ಮೈಸೂರು ಎಸ್ಪಿ ರವಿ ಡಿ.ಚನ್ನಣ್ಣನವರ್ ಸಂದರ್ಶನ
ಮೈಸೂರು, ಡಿಸೆಂಬರ್ 04 : 'ನಾವು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಇಲ್ಲ. ನಾವು ಸತ್ಯದ ಪರ, ಬಡವರ ಪರ ಸಂವಿಧಾನದ ನಿರ್ದೇಶನದಂತೆ ಕ್ರಮಗಳನ್ನು ಕೈಗೊಂಡಿದ್ದೇವೆ' ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಹೇಳಿದರು.
ಹನುಮ ಜಯಂತಿ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಬಂಧನ, ಪೊಲೀಸರ ಮೇಲೆ ಮಾಡುತ್ತಿರುವ ಆರೋಪಗಳು ಮುಂತಾದವುಗಳ ಕುರಿತು ರವಿ ಡಿ.ಚನ್ನಣ್ಣನವರ್ ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದರು.
ಖಡಕ್ ಅಧಿಕಾರಿಗಳೆಂಬ ಸೋಗು ಬಿಡಿ: ಚನ್ನಣ್ಣನವರ್ ಗೆ ಸಿಂಹ ಟಾಂಗ್
ಪ್ರತಾಪ್ ಸಿಂಹ ಬಂಧನ ಖಂಡಿಸಿ ಇಂದು ಹುಣಸೂರು ಬಂದ್ಗೆ ನಡೆಸಲಾಗುತ್ತಿದೆ. ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು, ಸಂಸದ ಪ್ರತಾಪ್ ಸಿಂಹ ಪೊಲೀಸರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
'ಅಭಿ ಪಿಕ್ಚರ್ ಬಾಕಿ ಹೈ' - ರವಿ ಪವರ್ ಫುಲ್ ಮಾತುಗಳು
ರವಿ ಡಿ.ಚನ್ನಣ್ಣನವರ್ ವಿರುದ್ಧ ಪರೋಕ್ಷವಾಗಿ ಪ್ರತಾಪ್ ಸಿಂಹ ಟ್ವಿಟ್ ಮಾಡಿದ್ದು, "ಆಳುವವರ ಅಣತಿ ಮೀರುವಹಾಗಿಲ್ಲ ಅಲ್ವಾ ಸಾರ್?! ಕನಿಷ್ಠ ಖಡಕ್ ಅಧಿಕಾರಿಗಳೆಂಬ ಸೋಗು ಬಿಟ್ಟು ಆಳುವ ಪಕ್ಷದ ಆಳುಗಳು ಅನ್ನುವುದನ್ನು ಒಪ್ಪಿಕೊಳ್ಳಿ. ದತ್ತ ಜಯಂತಿಗೆ ಸಕಲ ವ್ಯವಸ್ಥೆ ಮಾಡಿರುವ ಅಣ್ಣಾಮಲೈ, ಸರ್ಕಾರವನ್ನು ಎದುರುಹಾಕಿಕೊಂಡ ಡಿಐಜಿ ರೂಪ, ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ರಶ್ಮಿ ನೋಡಿ ಕಲಿಯಿರಿ, ಭಾಷಣ ನಿಲ್ಲಿಸಿ" ಎಂದು ಹೇಳಿದ್ದಾರೆ.
ಸಂಸದರ ಆರೋಪಗಳಿಗೆ ರವಿ ಡಿ.ಚನ್ನಣ್ಣನವರ್ ನೀಡಿದ ಉತ್ತರಗಳು ಇಲ್ಲಿವೆ..
ಹುಣಸೂರಿನಲ್ಲಿ ನಡೆದದ್ದೇನು?
ಹುಣಸೂರಿನ ಘಟನೆ ಬಗ್ಗೆ ಹೇಳಿ ಪ್ರಯೋಜನವಿಲ್ಲ. ಅದನ್ನು ರೀಕಾಲ್ ಮಾಡಿ ಶಾಂತಿ ಕದಡುವುದು ಬೇಡ. ಸದ್ಯ ಪರಿಸ್ಥಿತಿ ತಹಬದಿಗೆ ಬಂದಿದೆ. ಅಲ್ಲಿನ ಚುನಾಯಿತ ಪ್ರತಿನಿಧಿಗಳಿಗೆ ಈ ಕುರಿತಾಗಿ ಗಲಾಟೆ ಬೇಡವೆಂದು ಸಭೆ ನಡೆಸಿಯೂ ತಿಳಿಸಲಾಗಿದೆ. ಜನರಿಗೆ ಶಾಂತಿಯಿಂದ ವರ್ತಿಸಿ ಎಂದು ಮನವಿ ಮಾಡಿದ್ದೇನೆ.
ಸಂಸದರು ನಿಮ್ಮೊಂದಿಗೆ ಅನುಚಿತವಾಗಿ ವರ್ತನೆ ಮಾಡಿದರೆ?
ಹನುಮ ಜಯಂತಿಯಂದು ಶಾಂತಿ ಕಾಪಾಡಿ ಎಂದು ಸಂಸದರಿಗೂ ಈ ಹಿಂದೆ ತಿಳಿಸಿದ್ದೆವು. ಆದರೆ, ಅವರು ಅವರಿಗೆ ಕೊಟ್ಟ ಮಾರ್ಗವನ್ನು ಹೊರತುಪಡಿಸಿದ್ದಲ್ಲದೇ, ಬ್ಯಾರಿಕೇಡ್ ಸಹ ಮುರಿದಿದ್ದಾರೆ. ನಮಗೆ ರಾಜ್ಯ ಸರ್ಕಾರದಿಂದ ಮಾಲಾಧಾರಿಗಳಿಗೆ ಯಾತ್ರೆಗೆ ಅಡ್ಡಿ ಮಾಡಬೇಡಿ ಎಂದು ಎಲ್ಲಿಯೂ ಆದೇಶ ಕೊಟ್ಟಿಲ್ಲ. ನಾವು ಯಾರ ಅಧೀನರಲ್ಲ, ಅವರು ಕಾನೂನು ಉಲ್ಲಂಘಿಸಿದ ಕಾರಣ ಬಂಧಿಸಿದ್ದೇವೆ.
ಹನುಮ ಜಯಂತಿ ವಿಚಾರದಲ್ಲಿ ಇಷ್ಟೊಂದು ಗೊಂದಲ ಏಕೆ?
2015 ರಲ್ಲಿ ಹೀಗೆ ಅನುಮತಿಯ ವಿಚಾರದಲ್ಲಿ ಕೇವಲ ಬಂಟಿಂಗ್ಸ್ ಹಾಗೂ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಗದ್ದಲವಾಗಿ 7 ಪ್ರಕರಣ ದಾಖಲಾಗಿತ್ತು. ಇದು ಒಂದು ದಿನವಲ್ಲ ಒಂದು ವಾರದ ಅವಧಿಯಲ್ಲಿ 140 ಜನರ ಮೇಲೆ ಕೇಸ್ ದಾಖಲಾಗಿತ್ತು. ಅಷ್ಟೇ ಅಲ್ಲ 144 ಸೆಕ್ಷನ್ ಕೂಡ ದಾಖಲಾಗಿತ್ತು. ಅಂತಹ ಘಟನೆ ಮರಕಳಿಸಬಾರದೆಂದು ಎಂದು ಕ್ರಮ ಕೈಗೊಂಡಿದ್ದೇವೆ.
ಟ್ವಿಟರ್ನಲ್ಲಿ ಮಾಡಿರುವ ಆರೋಪಕ್ಕೆ ಏನು ಹೇಳುವಿರಿ?
ನಾವು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಇಲ್ಲ. ನಾವು ಸತ್ಯದ ಪರ, ಬಡವರ ಪರ, ಸರ್ವರ ಹಿತ ಮುಖ್ಯ. ಸಂವಿಧಾನದ ನಿರ್ದೇಶನದಂತೆ ಕ್ರಮ ಕೈಗೊಂಡಿದ್ದೇವೆ. ಹೌದು, ನಾನು ಅಣ್ಣಾಮಲೈ, ನಮ್ಮ ಸಹೋದ್ಯೋಗಿಗಳಿಂದ, ಪೊಲೀಸ್ ಪೇದೆಯಿಂದಲೂ ಕಲಿಯಬೇಕಾಗಿದೆ. ನಾವು ಎಂದೂ ಪರಿಪೂರ್ಣರಲ್ಲ, ಕಲಿಯೋದು ಇದ್ದೇ ಇರುತ್ತೆ. ಆದರೆ, ನಾವು ಯಾರ ಆಣತಿಯಂತೆ ಕೆಲಸ ಮಾಡುವುದಿಲ್ಲ. ನಮಗೆ ಸಂಸದರ ಬಗ್ಗೆಯೂ ಗೌರವವಿದೆ. ಏನಾದರೂ ಆಕ್ಷೇಪ, ತೊಂದರೆಗಳಿದ್ದಲ್ಲಿ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದು.
ವಿಡಿಯೋ ವೈರಲ್ ಆಗಲು ಕಾರಣವೇನು?
ವಿಡಿಯೋ ವೈರಲ್ ಆದ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸವನ್ನು ಮಾತ್ರ ಮಾಡಿಕೊಂಡು ಹೋಗುತ್ತೇನೆ ಅಷ್ಟೇ.