ಮೈಸೂರು-ತಾಳಗುಪ್ಪ ಸುತ್ತು ಮಾರ್ಗ ತಪ್ಪಿಸಿ, ನಮ್ಮ ಹಣ-ಸಮಯ ಉಳಿಸಿ
ಮೈಸೂರು, ಡಿಸೆಂಬರ್ 22: ಮೈಸೂರು- ತಾಳಗುಪ್ಪ- ಹಾಸನ ಮಾರ್ಗದ ಸ್ಲೀಪ್ ರೈಲು ರದ್ದು ಮಾಡಲಾಗಿದೆ. ಇದರಿಂದ 140 ಕಿಲೋಮೀಟರ್ ಬಳಸು ಮಾರ್ಗದಲ್ಲಿ ತೆರಳುವಂತಾಗಿದ್ದು, 3 ಗಂಟೆ ಹೆಚ್ಚು ಸಮಯ, ಹೆಚ್ಚು ದರದ ರೈಲನ್ನು ಪ್ರಯಾಣಿಕರ ಮೇಲೆ ನೈರುತ್ಯ ರೈಲ್ವೆ ಇಲಾಖೆ ಹೇರಿದೆ.
ಸರಕಾರದ ಇಲಾಖೆಗಳು, ಯೋಜನೆಗಳು ಜನರಿಗೆ ಸಹಾಯ ಆಗುವಂತಿರಬೇಕು. ಆದರೆ ಹುಡುಕಿ ಹುಡುಕಿ ಸಮಸ್ಯೆಯನ್ನೇ ಕೊಡುವಂತಿರಬಾರದು ಅಲ್ಲವಾ? ಅದಕ್ಕಾಗಿಯೇ ನಮ್ಮ ಸಮಸ್ಯೆಯೊಂದನ್ನು ರಾಜ್ಯದ ಜನರ ಮುಂದೆ ತರುತ್ತಿದ್ದೇನೆ. ಇದಕ್ಕೆ ನೀವೇನಂತೀರಿ ಎಂಬ ಅಭಿಪ್ರಾಯ ತಿಳಿಸಿ, ದಯವಿಟ್ಟು ನಮ್ಮ ಬೆಂಬಲಕ್ಕೆ ನಿಲ್ಲಿ.
ಬೆಂ-ಮೈ ನಡುವೆ ವಿದ್ಯುತ್ ಚಾಲಿತ ರೈಲು ಸಂಚಾರಕ್ಕೆ ಒಪ್ಪಿಗೆ
07301/06228 ಮೈಸೂರಿನಿಂದ ತಾಳಗುಪ್ಪಕ್ಕೆ ಹಾಸನ ಮತ್ತು ಶಿವಮೊಗ್ಗ ಮೂಲಕ ಪ್ರತಿ ದಿನದ ಸಂಚರಿಸುತಿದ್ದ ರೈಲನ್ನು ರದ್ದುಪಡಿಸಿ, 140 ಕಿಲೋಮೀಟರ್ ಬಳಸು ಮಾರ್ಗದ 16227/28 ರೈಲು ಮೈಸೂರಿನಿಂದ ತಾಳಗುಪ್ಪ ವಯ ಬೆಂಗಳೂರು ಮತ್ತು ತುಮಕೂರು ಮಾರ್ಗವಾಗಿ ನೀಡಿದ್ದು, ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದೆ.
ಈ ಹಿಂದೆ 07301 ಮೈಸೂರಿನಿಂದ ನಿತ್ಯ ರಾತ್ರಿ 10.30ಕ್ಕೆ ಹೊರಟು ತಾಳಗುಪ್ಪಕ್ಕೆ ಬೆಳಗ್ಗೆ 7.15ಕ್ಕೆ ತಲುಪುತ್ತಿತ್ತು. ಮತ್ತು ರಾತ್ರಿ 06228 ತಾಳಗುಪ್ಪ 8.15ಕ್ಕೆ ಬಿಟ್ಟು, ಮೈಸೂರನ್ನು ಶಿವಮೊಗ್ಗ ಹಾಸನ ಮಾರ್ಗವಾಗಿ ಬೆಳಗ್ಗೆ 7ಕ್ಕೆ ತಲುಪುತ್ತಿತ್ತು. ಈ ರೈಲಿನ ಸಂಚಾರವನ್ನು ನೈರುತ್ಯ ರೈಲ್ವೆ ಇಲಾಖೆ ರದ್ದುಪಡಿಸಿದೆ.
ಕೆಲ ತಿಂಗಳ ಹಿಂದೆ ನೈರುತ್ಯ ರೈಲ್ವೆ ಇಲಾಖೆ 56234/33 ಮೈಸೂರು- ಬೆಂಗಳೂರು- ಮೈಸೂರು ಪ್ಯಾಸೆಂಜರ್ ರೈಲನ್ನು ರದ್ದುಪಡಿಸಿ, 16227/28 ಬೆಂಗಳೂರು -ತಾಳಗುಪ್ಪ ಎಕ್ಸ್ ಪ್ರೆಸ್ ರೈಲನ್ನು ಮೈಸೂರಿಗೆ 56234/33 ರೈಲಿನ ವೇಳಾಪಟ್ಟಿಯಲ್ಲಿ ವಿಸ್ತರಿಸಿತ್ತು.
ಬೆಂಗಳೂರಿನಿಂದ ಮೈಸೂರಿಗೆ ರಾತ್ರಿ ರೈಲು ಸಂಚಾರವಿಲ್ಲ
ಈಗ 16227 ರೈಲು ಮೈಸೂರನ್ನು ನಿತ್ಯ ರಾತ್ರಿ 7.40ಕ್ಕೆ ಬಿಟ್ಟು ಬೆಂಗಳೂರು- ತುಮಕೂರು ಮಾರ್ಗವಾಗಿ ತಾಳಗುಪ್ಪವನ್ನು ಬೆಳಗ್ಗೆ 7.15ಕ್ಕೆ ತಲುಪುತ್ತದೆ. 16228 ರೈಲು ತಾಳಗುಪ್ಪವನ್ನು ರಾತ್ರಿ 8.15ಕ್ಕೆ ಬಿಟ್ಟು ಮೈಸೂರನ್ನು ಅದೇ ಮಾರ್ಗವಾಗಿ ಬೆಳಗ್ಗೆ 8ಕ್ಕೆ ತಲುಪುತ್ತಿದೆ. ಇದರಿಂದ ಪ್ರಯಾಣಿಕರಿಗೆ ಅನಗತ್ಯವಾಗಿ 3 ಗಂಟೆ ಹೆಚ್ಚು ಪ್ರಯಾಣ ಮತ್ತು 235 ರು. ಇದ್ದ ಸ್ಲೀಪರ್ ದರ ಈಗ ಮುನ್ನೂರು ರುಪಾಯಿಗಳಿಗೆ ಏರಿಕೆ ಆಗಿದೆ.
ಜತೆಗೆ 140 ಕಿಲೋಮೀಟರ್ ಬಳಸು ಮಾರ್ಗ ಬೇರೆ. ಹೊಳೆನರಸಿಪುರ, ಕೆ ಅರ್ ನಗರ ಮತ್ತು ಹಾಸನ ಪ್ರಯಾಣಿಕರಿಗೆ ಶಿವಮೊಗ್ಗ ಮತ್ತು ತಾಳಗುಪ್ಪ ನಿತ್ಯ ರಾತ್ರಿ ರೈಲು ಇಲ್ಲದಂತಾಗಿದೆ.
ಮೈಸೂರು ಗ್ರಾಹಕ ಪರಿಷತ್ ಮನವಿ
ಮೈಸೂರಿನಿಂದ ತಾಳಗುಪ್ಪಕ್ಕೆ ವಯ ಹಾಸನ ಮಾರ್ಗದಲ್ಲಿ ಈ ಹಿಂದೆ ಇದ್ದ 07301/06228 ಸ್ಲೀಪ್ ರೈಲನ್ನು ಪುನಃ ಆರಂಭಿಸಬೇಕು. ಇದರಿಂದ ಮೈಸೂರು, ಹಾಸನ, ಶಿವಮೊಗ್ಗ ಮತ್ತು ತಾಳಗುಪ್ಪ ನಡುವಿನ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಜತೆಗೆ ಹೆಚ್ಚುವರಿ ಬೋಗಿಯನ್ನು ಈ ರೈಲಿಗೆ ನೀಡಬೇಕು ಅಥವಾ ಪ್ರತ್ಯೇಕ ಮೈಸೂರು- ತಾಳಗುಪ್ಪ ರಾತ್ರಿ ರೈಲನ್ನು ಹಾಸನ- ಶಿವಮೊಗ್ಗ ಮಾರ್ಗದಲ್ಲಿ ಕೂಡಲೇ ನೀಡಬೇಕು.
ನೈರುತ್ಯ ರೈಲ್ವೆ ಇಲಾಖೆ ಮೈಸೂರು ಮೂಲಕ ಇದ್ದ ಕಣ್ಣೂರು / ಕಾರವಾರ ರೈಲಿನ 80 ಕಿಲೋಮೀಟರ್ ಬಳಸು ಮಾರ್ಗವನ್ನು ತೆಗೆದು ಪ್ರಯಾಣಿಕರ ಅನುಕೂಲಕ್ಕೆ ವಾರಕ್ಕೆ ನಾಲ್ಕು ದಿನ ಕುಣಿಗಲ್ ಮಾರ್ಗದಲ್ಲಿ ಬಿಟ್ಟಿದೆ. ಆದರೆ ಮೈಸೂರು- ತಾಳಗುಪ್ಪ ಹತ್ತಿರದ ಮಾರ್ಗದಲ್ಲಿ ಇದ್ದ ರೈಲನ್ನು ರದ್ದುಪಡಿಸಿ 140 ಕಿಲೋಮೀಟರ್ ಬಳಸು ಮಾರ್ಗ ನೀಡಿದೆ. ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸಬೇಕು.