ಮೈಸೂರು ಜನತೆಗೆ ಸಿಹಿ ಸುದ್ದಿ, ಇನ್ಮುಂದೆ ಮೈಸೂರಲ್ಲೇ ಪಾಸ್ಪೋರ್ಟ್
ಮೈಸೂರು ಜನತೆಯ ದಶಕಗಳ ಬೇಡಿಕೆಯಾದ ಪಾಸ್ಪೋರ್ಟ್ ಸೇವಾ ಕೇಂದ್ರ ಕೊನೆಗೂ ಉದ್ಘಾಟನೆಯಾಗಿದೆ. ಇದರಿಂದ ಬೆಂಗಳೂರಿಗೆ ಅಲೆದಾಡುವುದು ತಪ್ಪಲಿದೆ.
ಮೈಸೂರು, ಜನವರಿ 25 : ಮೈಸೂರು ಜನತೆಯ ಪಾಸ್ ಪೋರ್ಟ್ ಸೇವಾ ಕೇಂದ್ರದ ಮೂರು ದಶಕದ ಕನಸು ಕೊನೆಗೂ ಇಡೇರಿದೆ. ಸಾಂಸ್ಕೃತಿಕ ನಗರಿಯಲ್ಲಿ 'ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರ'ಕ್ಕೆ ಕೇಂದ್ರ ರಸಗೊಬ್ಬರ ಖಾತೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಬುಧವಾರ ಚಾಲನೆ ನೀಡಿದರು.
ದೇಶ ವಿದೇಶಗಳಿಗೆ ಸಾವಿರಾರು ಜನ ಪ್ರಯಾಣಿಸುವ ಮೈಸೂರಿನಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಬೇಕು ಎಂಬ ಬೇಡಿಕೆ ತುಂಬಾ ಹಳೆಯದು. ಇದೀಗ ಆ ಬೇಡಿಕೆ ಇಡೇರಿದೆ. ಮೈಸೂರು ಜನರ ಆಸೆಯಂತೆ ಇಲ್ಲಿನ ಮೇಟಗಳ್ಳಿ ಪೋಸ್ಟ್ ಆಫೀಸ್ ನಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ತೆರೆಯಲಾಗಿದೆ.
ಸೆವಾ ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದ ಅನಂತ್ ಕುಮಾರ್, "3 ದಶಕದ ಬೇಡಿಕೆಯ ಬಳಿಕ ಪಾಸ್ ಪೋರ್ಟ್ ಸೇವಾ ಕೇಂದ್ರ ಮೈಸೂರಿಗೆ ಬಂದಿದೆ. ಇದಕ್ಕಾಗಿ ವಿದೇಶಾಂಗ ಸಚಿವರಾದ ಸುಷ್ಮಾ ಸ್ವರಾಜ್ ಅವರಿಗೆ ಅಭಿನಂದನೆ ಸಲ್ಲಿಸಬೇಕು. ಜೊತೆಗೆ ಸಂಸದ ಪ್ರತಾಪ್ ಸಿಂಹ ರವರು ಇದಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ. ಹಾಗೆಯೇ ಬೆಂಗಳೂರಿನ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ಕಾರ್ತಿಗೇಯನ್ ಸೇವಾ ಕೇಂದ್ರ ಆರಂಭಿಸಬೇಕೆಂಬ ಆದೇಶ ಬಂದ ಐದೇ ದಿನದಲ್ಲಿ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ಮೈಸೂರು ಮತ್ತು ಚಾಮರಾಜನಗರದ 40 ಲಕ್ಷ ಜನರಿಗೆ ಈ ಕೇಂದ್ರ ಸಹಾಯಕವಾಗಲಿದೆ," ಎಂದು ಹೇಳಿದರು.
"ಇಂದು ದೇಶದಲ್ಲಿ ಪ್ರತಿ ಜಿಲ್ಲೆಗೂ ಪಾಸ್ ಪೋರ್ಟ್ ಕೇಂದ್ರ ಬೇಕೆಂದರೆ 10 -15 ವರ್ಷಗಳು ಬೇಕಾಗಬಹುದು. ಆದರೆ ಪ್ರತಿ ಅಂಚೆ ಕಛೇರಿ ಜೊತೆ ಈ ಪಾಸ್ ಪೋರ್ಟ್ ಸೇವಾ ಕೇಂದ್ರ ವಿಲೀನ ಮಾಡಿದರೆ ಕೇವಲ ಒಂದೇ ವರ್ಷದಲ್ಲಿ ಎಲ್ಲಾ ಕಡೆ ಸೇವಾ ಕೇಂದ್ರ ಸ್ಥಾಪಿಸಬಹುದು," ಎಂಬುದು ನನ್ನ ಆಲೋಚನೆ ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, "ಮೈಸೂರಿಗೆ ತಾಜ್ ಮಹಲ್ ಗಿಂತ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಇಂತಹ ಊರಿನಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಇಲ್ಲದಿದ್ದದ್ದು ವಿಪರ್ಯಾಸದ ಸಂಗತಿಯಾಗಿತ್ತು. ಬಿಜೆಪಿ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ಇಲ್ಲಿಗೆ ಬಂದ ಸಂದರ್ಭದಲ್ಲಿ ಮೈಸೂರು ಜಿಲ್ಲೆಗೆ ಒಂದು ಪ್ರನಾಳಿಕೆ ನೀಡಿದ್ದೆವು. ಬಹುದಿನದ ಬೇಡಿಕೆ ಇದ್ದಂತಹ ಪಾಸ್ ಪೋರ್ಟ್ ಸೇವಾ ಕೇಂದ್ರ ತರುತ್ತೇವೆಂದು ಭರವಸೆ ನೀಡಿದ್ದೆವು. ಅದರಂತೆ 4 ಬಾರಿ ಸುಷ್ಮಾ ಸ್ವರಾಜ್ ರವರನ್ನು ಕೇಳಿಕೊಂಡಿದ್ದೆ. ಆದರೆ ಅದು ಸಫಲವಾಗಿರಲಿಲ್ಲ. ಅನಂತ್ ಕುಮಾರ್ ರವರನ್ನು ಭೇಟಿ ಯಾಗಿ ಇದೊಂದು ಕೆಲಸ ಮಾಡಿಕೊಡಿ ಎಂದು ಕೇಳಿಕೊಂಡಿದ್ದೆ. ಇವರ ಪ್ರಯತ್ನದಿಂದಾಗಿ ಮೈಸೂರಲ್ಲಿ ಪಾಸ್ ಪೋರ್ಟ್ ಕಛೇರಿ ಆರಂಭವಾಗಿದೆ," ಎಂದರು.
ಕಾರ್ಯಕ್ರಮದಲ್ಲಿ ಶಾಸಕ ವಾಸು, ಚಾಮರಾಜನಗರ ಕ್ಷೇತ್ರದ ಸಂಸದ ಆರ್ ಧ್ರುವನಾರಾಯಣ್, ಪೋಸ್ಟಲ್ ಸರ್ವಿಸ್ ಬೋರ್ಡ್ ಮೆಂಬರ್ ಉಷಾ ಚಂದ್ರಶೇಖರ್, ಬೆಂಗಳೂರು ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿ ಪಿ ಎಸ್ ಕಾರ್ತಿಗೇಯನ್ ಮತ್ತಿತರು ಉಪಸ್ಥಿತರಿದ್ದರು.
ಉದ್ಘಾಟನೆಯಲ್ಲೂ ರಾಜಕೀಯ
ಮೈಸೂರಿನಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಪಾಸ್ ಪೋರ್ಟ್ ಸೇವಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆಯದಿದ್ದಕ್ಕೆ ಸಿಎಂ ಹಾಗೂ ಉಸ್ತುವಾರಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, "ಕೇಂದ್ರದ ಯೋಜನೆ ಹೆಸರು ಬದಲಾಯಿಸಿ ಹೊಸ ಬೆಳಕು ಅಂತ ಮಾಡಿದರು. ಅದನ್ನು ಮೈಸೂರಿನಲ್ಲಿ ಲಾಂಚ್ ಮಾಡಿದ್ದರು. ಆ ವೇಳೆ ನನ್ನನ್ನು ಕರೆಯಲಿಲ್ಲ. ರಿಂಗ್ ರಸ್ತೆಗೆ ಕೇಂದ್ರದಿಂದ 160 ಕೋಟಿ ಕೊಟ್ಟಿದ್ದರು.ಆದರೆ ಅದರ ಉದ್ಘಾಟನೆಗೆ ನನ್ನನ್ನು ಕರೆದಿದ್ದರಾ?," ಎಂದು ಸಿದ್ದರಾಮಯ್ಯನವರಿಗೆ ಮರುಪ್ರಶ್ನೆ ಹಾಕಿದರು.