'ಒಡೆಯರ್' ಹೆಸರು ಬದಲಿಸದಿದ್ದರೆ ದರ್ಶನ್ ಮನೆ ಮುಂದೆ ಪ್ರತಿಭಟನೆ?!
ಮೈಸೂರು, ಫೆಬ್ರವರಿ 22: ಒಡೆಯರ್ ಹೆಸರಿನ ಚಿತ್ರದ ಶೀರ್ಷಿಕೆಯನ್ನು ಮೊದಲು ಬದಲಿಸಿ, ಇಲ್ಲವಾದಲ್ಲಿ ದರ್ಶನ್ ಮನೆಯ ಮುಂದೆಯೇ ಪ್ರತಿಭಟನೆ ನಡೆಸುತ್ತೇವೆ ಎಂದು ಕನ್ನಡ ಕ್ರಾಂತಿ ದಳದ ಮುಖಂಡರು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತಾರಾ ದರ್ಶನ್, ಸುದೀಪ್?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು , ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಹಾಗೂ ದರ್ಶನ್ ತೂಗುದೀಪ್ ನಾಯಕ ನಟರಾಗಿ ಅಭಿನಯಿಸುತ್ತಿರುವ ಒಡೆಯರ್ ಚಲನಚಿತ್ರದ ಹೆಸರನ್ನು ಕೂಡಲೇ ಬದಲಾಯಿಸಬೇಕು. ನಾಡು - ನುಡಿ ಸೇವೆಗಾಗಿ ಮೈಸೂರು ರಾಜವಂಶಸ್ಥರಾದ ಒಡೆಯರ್ ಕೊಡುಗೆ ಅಪಾರವಾಗಿದೆ. ಆದರೆ ಅವರ ಹೆಸರಿನಲ್ಲಿ ಕಮರ್ಷಿಯಲ್ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಖಂಡನೀಯ ಎಂದರು.
ಮೂಲ ಮೈಸೂರಿಗರಾದ ದರ್ಶನ್ ಹಾಗೂ ಸಂದೇಶ್ ನಾಗರಾಜ್ ಅವರು ಒಡೆಯರ್ ಹೆಸರಿನಲ್ಲಿ ಕಮರ್ಷಿಯಲ್ ಸಿನಿಮಾ ನಿರ್ಮಿಸುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ನಲ್ಲಿ ದರ್ಶನ್ ಒಬ್ಬ ಲವ್ವರ್ ಬಾಯ್ ತರ ಬಿಂಬಿಸಲಾಗಿದೆ. ಇದರಿಂದ ಒಡೆಯರ್ ಹೆಸರಿಗೆ ಅಪಮಾನ ಮಾಡುತ್ತಿದ್ದು, ಆದ್ದರಿಂದ ಈ ಹೆಸರನ್ನು ಕೂಡಲೇ ಕೈಬಿಡಬೇಕೆಂದು ಕನ್ನಡ ಕ್ರಾಂತಿ ದಳದ ಸತ್ಯಪ್ಪ, ತೇಜಸ್ವಿ ಕುಮಾರ್, ವಸಂತ ರಾಜೇ ಅರಸ್ ಜಂಟಿಯಾಗಿ ಒತ್ತಾಯಿಸಿದರು.
ಚಿತ್ರಕ್ಕೆ ಒಡೆಯರ್ ಹೆಸರು ನೀಡಿ ವಾಣಿಜ್ಯ ಮಂಡಳಿಯು ತಪ್ಪು ಎಸಗಿದ್ದು, ಒಂದು ವಾರದೊಳಗೆ ಹೆಸರು ಬದಲಾಯಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಇದರ ಜೊತೆ - ಜೊತೆಗೆ ದರ್ಶನ್ ಮನೆಯ ಮುಂದೆಯೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.