ಆರ್ ಟಿಐ ಕಾರ್ಯಕರ್ತ ಕೊಲೆ, ಮುಡಾ ಎಂಜಿನಿಯರ್ ಸೇರಿ 6 ಮಂದಿ ವಶಕ್ಕೆ
ಮೈಸೂರು, ಜನವರಿ 1: ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀನಾಥ್ ಕೊಲೆ ಪ್ರಕರಣದಲ್ಲಿ ಮೈಸೂರು ಪೊಲೀಸರು ಸರಕಾರಿ ಅಧಿಕಾರಿಯೂ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಮೈಸೂರು ನಗಾರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಎಂಜಿನಿಯರ್ ಕೂಡ ಇದರಲ್ಲಿ ಸೇರಿದ್ದಾರೆ. ಮೃತರ ಕುಟುಂಬದವರ ಹೇಳಿಕೆಯನ್ನು ಆಧರಿಸಿ, ಈ ಕ್ರಮ ತೆಗೆದುಕೊಳ್ಳಲಾಗಿದೆ.
ಶ್ರೀರಂಗಪಟ್ಟಣದ ಕಾವೇರಿ ನದಿ ಬಳಿ ಶುಕ್ರವಾರ ಸಂಜೆ 36 ವರ್ಷದ ಶ್ರೀನಾಥ್ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಅದಕ್ಕೆ ಒಂದು ದಿನ ಮುಂಚೆ ಶ್ರೀನಾಥ್ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಮೃತರ ಕುಟುಂಬದವರು ಹೇಳುವ ಪ್ರಕಾರ, ಶ್ರೀನಾಥ್ ಗೆ ಎಂಜಿನಿಯರ್ ಮತ್ತಿತರ ಖಾಸಗಿ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯವರಿಂದ ಬೆದರಿಕೆ ಇತ್ತು.[ಹೊಸ ವರ್ಷಾಚರಣೆ ತಕರಾರಿಗೆ ಜತೆಯಲ್ಲಿದ್ದವನದೇ ಕೊಲೆ]
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಆರೋಪ ಇದ್ದ ಹಲವು ಸರಕಾರಿ ಅಧಿಕಾರಿಗಳ ಬಗ್ಗೆ ಶ್ರೀನಾಥ್ ಮಾಹಿತಿ ನೀಡಿದ್ದರಂತೆ. ಈ ಬಗ್ಗೆ ಅವರ ಮನೆಯಿಂದ ಅನೇಕ ದಾಖಲಾತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಶ್ರೀನಾಥ್ ಕುಟುಂಬದವರು ನಾಪತ್ತೆ ದೂರು ಸಲ್ಲಿಸಿದ್ದರು.[ಕೆಆರ್ ಪೇಟೆ ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತನ ಕೊಲೆ]
ದೇಹಕ್ಕೆ ಹಲವು ಬಾರಿ ಚುಚ್ಚಿದ ಗಾಯದೊಂದಿಗೆ, ಬೆಡ್ ಶೀಟ್ ನಲ್ಲಿ ಸುತ್ತಿದ್ದ ಶ್ರೀನಾಥ್ ಮೃತದೇಹವು ಪೊಲೀಸರಿಗೆ ಸಿಕ್ಕಿತ್ತು. ಬೇರೆಡೆ ಕೊಲೆ ಮಾಡಿ, ಇಲ್ಲಿಗೆ ತಂದು ಎಸೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.