ರಸ್ತೆ ಬದಿಯಲ್ಲಿ ಮೂತ್ರ ಮಾಡಿದವರಿಗೆ ಹೂವಿನ ಹಾರ ಹಾಕಿ ಸನ್ಮಾನ!
Recommended Video
ಮೈಸೂರು, ನವೆಂಬರ್ 2: ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ ಎಂದು ಎಷ್ಟು ಬೊಬ್ಬೆ ಹೊಡೆದರೂ, ದಂಡ ವಿಧಿಸಿದರೂ ನಮ್ಮ ಜನ ಕ್ಯಾರೇ ಅನ್ನುತ್ತಿಲ್ಲ. ಸುಲಭ ಶೌಚಾಲಯದ ವ್ಯವಸ್ಥೆಯಿದ್ದರೂ ನಮ್ಮ ಮಂದಿ ಅದರ ಬಗ್ಗೆ ಅರಿವೇ ಇಲ್ಲವೇನೂ ಎಂಬಂತೆ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಲೇ ಇರುತ್ತಾರೆ.
ಶೀಟಿ ಹೊಡೆದು ಸ್ವಚ್ಛ ನಿರ್ಮಲ ಗ್ರಾಮವಾದ ಸಂಶಿ
ಇಂತಹವರಿಗೆ ತಕ್ಕ ಶಾಸ್ತಿ ಮಾಡಲು ಮೈಸೂರಿನ ಯುವ ಭಾರತ್ ಸಂಘಟನೆ ಇಂದು ಹೊಸ ಪ್ಲಾನ್ ಹಾಕಿತ್ತು. ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ಸನ್ಮಾನ ಮಾಡಿ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಅರಿವು ಮೂಡಿಸಲಾಯಿತು.
ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ರಘಲಾಲ್ ಮೆಡಿಕಲ್ ಸ್ಟೋರ್ ನ ಮುಂಭಾಗ ತಗಡು ಶೀಟ್ ಗಳ ಸುತ್ತಲೂ ಮೂತ್ರ ವಿಸರ್ಜನೆ ಮಾಡುತ್ತಿದ್ದ ಸಾರ್ವಜನಿಕರಿಗೆ ಹೂವಿನ ಹಾರ ಹಾಕಿ, ನಿಂಬೆಹಣ್ಣು ನೀಡಿ, ಗುಲಾಬಿ ಹೂ ಕೊಟ್ಟು ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ನಂತರ ಮಾತನಾಡಿದ ಸಂಘಟನೆಯ ಸಂಚಾಲಕ ಜೋಗಿ ಮಂಜು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅನೇಕ ಕಲ್ಪನೆಗಳಲ್ಲಿ ಬಯಲು ಮುಕ್ತ ಶೌಚಾಲಯವೂ ಒಂದು. ಸಾರ್ವಜನಿಕರು ರಸ್ತೆ ಬದಿಯಲ್ಲಿ ಈ ರೀತಿ ಮೂತ್ರ ವಿಸರ್ಜನೆ ಮಾಡುವುದರಿಂದ ಸ್ವಚ್ಛತೆ ಹದಗೆಡುತ್ತದೆ. ಇದನ್ನು ಸಾರ್ವಜನಿಕರಾದ ನಾವು ಅರಿತು ರಸ್ತೆ ಬದಿಗಳಲ್ಲಿ ಮೂತ್ರ ವಿಸರ್ಜನೆ ಮಾಡದೆ ಸ್ವಚ್ಛತೆಯನ್ನು ಕಾಪಾಡಿ ಮೈಸೂರು ನಗರ ಸ್ವಚ್ಛ ನಗರಿ ಬಿರುದನ್ನು ಪಡೆದುಕೊಳ್ಳುವಂತೆ ಮಾಡಬೇಕು ಎಂದು ಹೇಳಿದರು.