ಅಲಮೇಲಮ್ಮನ ಶಾಪ ವಿಮುಕ್ತಿ, ಮೈಸೂರು ರಾಜ ಮನೆತನದಲ್ಲಿ ಸಂತಾನ ಭಾಗ್ಯ
ಮೈಸೂರು, ಜೂನ್ 15: ಮೈಸೂರು ರಾಜ ವಂಶಸ್ಥರಿಗೆ ಅಲಮೇಲಮ್ಮನ ಶಾಪವಿದೆ, ಆ ಕಾರಣಕ್ಕೆ ಸಂತಾನ ಆಗುವುದಿಲ್ಲ ಎಂಬ ಕಥೆ ಜನಜನಿತವಾಗಿದೆ. ಆದರೆ ಆ ಶಾಪದಿಂದ ಮುಕ್ತಿ ದೊರೆತಂತಿದೆ ಪ್ರಮೋದಾದೇವಿ ಒಡೆಯರ್ ದತ್ತುಪುತ್ರ ಯದುವೀರ ಅವರ ಪತ್ನಿ ತ್ರಿಷಿಕಾ ಗರ್ಭ ಧರಿಸಿರುವ ಸುದ್ದಿ ಅರಮನೆ ಮೂಲಗಳಿಂದಲೇ ಹೊರಬಿದ್ದಿದೆ.
ಮೈಸೂರು ಅರಸರಿಗೆ ಅಲಮೇಲಮ್ಮನ ಶಾಪ ವಿಮೋಚನೆ ಆಗಿದೆಯಾ, ಇಲ್ಲಿದೆ ಉತ್ತರ
ಈ ವರ್ಷದ ದಸರಾ ಹೊತ್ತಿಗೆ ಮಗು ಜನನ ಆಗುವ ಸಾಧ್ಯತೆ ಇದೆ ಎಂದು ಅರಮನೆ ಜ್ಯೋತಿಷಿಗಳು ಮಾಹಿತಿ ನೀಡಿದ್ದಾರೆ. ಹಿಂದೂ ಧರ್ಮದ ಪ್ರಕಾರ ಜನನವನ್ನು ಶೌಚ ಎಂದು ಕರೆಯುತ್ತಾರೆ. ಆ ವೇಳೆ ಯಾವುದೇ ಶುಭ ಕಾರ್ಯಗಳಲ್ಲಿ ಆ ಕುಟುಂಬದವರು ಪಾಲ್ಗೊಳ್ಳುವಂತಿಲ್ಲ.
ಆದರೆ, ರಾಜ ಕುಟುಂಬಕ್ಕೆ ಜನನ ಶೌಚ ಅನ್ವಯಿಸುವುದಿಲ್ಲ. ಆದ್ದರಿಂದ ದಸರಾ ಯಾವಾಗಲೂ ನಡೆಯುವಂತೆಯೇ ಆಗುತ್ತದೆ ಎಂದು ಜ್ಯೋತಿಷಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ಶ್ರೀರಂಗಪಟ್ಟಣದ ರಾಜನ ಪತ್ನಿ ಅಲಮೇಲಮ್ಮ ಶಾಪದಿಂದಾಗಿ ಒಡೆಯರ್ ವಂಶದ ಅರಸರಿಗೆ ಮಕ್ಕಳು ಆಗುತ್ತಿರಲಿಲ್ಲ ಎಂದು ಜನಪದೀಯ ಕಥೆಯೊಂದು ಇದೆ.