ಮೈಸೂರಿನ ಆಟೋ ಚಾಲಕನ ಮಗಳಿಗೆ 12 ಚಿನ್ನದ ಪದಕ
ಮೈಸೂರು, ಏಪ್ರಿಲ್ 12 : ಮೈಸೂರು ವಿಶ್ವವಿದ್ಯಾನಿಲಯದ 96ನೇ ಘಟಿಕೋತ್ಸವದಲ್ಲಿ ಎಂಎಸ್ಸಿ(ರಸಾಯನಶಾಸ್ತ್ರ)ದಲ್ಲಿ 12 ಚಿನ್ನ ಪದಕ ಹಾಗೂ ಮೂರು ನಗದು ಬಹುಮಾನ ಪಡೆಯುವ ಮೂಲಕ ಟಾಪರ್ ಆಗಿ ಮೈಸೂರಿನ ಇಟ್ಟಿಗೆಗೂಡು ನಿವಾಸಿ ಆಟೋ ಚಾಲಕ ಮಗಳು ಸುಮ ಗಮನಸೆಳೆದಿದ್ದಾರೆ. [ರಸಾಯನಶಾಸ್ತ್ರದಿಂದ ಜಾತಿಗಣತಿವರೆಗೆ ಸೋರಿಕೆ ಸಾಮ್ರಾಜ್ಯ!]
ಸಾಧನೆಗೆ ಅಡ್ಡಿಯಾಗದ ಬಡತನ
ಇನ್ನು ಮೈಸೂರಿನ ತಲಕಾಡು ಬಳಿಯ ಹಳ್ಳಿಯೊಂದರಲ್ಲಿ ಟೀ ಅಂಗಡಿ ನಡೆಸುತ್ತಿರುವ ವ್ಯಕ್ತಿಯೊಬ್ಬರ ಮಗಳು ಶಾಂಭವಿ ಬಿಎಸ್ಸಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ 3 ಚಿನ್ನದ ಪದಕ ಹಾಗೂ ಮೂರು ನಗದು ಬಹುಮಾನ ಪಡೆದಿದ್ದರೆ, ಕಲ್ಯಾಣಗಿರಿಯ ನಿವಾಸಿ ಕೂಲಿ ಕಾರ್ಮಿಕರಾದ ಕೃಷ್ಣ ಅವರ ಪುತ್ರಿ ಪುಷ್ಪ ಬಿಎಸ್ಸಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ 3 ಚಿನ್ನ ಹಾಗೂ 3 ನಗದು ಬಹುಮಾನ ಪಡೆದುಕೊಂಡಿದ್ದಾರೆ. [806 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್ಸಿ]
ಕೆಆರ್ ನಗರ ತಾಲೂಕಿನ ಕೋಳುರು ಗ್ರಾಮದ ನಿವೃತ್ತ ಅಂಚೆಪೇದೆ ಷಡಕ್ಷರಿಯವರ ಪುತ್ರ ದರ್ಶನ್ ಕುಮಾರ್ ಎಂಎ(ಇತಿಹಾಸ) ವಿಭಾಗದಲ್ಲಿ ಮೂರು ಚಿನ್ನ ಹಾಗೂ ನಗದು ಬಹುಮಾನ ಪಡೆದುಕೊಂಡಿದ್ದಾರೆ.
ಎನ್ಆರ್ಎನ್ ಮೂರ್ತಿಗೆ ಗೌರವ ಡಾಕ್ಟರೇಟ್
ಶತಮಾನೋತ್ಸವದ ಸಂಭ್ರಮದಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಕ್ರಾಫರ್ಡ್ ಹಾಲ್ನಲ್ಲಿ ನಡೆಯಿತು. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಡಾ. ವಿಜಯ್ ಕುಮಾರ್ ಸಾರಸ್ವತ್ ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಗೌರವ ಡಾಕ್ಟರೇಟ್ ಹಾಗೂ 28,687 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
ವಿದ್ಯಾರ್ಥಿನಿಯರದ್ದೇ ಮೇಲುಗೈ
ಮೈಸೂರು ವಿವಿ ಘಟಿಕೋತ್ಸವದಲ್ಲಿ 28,687 ಮಂದಿ ವಿದ್ಯಾರ್ಥಿಗಳು ಪದವಿ ಪಡೆದಿದ್ದು, ಇವರ ಪೈಕಿ 17,221 ಮಂದಿ ವಿದ್ಯಾರ್ಥಿನಿಯರು ಪದವಿ ಪಡೆದು ಮೇಲುಗೈ ಸಾಧಿಸಿದ್ದಾರೆ. ಉಳಿದಂತೆ 11,466 ಪುರುಷರು ಪದವಿ ಪಡೆದುಕೊಂಡಿದ್ದಾರೆ. ಸ್ನಾತಕೋತ್ತರದ 7,189 ಪದವಿಗಳಲ್ಲಿ 3,845 ಮಹಿಳೆಯರು ಹಾಗೂ 3,344 ಪುರುಷರು ಪಡೆದುಕೊಂಡಿದ್ದಾರೆ.