ಕಬಿನಿ ಜಲಾಶಯದಿಂದ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಜಮೀನು ಸಿಗುತ್ತಾ?
ಮೈಸೂರು, ಅಕ್ಟೋಬರ್ 24: ಕಬಿನಿ ಜಲಾಶಯ ನಿರ್ಮಾಣದಿಂದ ಮನೆ, ಜಮೀನು ಕಳೆದುಕೊಂಡು ನಿರ್ಗತಿಕರಾಗಿರುವ ಎಚ್.ಡಿ.ಕೋಟೆ ತಾಲೂಕು ಅಂತರಸಂತೆ ಹೋಬಳಿಯ ಕೆಂಚನಹಳ್ಳಿ, ಮಳಲಿ, ಅಂಡಿಗೇರಿ, ಜಾಗನಕೋಟೆ ಗ್ರಾಮದ ಜನರಿಗೆ ಇದುವರೆಗೆ ಜಮೀನು ದೊರೆತಿಲ್ಲ. ಈಗಾಗಲೇ ಹತ್ತು ಹಲವು ಹೋರಾಟ ನಡೆದರೂ ಪ್ರಯೋಜನವಾಗಿಲ್ಲ.
ಆದರೆ ಸಂತ್ರಸ್ತರ ನೋವನ್ನು ಅರಿತ ಜಿಲ್ಲಾಧಿಕಾರಿ ರಂದೀಪ್ ಅವರು ಈ ಸಂಬಂಧ ಪತ್ರ ಬರೆಯುವುದರ ಮೂಲಕ ಸರ್ಕಾರದ ಗಮನಸೆಳೆದಿದ್ದು, ನಿರಾಶ್ರಿತರಿಗೆ ಜಮೀನು ನೀಡಲು ಅಗತ್ಯವಾಗಿ ಬೇಕಾಗಿರುವ 369-30 ಎಕರೆ ಜಮೀನನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಲು ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಕೋರಿದ್ದಾರೆ.
ಮೈದುಂಬಿದ ಕಬಿನಿಗೆ ಬಾಗಿನ ಅರ್ಪಿಸಿದ ಸಿದ್ದರಾಮಯ್ಯ
ಮೈಸೂರು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾಧಿಕಾರಿಗಳ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ಶೀಘ್ರ ಕ್ರಮ ಕೈಗೊಂಡರೆ ಜಿಲ್ಲಾಧಿಕಾರಿಗಳ ಶ್ರಮ ಸಾರ್ಥಕವಾಗಲಿದೆ. ಜತೆಗೆ ಸುಮಾರು ನಾಲ್ಕೈದು ದಶಕಗಳ ಕಾಲ ಹೋರಾಡುತ್ತಾ ಬಂದಿರುವ ನಿರಾಶ್ರಿತ ಕುಟುಂಬಕ್ಕೂ ಆಶ್ರಯ ಸಿಕ್ಕಿದಂತಾಗಲಿದೆ.
ಹಾಗೆ ನೋಡಿದರೆ ಜಲಾಶಯ ನಿರ್ಮಾಣದಿಂದ ನಿರಾಶ್ರಿತರಾದವರಿಗೆ ಜಾಗ ನೀಡಲು ಕೆಂಚನಹಳ್ಳಿ ಅರಣ್ಯ ವಲಯದಿಂದ 840 ಎಕರೆ, ಕಾಟ್ವಾಳು ಅರಣ್ಯ ವಲಯದಿಂದ 230 ಎಕರೆ ಸೇರಿದಂತೆ ಒಟ್ಟು 1070 ಎಕರೆಯನ್ನು ಸರ್ಕಾರ 1969ರಲ್ಲಿ ಮಂಜೂರು ಮಾಡಿತ್ತು. ಈ ಪೈಕಿ 700-10 ಎಕರೆ ಜಮೀನು ಬಿಡುಗಡೆಯಾಗಿ ನಿರಾಶ್ರಿತರಿಗೆ ಮಂಜೂರಾತಿ ಹಕ್ಕುಪತ್ರವನ್ನು ವಿತರಿಸಲಾಗಿದೆ. ಆದರೆ ಉಳಿದ 369.30 ಎಕರೆ ಜಮೀನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾವಣೆಯಾಗಿಲ್ಲ.
ಕಬಿನಿ ಜಲಾಶಯದ ಮುಳುಗಡೆಯಿಂದ ನಿರಾಶ್ರಿತರಾದ 211 ಜನ ರೈತರುಗಳಿಗೆ ಜಮೀನು ನೀಡಿಲ್ಲವೆಂದು ಈ ಹಿಂದೆ ಅನೇಕ ಬಾರಿ ಮುಷ್ಕರ, ಸಭೆಗಳನ್ನು ನಡೆಸಿ ಜಮೀನು ಮಂಜೂರು ಮಾಡಿಕೊಡುವಂತೆ ಕೋರಿರುವ ಮೇರೆಗೆ ಈ ಕ್ಷೇತ್ರ ವ್ಯಾಪ್ತಿಯ ಸಂಸದರ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಾಗಿದೆ.
ಅರಣ್ಯ ಅಧಿಕಾರಿಗಳಿಗೆ ಸೂಚನೆ
ಜಲಾಶಯದಿಂದ ಮುಳುಗಡೆಯಾಗಿರುವ ಕೆಂಚನಹಳ್ಳಿ ಮತ್ತು ಇತರೆ ಗ್ರಾಮಗಳ ನಿವಾಸಿಗಳಿಗೆ ತೊಂದರೆಯಾಗಿದ್ದು, ಕೂಡಲೇ ಬಗೆಹರಿಸಿ ಬಾಕಿ ಉಳಿದಿರುವ 269-10 ಎಕರೆ ಜಮೀನನ್ನು ಕಂದಾಯ ಇಲಾಖೆಗೆ ವಹಿಸುವ ಬಗ್ಗೆ ಕ್ರಮ ವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಭೆಗಳಲ್ಲಿ ಸೂಚಿಸಲಾಗಿದೆ.
ಲಿಖಿತ ವರದಿಯಿಲ್ಲ
ಅರಣ್ಯ ಇಲಾಖೆ ಕೆಂಚನಹಳ್ಳಿ, ಕಳಸೂರು, ಕಾರವಾಡಿ, ಕಾಟ್ವಾಳು ಮತ್ತು ಸಿಂಗಪಟ್ಟಣ ಗ್ರಾಮಗಳನ್ನು ಒಳಗೊಂಡಂತೆ ಕೆಂಚನಹಳ್ಳಿ ಮತ್ತು ಕಾಟ್ವಾಳು ಅರಣ್ಯ ವಲಯದಿಂದ 1352-00 ಎಕರೆ ಜಮೀನು ಕೊಟ್ಟಿರುವುದರಿಂದ ಉಳಿಕೆ 369-30 ಎಕರೆ ಜಮೀನು ನೀಡಲು ಸಾಧ್ಯವಿಲ್ಲದೆಂದು ಸಭೆಯಲ್ಲಿ ತಿಳಿಸಿದ್ದು, ಆದರೆ ಲಿಖಿತವಾಗಿ ವರದಿ ನೀಡಿಲ್ಲ.
ಜಮೀನು ಮಂಜೂರು ಮಾಡಿ
ಕಬಿನಿ ಜಲಾಶಯದ ನಿರಾಶ್ರಿತರ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ತಹಸೀಲ್ದಾರ್ ಹೆಚ್.ಡಿ.ಕೋಟೆ ಅವರಿಗೆ ಸೂಚಿಸಿರುವ ಮೇರೆಗೆ ಸ್ಥಳ ತನಿಖೆ, ವಿಚಾರಣೆ ಮಾಡಿ ಹಾಲಿ 149 ಜನರಿಗೆ ಜಮೀನು ನೀಡಲು ಬಾಕಿ ಇದೆ. ಅರಣ್ಯ ಇಲಾಖೆಯಿಂದ 369-30 ಎಕರೆ ಜಮೀನನ್ನು ಬಿಡುಗಡೆ ಮಾಡಿಸಿದಲ್ಲಿ ತಲಾ 2 ಎಕರೆಯಂತೆ ಜಮೀನನ್ನು ಮಂಜೂರು ಮಾಡಿ ಉಳಿಕೆ ಜಮೀನನ್ನು ರಸ್ತೆ ಇತ್ಯಾದಿಗಳಿಗೆ ಅವಶ್ಯಕತೆಗೆ ಬಳಸಲು ಸಾಧ್ಯವಾಗಲಿದೆ.
ಜಿಲ್ಲಾಧಿಕಾರಿಗಳಿಂದ ಸರ್ಕಾರಕ್ಕೆ ಪತ್ರ
ಕಬಿನಿ ಜಲಾಶಯದಿಂದ ಮುಳುಗಡೆಯಾದ ಸಂತ್ರಸ್ತರಿಗೆ ಜಮೀನು ಮಂಜೂರು ಮಾಡಬೇಕಾಗಿದ್ದು, 1969ರ ಸರ್ಕಾರದ ಆದೇಶದಂತೆ ಅರಣ್ಯ ಇಲಾಖೆಯಿಂದ 1070 ಎಕರೆ ಪ್ರದೇಶ ಬಿಡುಗಡೆಯಾಗಿದೆ. ಈ ಪೈಕಿ 700-10 ಎಕರೆ ಮಾತ್ರ ಕಂದಾಯ ಇಲಾಖೆಗೆ ನೀಡಿದೆ. ಉಳಿದ 369-30 ಎಕರೆ ಜಮೀನನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಬೇಕಾಗಿರುವುದರಿಂದ ಸರ್ಕಾರದ ಮಟ್ಟದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಸರ್ಕಾರ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ? ಸಂತ್ರಸ್ತರಿಗೆ ಜಮೀನು ಸಿಗುತ್ತಾ ಎಂಬುದನ್ನು ಕಾದು ನೋಡ ಬೇಕಿದೆ.