44 ವರ್ಷದ ಕೋರ್ಟ್ ವ್ಯಾಜ್ಯ ಸುಖಾಂತ್ಯ: ಪ್ರಮೋದಾದೇವಿ ಒಡೆಯರ್
ಮೈಸೂರು, ಏಪ್ರಿಲ್ 5 : "ನಮ್ಮ 4 ದಶಕಗಳ ಹೋರಾಟಕ್ಕೆ ಜಯ ಲಭಿಸಿದ್ದು, ಈವರೆಗೂ ನಮ್ಮಿಂದ ಪಾವತಿ ಮಾಡಿಸಿಕೊಂಡಂಥ ಹಣವನ್ನು ಆದಾಯ ತೆರಿಗೆ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಬಡ್ಡಿ ಸಮೇತ ಹಿಂತಿರುಗಿಸಿದೆ" ಎಂದು ಮೈಸೂರಿನ ರಾಜವಂಶಸ್ಥರಾದ ಪ್ರಮೋದಾ ದೇವಿ ಮಾಹಿತಿ ನೀಡಿದರು.
44 ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ರಾಜಮನೆತನದ ಸಂಪತ್ತು ಹಾಗೂ ಆದಾಯ ತೆರಿಗೆಯ ವಿಚಾರಕ್ಕೆ ಸಂಬಂಧಪಟ್ಟ ಪ್ರಕರಣ ಸುಖಾಂತ್ಯ ಕಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಕುರಿತಾಗಿ ನ್ಯಾಯಾಲಯದಲ್ಲಿ 6 ಪ್ರಕರಣಗಳಿದ್ದವು. ನನ್ನ ಪತಿ ಇದ್ದಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಈ ಪ್ರಕರಣಗಳು ತೀರ್ಮಾನ ಆಗಿದ್ದರೆ ಖುಷಿಯಾಗುತ್ತಿತ್ತು ಎಂದರು.
ಕುತೂಹಲ ಕೆರಳಿಸಿದ ಅಮಿತ್ ಶಾ-ಮೈಸೂರು ರಾಜವಂಶಸ್ಥರ ಭೇಟಿ
ಸದ್ಯ ಎಲ್ಲ ವಾದ- ಪ್ರತಿವಾದದ ಬಳಿಕ ನಮ್ಮ ಪರ ನ್ಯಾಯ ಲಭಿಸಿದೆ. 2013ರಲ್ಲಿ ಶ್ರೀಕಂಠದತ್ತ ಒಡೆಯರ್ ಮರಣದ ನಂತರ ನಾನು ಸತತ ಕಾನೂನು ಹೋರಾಟ ಮಾಡಿ, ಜಯ ಸಾಧಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಅವಧಿಯಲ್ಲಿ ಸಾಕಷ್ಟು ಆದಾಯ ತೆರಿಗೆ ಮತ್ತು ಕಂದಾಯವನ್ನು ಕಟ್ಟಿದ್ದೇವೆ. ಈ ಸಂಬಂಧ ಸುಪ್ರೀಂ ಕೋರ್ಟ್ ಮೊರೆ ಹೋದಾಗ 44 ವರ್ಷಗಳಲ್ಲಿ ಖರ್ಚು ಮಾಡಿದ ಎಲ್ಲ ಹಣವನ್ನು ಆದಾಯ ತೆರಿಗೆ ಇಲಾಖೆ ಹಾಗೂ ಕಂದಾಯ ಇಲಾಖೆ ಬಡ್ಡಿ ಸಮೇತ ವಾಪಸ್ ಮಾಡುವಂತೆ ಸೂಚಿಸಿತ್ತು ಎಂದು ತಿಳಿಸಿದರು.
ಯದುವೀರ್ ಬಿಜೆಪಿಗೆ ಸೇರುತ್ತಾರಾ? ಇಲ್ಲಿದೆ ಅವರ ಉತ್ತರ
ನಮ್ಮ ಹಣ ಬಡ್ಡಿಯೊಂದಿಗೆ ಬಂದಿದೆ. ಎಷ್ಟು ಆಸ್ತಿ, ಹಣ ನಮಗೆ ಬರಲಿದೆ ಎಂಬುದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದು ಪ್ರಮೋದಾ ದೇವಿ ಒಡೆಯರ್ ಅವರು ಗುಟ್ಟು ಬಿಟ್ಟು ಕೊಡಲಿಲ್ಲ.
ಬೆಂಗಳೂರು ಅರಮನೆಯ 450 ಎಕರೆ ಭೂಮಿಗೆ ಸಂಬಂಧಿಸಿದ ವಿವಾದ
ಇಲ್ಲಿನ ಬಹು ಮುಖ್ಯವಾದ ಕಾನೂನು ಹೋರಾಟ ಎಂದರೆ ಬೆಂಗಳೂರು ಅರಮನೆಯ 450 ಎಕರೆ ಭೂಮಿಗೆ ಸಂಬಂಧಿಸಿದ್ದು. ಮೈಸೂರು ಸಂಸ್ಥಾನದ ಕೊನೆಯ ರಾಜ ಚಾಮರಾಜೇಂದ್ರ ಒಡೆಯರ್ 1974ರಲ್ಲಿ ನಿಧನರಾದ ನಂತರ, ಬೆಂಗಳೂರು ಅರಮನೆ ಸೇರಿದಂತೆ ಎಲ್ಲ ಆಸ್ತಿ ಪಾಸ್ತಿಯನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಂಡಿತು. ಅಷ್ಟೇ ಅಲ್ಲದೇ ಅರಮನೆಯ ಆಸ್ತಿ ಹಾಗೂ ಸಂಪತ್ತಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ರಾಜ ಮನೆತನ ಸರಿಯಾದ ತೆರಿಗೆ ಪಾವತಿ ಮಾಡಿಲ್ಲ ಎಂದು ಅರಮನೆಗೆ ಸಂಬಂಧಿಸಿದಂತೆ ಆಸ್ತಿಗಳನ್ನು ವಶಕ್ಕೆ ಪಡೆದುಕೊಂಡು, ಹೆಚ್ಚುವರಿ ತೆರಿಗೆ ಪಡೆದಿತ್ತು. ಈ ಬಗ್ಗೆ ರಾಜ ಮನೆತನದವರು ಹೈ ಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದರು ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕಾನೂನು ಹೋರಾಟಕ್ಕೆ ನಡೆಸಿದ್ದರು.
2012ರಲ್ಲಿ ತೀರ್ಪು ರಾಜ ಮನೆತನದವರ ಪರವಾಗಿ ಬಂದಿತ್ತು
ಆದರೆ, ರಾಜ್ಯ ಸರಕಾರದ ಕ್ರಮವನ್ನು ಕೋರ್ಟ್ ಎತ್ತಿ ಹಿಡಿದಿತ್ತು. ಮಹಾರಾಜರ ಕುಟುಂಬಕ್ಕೆ ಆಸ್ತಿ ಸೇರಿದ್ದರೂ ಇದು ಅವರ ಸ್ವಂತ ಶ್ರಮದಿಂದ ಗಳಿಸಿದ ಆಸ್ತಿ ಅಲ್ಲ. ಜನರಿಂದ ಸಂಗ್ರಹಿಸಿದ ತೆರಿಗೆಯಿಂದ ನಿರ್ಮಿಸಿದ ಅರಮನೆ. ಅದು ಸಾರ್ವಜನಿಕರಿಗೆ ಸೇರಬೇಕು ಎಂಬುದು ಸರಕಾರದ ವಾದವಾಗಿತ್ತು. ಹೈಕೋರ್ಟ್ ಕೂಡ ಇದೇ ಅಭಿಪ್ರಾಯಪಟ್ಟಿತು. ಆ ನಂತರ ಶ್ರೀಕಂಠದತ್ತ ಒಡೆಯರ್ ಸುಪ್ರೀಂ ಕೋರ್ಟ್ ಮೊರೆ ಹೋದರು. ಬಹು ವರ್ಷದ ವಾದ - ವಿವಾದದ ಬಳಿಕ 2012ರಲ್ಲಿ ತೀರ್ಪು ರಾಜ ಮನೆತನದವರ ಪರವಾಗಿ ಬಂದಿತ್ತು. ಆ ನಂತರ 2 ವರ್ಷಗಳ ಕಾಲ ಅವರ ಆಸ್ತಿಯ ಲೆಕ್ಕಾಚಾರ ಮಾಡಿ, ಆದಾಯ ತೆರಿಗೆ ಇಲಾಖೆಗೆ ಕೋರ್ಟ್ ಹೆಚ್ಚುವರಿ ತೆರಿಗೆಯನ್ನು ರಾಜಮನೆತನಕ್ಕೆ ವಾಪಸ್ ಮಾಡುವಂತೆ ಆದೇಶ ನೀಡಿದೆ. ಆ ಆದೇಶದ ಅನ್ವಯ ಹೆಚ್ಚುವರಿ ಹಣ ನಮಗೆ ವಾಪಸ್ ಬಂದಿದೆ ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.
ರಾಜಕೀಯಕ್ಕೆ ಬರುವುದು ಶುದ್ಧ ಸುಳ್ಳು
ನನಗೆ ರಾಜಕಾರಣ ಬಗ್ಗೆ ಆಸಕ್ತಿ ಇಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಮ್ಮನ್ನು ಭೇಟಿಯಾಗಿದ್ದರಲ್ಲಿ ಯಾವುದೇ ವಿಶೇಷ ಇಲ್ಲ. ಈ ಹಿಂದೆ ಕೂಡ ರಾಜಕಾರಣಿಗಳು ಅರಮನೆಗೆ ಬಂದಿದ್ದಾರೆ. ಆಗ ಮಾಧ್ಯಮಗಳು ಹೆಚ್ಚು ಇರಲಿಲ್ಲ. ಇದೀಗ ಮಾಧ್ಯಮಗಳು ಹೆಚ್ಚಾಗಿದ್ದರಿಂದ ವಿಷಯ ದೊಡ್ಡದಾಗಿದೆ ಅಷ್ಟೇ. ಅಮಿತ್ ಶಾ ಅವರದು ಸೌಜನ್ಯದ ಭೇಟಿ ಅಷ್ಟೇ. ಅವರು ರಾಜ್ಯಸಭಾ ಸ್ಥಾನದ ಆಫರ್ ಕೊಟ್ಟಿಲ್ಲ. ಹಾಗೇನಾದರೂ ಕೊಟ್ಟರೆ ತಕ್ಷಣ ಮಾಧ್ಯಮದವರನ್ನು ಕರೆದು ಹೇಳುತ್ತೇನೆ. ನನಗೆ ಖಂಡಿತವಾಗಲೂ ರಾಜಕೀಯ ಮತ್ತು ಚುನಾವಣೆಯಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳುವುದಿಲ್ಲ. ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ ಎಂದು ಪ್ರಮೋದಾ ದೇವಿ ಹೇಳಿದರು.
ರಾಜಕೀಯಕ್ಕೆ ಬರುವುದು ಯದುವೀರ್ ಸ್ವಂತ ನಿರ್ಧಾರ
ನನ್ನ ಮಗ ಯದುವೀರ್ ಗೆ ರಾಜಕೀಯ ಕ್ಷೇತ್ರದ ಬಗ್ಗೆ ಇಷ್ಟವಿದ್ದರೆ ಹೋಗಬಹುದು. ಅವರು ಅದಕ್ಕೆ ನನ್ನ ಅನುಮತಿ ಪಡೆಯುವ ಅಗತ್ಯವಿಲ್ಲ. ಅವರಿಗೆ ಏನು ಇಷ್ಟವೋ ಅದನ್ನು ಮಾಡಬಹುದು. ನನ್ನ ಸಮ್ಮತಿ ಕೇಳಿಯೇ ಅವರು ರಾಜಕೀಯಕ್ಕೆ ಹೋಗಬೇಕು ಅಂತಿಲ್ಲ. ಆದರೆ ಯದುವೀರ್ ತಮಗೆ ರಾಜಕೀಯ ಇಷ್ಟವಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಅವರು ಸ್ವತಂತ್ರರು ಎಂದು ಹೇಳಿದರು.