ಗಾಂಧಿ ಪ್ರತಿಮೆ ಎದುರು ಏಕಾಂಗಿ ಹೋರಾಟ, ವಿದ್ಯಾರ್ಥಿಗಳ ಆಕ್ರೋಶ
ಮೈಸೂರು, ಸೆಪ್ಟೆಂಬರ್ 9: ತಮಿಳುನಾಡಿಗೆ ಕಾವೇರಿ ಜಲಾಶಯದಿಂದ ನೀರು ಬಿಡುವಂತೆ ಕೋರ್ಟ್ ಆದೇಶದ ವಿರುದ್ಧ ಆಕ್ರೋಶದ ಕಿಚ್ಚು ಹೆಚ್ಚಾಗಿದ್ದು, ರಾಜ್ಯ ಸರ್ಕಾರ ಹಾಗೂ ತಮಿಳುನಾಡಿನ ವಿರುದ್ಧ ಮೈಸೂರಲ್ಲಿ ಪ್ರತಿಭಟನೆ ಮುಂದುವರೆದಿದೆ. ಸಿಎಂ ಸಿದ್ಧರಾಮಯ್ಯ ರಾಜ್ಯಕ್ಕೆ ದ್ರೋಹವೆಸಗಿ ಪರ ರಾಜ್ಯಕ್ಕೆ ನೀರು ಬೀಡುತ್ತಿರುವ ನಿಲುವನ್ನು ಖಂಡಿಸಿ, ರಾಜ್ಯ ರೈತರ ಬೆಳೆಗೆ ನೀರು ಬೀಡುವಂತೆ ಆಗ್ರಹಿಸಿ ವ್ಯಕ್ತಿಯೊಬ್ಬರು ನಗರದ ಗಾಂಧಿ ಪ್ರತಿಮೆ ಎದುರು ಏಕಾಂಗಿ ಹೋರಾಟ ನಡೆಸಿ ಗಮನ ಸೆಳೆದರು.
ಕುಂಬಾರಕೊಪ್ಪಲು ಗ್ರಾಮದ ಮುರಳಿ ಎಂಬ ವ್ಯಾಪಾರಿ ಸಿಎಂ ಸಿದ್ಧರಾಮಯ್ಯ, ತಮಿಳು ನಾಡಿನ ಸಿಎಂ ಜಯಲಲಿತಾ, ಶಾಸಕ ಅಂಬರೀಶ್, ಸಂಸದೆ ರಮ್ಯಾ ಹಾಗೂ ನಟ ಯಶ್ ಭಾವಚಿತ್ರಕ್ಕೆ ಚಪ್ಪಲಿಹಾರ ಹಾಕಿದ ನಾಮಫಲಕ ಹಿಡಿದು ಪ್ರತಿಭಟಿಸಿದ. ರಾಜ್ಯದಲ್ಲಿ ಹುಟ್ಟಿ, ಬೆಳೆದು ಹೊರರಾಜ್ಯಕ್ಕೆ ಹೋಗಿ ಸಿಎಂ ಆದ ಬಳಿಕ ರಾಜ್ಯದ ರೈತರ ನೀರನ್ನೇ ಕಿತ್ತುಕೊಳ್ಳುವ ಜಯಲಲಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಂಚ್ಯಾ, ಸಾತಗಳ್ಳಿ ಗ್ರಾಮಸ್ಥರು ಸಾತಗಳ್ಳಿ ಗ್ರಾಮಸ್ಥರು ರಿಂಗ್ ರಸ್ತೆ ತಡೆದು ಕಾವೇರಿ ನೀರು ಬಿಡದಂತೆ ಆಗ್ರಹಿಸಿದರು. ಇದೇ ವೇಳೆ ಕಾವೇರಿ ಕ್ಯಾತೆ ತೆಗೆದ ಜಯಲಲಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಜಯಲಲಿತಾ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. 2 ತಾಸುಗಳ ಕಾಲ ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಬೋರೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜು, ಜಯಣ್ಣ ಸೇರಿದಂತೆ ನೂರಕ್ಕೂ ಹೆಚ್ಚು ಗ್ರಾಮಸ್ಥರು ಹಾಜರಿದ್ದರು.
ನೀರಿಗಾಗಿ ಮುಸ್ಲಿಂರ ಬೈಕ್ ಮೆರವಣಿಗೆ
ಗೌಸಿಯಾನಗರ, ಶಾಂತಿನಗರದ ಹೈದರಾಲಿ ಯುನಿಟಿನ ಮುಸ್ಲಿಂ ಸಂಘಟನೆಗಳು ಬೆಳ್ಳಂಬೆಳಗ್ಗೆ ಉದಯಗಿರಿಯ ಸಿಗ್ನಲ್ ಬಳಿ ಟೈರಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ನೂರಾರು ಮಂದಿ ಬೈಕ್ ನಲ್ಲಿ ಮಹದೇವಪುರ ಮುಖ್ಯರಸ್ತೆ ಮೂಲಕ ಅಂಬೇಡ್ಕರ್ ವೃತ್ತ, ಇರ್ವಿನ್ ವೃತ್ತ, ರೈಲು ನಿಲ್ದಾಣ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು.
ಪ್ರತಿಕೃತಿ ದಹನ
ಜಯಲಲಿತಾ ಪ್ರತಿಕೃತಿ ದಹಿಸಿ, ಸಿಎಂ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಗರಪಾಲಿಕೆ ಸದಸ್ಯ, ಯುನಿಟಿ ಮುಖ್ಯಸ್ಥ ನಜೀರ್ ಅಹಮದ್, ಕಾರ್ಯದರ್ಶಿ ಸಯದ್ ರಜಾಕ್, ಅಮೀರ್, ತಾಜ್ ಮೊದಲಾದವರಿದ್ದರು.
ಗಂಗೋತ್ರಿ ವಿದ್ಯಾರ್ಥಿಗಳಿಂದ ರಸ್ತೆ ತಡೆ
ಕಾವೇರಿ ಹೋರಾಟಕ್ಕಾಗಿ ಬೀದಿಗಿಳಿದ ಗಂಗೋತ್ರಿ ವಿದ್ಯಾರ್ಥಿಗಳು ಪಡುವಾರಹಳ್ಳಿಯ ಸಿಗ್ನಲ್ ಬಳಿ ಹುಣಸೂರು-ಮೈಸೂರು ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದೇ ವೇಳೆ ಮಹದಾಯಿ, ಕಳಸಾ ಬಂಡೂರಿ, ಕಾವೇರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಂತೆ ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿದವು.
ಸಂಚಾರ ಅಸ್ತವ್ಯಸ್ತ
ಸಿಎಂ ಸಿದ್ಧರಾಮಯ್ಯ ನಿಲುವು ಖಂಡಿಸಿ, ಜಯಲಲಿತಾ ನಡೆ ವಿರೋಧಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಎಲ್ಲರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಒಂದು ಗಂಟೆಗೂ ಹೆಚ್ಚು ಕಾಲ ನಡು ರಸ್ತೆಯಲ್ಲೇ ಟೈರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರು.
ಪ್ರಗತಿಪರರ ಆಕ್ರೋಶ
ದಲಿತ ವಿದ್ಯಾರ್ಥಿಗಳ ಒಕ್ಕೂಟ, ಸಂಶೋಧಕರ ಸಂಘ, ಯುವ ಪ್ರಗತಿಪರ ಚಿಂತಕರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದ ಗೌರವಾಧ್ಯಕ್ಷ ಮಹೇಶ್ ಸೋಸ್ಲೆ, ಅಧ್ಯಕ್ಷ ಗುರುಮೂರ್ತಿ, ಸಂಶೋಧಕರ ಸಂಘದ ದಿಲೀಪ್ ನರಸಯ್ಯ, ಗೋಪಾಲ್, ಕುಮಾರ್, ಮೂರ್ತಿ, ನವೀನ್, ಮೌರ್ಯ ಸೇರಿ 200ಕ್ಕೂ ಹೆಚ್ಚು ಮಂದಿ ಹಾಜರಿದ್ದರು.
ಉಗ್ರ ಪ್ರತಿಭಟನೆ ಎಚ್ಚರಿಕೆ
ನರಸಿಂಹರಾಜ ಕ್ಷೇತ್ರದ ನಿವಾಸಿಗಳಿಂದ ನಗರಪಾಲಿಕೆ ಸದಸ್ಯ ನಟರಾಜ್ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದ ಎದುರು ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಬೆಂಗಳೂರು-ಮೈಸೂರು ನಡುವೆ ರಸ್ತೆ ತಡೆ ನಡೆಸಿ, ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರಪಾಲಿಕೆ ಸದಸ್ಯೆ ರತ್ನಾಲಕ್ಷ್ಮಣ್, ರಾಜೇಶ್, ಮಹದೇವ್ ಇನ್ನಿತರರು ಹಾಜರಿದ್ದರು.
ವಿದ್ಯಾರ್ಥಿನಿಯರ ಜಾಥಾ
ಕೆಆರ್ಎಸ್ ಮತ್ತು ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಗುರುವಾರ ನಗರದ ಮಹಾರಾಣಿ ಕಾಲೇಜಿನ ತರಗತಿಗಳನ್ನು ಬಿಡಿಸಿ ಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರೊಡನೆ ಬೃಹತ್ ಜಾಥಾ ನಡೆಸಲಾಯಿತು.
ಧಿಕ್ಕಾರ ಧಿಕ್ಕಾರ
ಕನ್ನಡ ಕ್ರಿಯಾ ಸಮಿತಿಯ ಮುಖಂಡ ಪ.ಮಲ್ಲೇಶ್ ನೇತೃತ್ವದಲ್ಲಿ ನಗರದ ದೇವರಾಜ ಅರಸು ರಸ್ತೆ ಮೂಲಕ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್ ವಿರುದ್ಧ ಧಿಕ್ಕಾರ ಕೂಗುತ್ತಾ, ಕಾವೇರಿ ನಮ್ಮದು, ಬೇಕೇ ಬೇಕು ನೀರು ಬೇಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಚಾಮರಾಜೇಂದ್ರ ವೃತ್ತಕ್ಕೆ ಆಗಮಿಸಿ ಅಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಅವೈಜ್ಞಾನಿಕ ತೀರ್ಪು
ಸುಪ್ರೀಂ ಕೋರ್ಟ್ ಅವೈಜ್ಞಾನಿಕ ತೀರ್ಪನ್ನು ಖಂಡಿಸಿ ಮತ್ತು ಕನ್ನಡಿಗರ ವಿರೋಧಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಧೋರಣೆಯನ್ನು ಖಂಡಿಸಿ, ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿ ಕರ್ನಾಟಕ ಸೇನಾಪಡೆ ವತಿಯಿಂದ ನಗರದ ಅಗ್ರಹಾರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ರೈತರ ಆಕ್ರೋಶ
ಭಾರತೀಯ ಕಿಸಾನ್ ಸಂಘದ ಆಶ್ರಯದಲ್ಲಿ 200ಕ್ಕೂ ಹೆಚ್ಚು ರೈತರು ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದನ್ನು ಖಂಡಿಸಿ, ರಾಜ್ಯ ಸರ್ಕಾರ ರೈತರ ಹಿತ ಕಡೆಗಣಿಸಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವರುಣಾ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ನೀರು ನಿಲ್ಲಿಸಿ
ಮುಖ್ಯರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಸುಮಾರು 1 ಗಂಟೆ ಕಾಲ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ತಮಿಳುನಾಡಿನ ಧೋರಣೆಗೆ ಖಂಡನೆ
ಎಸ್ ಡಿಪಿಐ ಕಾರ್ಯಕರ್ತರು ನಗರದ ಫೌಂಟೆನ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮಿಳುನಾಡು ನೀರು ಕೇಳುತ್ತಿರುವುದು ಖಂಡನೀಯ. ಹಾಗಾಗಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.