ಯದುವಂಶದ ಕುವರನಿಗೆ ಹೆಸರಿಡಲು ದಿನಾಂಕ ನಿಗದಿ
ಮೈಸೂರು, ಜನವರಿ 15: ಮೈಸೂರು ಅರಸು ಮನೆತನದ ಹಾಗೂ ಯದುವಂಶದ ಉತ್ತರಾಧಿಕಾರಿ ಯದುವೀರ್ ದಂಪತಿಗೆ ಗಂಡು ಮಗು ಜನಿಸಿದ ಹಿನ್ನೆಲೆಯಲ್ಲಿ ಅರಮನೆಯ ಭವಿಷ್ಯದ ಕುಡಿಗೆ ನಾಮಕರಣದ ದಿನಾಂಕ ನಿಗಧಿ ಪಡಿಸಲಾಗಿದೆ.
ಮುಂದಿನ ತಿಂಗಳು ಅಂದರೆ ಫೆಬ್ರುವರಿ 19 ರಂದು ಮಗುವಿನ ನಾಮಕರಣ ಮಾಡಲು ಅರಮನೆ ಕುಟುಂಬ ವರ್ಗದದವರು ನಿರ್ಧಾರ ಮಾಡಿದ್ದಾರೆ. ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಈ ನಾಮಕರಣ ಶಾಸ್ತ್ರದ ಕಾರ್ಯಕ್ರಮಗಳು ನಡೆಯಲಿದೆ. ಉತ್ತರ ಭಾದ್ರ ನಕ್ಷತ್ರದಲ್ಲಿ ನಾಮಕರಣ ಮಾಡಲು ಸಿದ್ದತೆ ನಡೆದಿದ್ದು, ನಾಮಕರಣದ ಬಳಿಕ ಮೈಸೂರಿನ ಅರಮನೆಯಲ್ಲೇ ತ್ರಿಷಿಕ ಒಡೆಯರ್ ವಾಸ್ತವ್ಯ ಹೂಡಲಿದ್ದಾರೆ.
ತ್ರಿಷಿಕಾ-ಯದುವೀರ ದಂಪತಿ ಕುಡಿಗೆ 3 ತಿಂಗಳೊಳಗೆ ಅರಮನೆಯಲ್ಲಿ ನಾಮಕರಣ
ಕಳೆದ ತಿಂಗಳು ಯದುವೀರ್ ದಂಪತಿಗೆ ಗಂಡು ಮಗು ಜನಿಸಿದ ಬಳಿಕ ತಾಯಿ ಮತ್ತು ಮಗು ಬೆಂಗಳೂರಿನಲ್ಲೇ ನೆಲೆಸಿದ್ದರು. ಇದೀಗ ನಾಮಕರಣದ ಶಾಸ್ತ್ರವಿರುವ ಕಾರಣ ಫೆಬ್ರವರಿ 19 ರಂದು ಮೈಸೂರು ಅರಮನೆಗೆ ಆಗಮಿಸುವರು. ಮೈಸೂರು ಅರಮನೆಯ ಅತ್ಯಾಕರ್ಷಕ ಹಾಗೂ ಐತಿಹಾಸಿಕ ಸಮಾರಂಭಗಳಿಗೆ ಸಾಕ್ಷಿಯಂತಿರುವ ಕಲ್ಯಾಣ ಮಂಟಪ' ದಲ್ಲಿ ಮಗುವಿನ ನಾಮಕರಣ ಶಾಸ್ತ್ರ ನೆರವೇರುತ್ತಿರುವುದು ವಿಶೇಷ.
ಮೈಸೂರು ಸಂಸ್ಥಾನದ ಯದುವಂಶಕ್ಕೆ ಆರು ದಶಕಗಳ ಬಳಿಕ ಪುತ್ರ ಸಂತಾನ ಪ್ರಾಪ್ತಿಯಾಗಿದ್ದು. ಮೈಸೂರು ಅರಸು ಮನೆತನದ ಉತ್ತರಾಧಿಕಾರಿ ಯದುವೀರ್ ಪತ್ನಿ ತ್ರಿಷಿಕಾ ಕುಮಾರಿ ಡಿ.7 ರಂದು ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದರು.
ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಪುತ್ರನ ಆಗಮನದಿಂದ ರಾಜವಂಸ್ಥೆ ಪ್ರಮೋದಾದೇವಿ ಒಡೆಯರ್ ಮತ್ತು ಯದುವೀರ್ ಮುಖದಲ್ಲಿ ಮಂದಹಾಸ ಮೂಡಿತ್ತು. ಬುಧವಾರ ರಾತ್ರಿ 9.50 ಕ್ಕೆ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದು ಮಿಥುನ ರಾಶಿ ಪುನರ್ವಸು ನಕ್ಷತ್ರದಲ್ಲಿ ಗಂಡು ಮಗುವಿನ ಜನನವಾಗಿತ್ತು, 1953ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ನಂತರ ಮೈಸೂರು ರಾಜಮನೆತನದಲ್ಲಿ ಗಂಡು ಸಂತಾನ ಪ್ರಾಪ್ತಿಯಾಗಿರಲಿಲ್ಲ.