರು ಜಿಲ್ಲಾ ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ನರಸಿಂಹಸ್ವಾಮಿ ಅವರಿಗೆ ನಂಜನಗೂಡು ಜೆಡಿಎಸ್ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಿದ ಅವರು ತಮ್ಮ ಮೂರು ದಶಕಕ್ಕೂ ಅಧಿಕ ಕಾಲದ ಜೆಡಿಎಸ್ ಜತೆಗಿನ ಭಾಂದವ್ಯ ಜ್ಞಾಪಿಸಿಕೊಂಡ ಒಂದು ಕ್ಷಣ ಭಾವುಕರಾದರು.[ನಂಜನಗೂಡು ಉ.ಚು: ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಶವಮೂರ್ತಿ ಬಹುತೇಕ ಖಚಿತ]
ಕಳೆದ ಕೆಲವು ದಿನಗಳಿಂದ ಕಳಲೆ ಕೇಶವಮೂರ್ತಿ ಕಾಂಗ್ರೆಸಿಗೆ ಸೇರಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಎಚ್.ಸಿ ಮಹದೇವಪ್ಪ ಮನೆಯಲ್ಲಿ ಕಳಲೆ ಏಕಾಏಕಿ ಪ್ರತ್ಯಕ್ಷರಾಗಿದ್ದರು. ಬೆನ್ನಿಗೆ ನಿನ್ನೆ (ಫೆ. 7)ರಂದು ಬೆಂಬಲಿಗರ ಸಭೆ ಕರೆದಿದ್ದ ಕಳಲೆ ಕೇಶವಮೂರ್ತಿ ಜೆಡಿಎಸ್ ಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದರು.[ನಂಜನಗೂಡಲ್ಲಿ ಕಾಂಗ್ರೆಸಿಗೆ ಅಭ್ಯರ್ಥಿಗಳೇ ಇಲ್ವಾ? ಎಚ್.ವಿಶ್ವನಾಥ್ ಪ್ರಶ್ನೆ]
ಇದೀಗ ಅವರು ಅಧಿಕೃತವಾಗಿ ಜೆಡಿಎಸ್ ಗೆ ರಾಜೀನಾಮೆ ನೀಡಿದ್ದಾರೆ. ಇನ್ನು ಕೆಲವೇ ದಿನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮ್ಮುಖದಲ್ಲಿ ಕಳಲೆ ಕಾಂಗ್ರೆಸಿಗೆ ಸೇರಲಿದ್ದಾರೆ. ಅವರು ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.