ಹನಿಟ್ರ್ಯಾಪ್ ಪ್ರಕರಣ : ಮೈಸೂರಿನಲ್ಲಿ 6 ಮಂದಿ ಬಂಧನ
ಮೈಸೂರು, ಮಾರ್ಚ್ 11 : ಮೈಸೂರು ಸಿ.ಸಿ.ಬಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ಹನಿಟ್ರ್ಯಾಪ್ ಪ್ರಕರಣವನ್ನು ಭೇದಿಸಿದ್ದು, ಆರುಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಅವರು ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಬಂಧಿತರು ಚಿಕ್ಕಮಗಳೂರಿನ ಶಂಕರಪುರದ ಯೂಸೂಫ್, ಕಣ್ಣೂರಿನ ಲತೀಫ್, ಕಣ್ಣೂರಿನ ತಲಚೇರಿಯ ನೌಶಾದ್, ಮುಡಿಕಂಚೇರಿಯ ರಶೀದ್, ಮೈಸೂರಿನ ಉದಯಗಿರಿಯ ಹೀನಾ, ವಿರಾಜಪೇಟೆ ಹುದಿಕೇರಿಯ ಅನಿತಾ ಎಂದು ವಿವರ ನೀಡಿದರು.
ಇವರು ಮೈಸೂರಿನಲ್ಲಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಕೇರಳ ಮೂಲದ ನಿಝಾರ್ ಎಂಬ ವ್ಯಕ್ತಿಯನ್ನು ಹನಿಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಿಕೊಂಡು ಬ್ಲಾಕ್ ಮೇಲ್ ಮಾಡಿ 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ನಿಝಾರ್ ಅವರು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹೀನಾ ಮತ್ತು ಅನಿತಾರ ಜೊತೆ ನಿಝಾರ್ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡ ಆರೋಪಿಗಳು, ಬ್ಲಾಕ್ ಮೇಲ್ ತಂತ್ರ ಹೂಡಿ 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆಯೊಡ್ಡಿರುವುದಾಗಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಸಿಸಿಬಿ ಇನ್ಸಪೆಕ್ಟರ್ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕೊನೆಗೂ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.