ಮೈಸೂರಿನ ರಸ್ತೆ ಬದಿಯಲ್ಲಿ ನಕಲಿ ವೈದ್ಯರಿದ್ದಾರೆ ಎಚ್ಚರ..!
ಮೈಸೂರು, ಜುಲೈ 10: ಎಲ್ಲದಕ್ಕೂ ನಾವು ಕೊಡುವ ಔಷಧಿಯೇ ಮದ್ದು, ನಿವ್ಯಾಕೆ ಲಕ್ಷ ಖರ್ಚು ಮಾಡಿ ಡಾಕ್ಟರ್ ಹತ್ತಿರ ಹೋಗ್ತಿರಾ ರೀ? ನಾವೇ ವೈದ್ಯರು, ವಂಶ ಪಾರಂಪರ್ಯವಾಗಿ ಔಷಧಿ ನೀಡುತ್ತಿದ್ದೇವೆ, ಯಾವ ಕಾಯಿಲೆಯಾದರೂ ಗುಣಪಡಿಸುತ್ತೇವೆ... ಹೀಗೆ ಹೇಳಿಕೊಂಡು ಜನರನ್ನು ವಂಚಿಸುವ ನಕಲಿ ವೈದ್ಯರ ತಂಡವೊಂದು ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಸಾರ್ವಜನಿಕರು ಎಚ್ಚರದಿಂದಿರುವುದು ಒಳ್ಳೆಯದು.
ಇತ್ತೀಚಿಗೆ ಒಂದು ಟ್ರೆಂಡ್ ಶುರುವಾಗಿದೆ. ಗಿಡಮೂಲಿಕೆಗಳ ಹೆಸರನ್ನು ಬಳಸಿ ನೀಡುವ ಯಾವುದೇ ಔಷಧವನ್ನು ಕೆಲ ಜನರು ಹಿಂದೆ ಮುಂದೆ ಆಲೋಚಿಸದೆ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಅವರು ನೀಡುವ ಮೂಲಿಕೆಯಲ್ಲಿ ಔಷಧೀಯ ಗುಣವಿದೆಯೇ? ನಮಗಿರುವ ಕಾಯಿಲೆಗೆ ಅದು ಸೂಕ್ತವೇ ಎಂಬುದನ್ನೂ ತಿಳಿಯದೆ ಬಳಸುವ ಮೂಲಕ ಮತ್ತಷ್ಟು ತೊಂದರೆಗೆ ಸಿಲುಕುತ್ತಿದ್ದಾರೆ.
ಹೀಗೆ ನೂರಾರು ಗಿಡಮೂಲಿಕೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಎಲ್ಲ ಕಾಯಿಲೆಗಳಿಗೂ ನಾವು ಔಷಧವನ್ನು ನೀಡುತ್ತೇವೆ ಎಂದು ಹೇಳಿಕೊಳ್ಳುವ ತಂಡವೊಂದು ನಗರಕ್ಕೆ ಕಾಲಿಟ್ಟಿದೆ. ನಗರದ ಕುವೆಂಪುನಗರ, ಒಂಟಿಕೊಪ್ಪಲು, ಬನ್ನಿಮಂಟಪ, ಮಂಡಿ ಮೊಹಲ್ಲಾ ಹೀಗೆ ಅನೇಕ ಕಡೆಗಳಲ್ಲಿ ಟೆಂಟ್ ಹಾಕುವ ಇವರು ತಮಗೆ ತಿಳಿದ ಅರೆಬರೆ ವೈದ್ಯಕೀಯ ವಿಚಾರಗಳನ್ನು ರಂಜನೀಯವಾಗಿ ತಿಳಿಸುತ್ತಾ, ನಮ್ಮ ಬಳಿ ಇರುವ ಔಷಧದಿಂದ ನಿಮ್ಮ ಕಾಯಿಲೆಯನ್ನು ವಾಸಿ ಮಾಡುತ್ತೇವೆ ಎಂದು ನಂಬಿಕೆ ಹುಟ್ಟಿಸಲು ಯತ್ನಿಸುತ್ತಿದ್ದಾರೆ.
ಆಯುರ್ವೇದ ಪಂಡಿತ ಕುಟುಂಬದವರೆಂದು ಹೇಳಿಕೊಳ್ಳುವ ಬೇರು, ನಾರು, ಬೀಜಗಳನ್ನಿಟ್ಟುಕೊಂಡಿದ್ದಾರೆ. ಅಶ್ವಗಂಧ, ಜಾಜಿಕಾಯಿ, ಶತಾವರಿ, ಕಲ್ಲು ಹೂ, ಗುಬ್ಬಿಕಾಲು, ಹಿಪ್ಪಲಿ, ಅತಿಬಜೆ, ನೆಲಬೇವು, ಗಂಧಕಚೋರ, ಅಜವಾಯು, ಬೆಟ್ಟದ ಬಿಟ್ಟು ಎಂಬ 100ಕ್ಕೂ ಹೆಚ್ಚು ಗಿಡ ಮೂಲಿಕೆಗಳು ನಮ್ಮಲ್ಲಿವೆ ಎಂದು ಹೇಳಿಕೊಳ್ಳುತ್ತಾರೆ.
ಮೈಸೂರಿನಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಕಾಲೂ ಹೋಯ್ತು, ಪ್ರಾಣವೂ ಹೋಯ್ತು!
ಆಯುರ್ವೇದವೆಂದರೆ ಸಾಕು ಜನರಿಗೆ ಏನೋ ಆಕರ್ಷಣೆ. 'ಸರ್ವ ರೋಗಗಳಿಗೂ ದಿವ್ಯ ಔಷಧ ಮಹಾ ಅಶ್ವಗಂಧ ಚೂಣ್ಣ' ಎಂಬ ಕರಪತ್ರವನ್ನು ಮುದ್ರಿಸಿದ್ದಾರೆ. ಅದರಲ್ಲಿ ಹೊಟ್ಟೆ ಕರಗುವುದು, ನರಗಳ ಬಲಹೀನತೆ, ಬಿಪಿ, ಶುಗರ್, ಮೂಲವ್ಯಾಧಿ, ಗ್ಯಾಸ್, ಸಂತಾನ, ಬೆನ್ನು ನೋವು ಹೀಗೆ 28ಕ್ಕೂ ಹೆಚ್ಚು ರೋಗಗಳಿಗೆ ನಮ್ಮಲ್ಲಿ ಔಷಧ ಸಿಗುವುದೆಂದು ಬರೆದುಕೊಂಡಿದ್ದಾರೆ.
ಒಂದು ದೊಡ್ಡ ಟೇಬಲ್ ಮೂಲಕ ನೂರಕ್ಕೂ ಹೆಚ್ಚು ಸ್ಟೀಲ್ ಡಬ್ಬಿಗಳಲ್ಲಿ ವಿವಿಧ ಗಿಡಮೂಲಿಕೆಗಳೆಂದು ಮುಗಿಬೀಳುತ್ತಿದ್ದಾರೆ. ತಮ್ಮ ಬಳಿಗೆ ಬಂದ ಜನರ ದೇಹಚರ್ಯೆಯನ್ನು ಅಳೆಯುವ ಅವರು ಸಣ್ಣಗಿರುವವರನ್ನು ಕಂಡರೆ, ನಿಮಗೆ ನರದೌರ್ಬಲ್ಯವಿದೆ ಎಂದು, ದಪ್ಪಗಿರುವ ವ್ಯಕ್ತಿಗಳನ್ನು ಕಂಡ ಕೂಡಲೆ ನಿಮ್ಮ ಬೊಜ್ಜು ಕರಗಿಸಲು ಒಂದು ತಿಂಗಳ ಔಷಧ ಸಾಕು ಎನ್ನುವ ಮೂಲಕ ಅವರನ್ನು ಮರುಳು ಮಾಡಲು ಯತ್ನಿಸುತ್ತಾರೆ. ಕೆಲ ಸಂದರ್ಭಗಳಲ್ಲಿ ಯಶಸ್ವಿಯೂ ಆಗುತ್ತಾರೆ.
ಆಯುರ್ವೇದ ಎಂದ ಮಾತ್ರಕ್ಕೆ ಎಲ್ಲ ಗಿಡಮೂಲಿಕೆಗಳನ್ನು ಇಷ್ಟಬಂದ ಹಾಗೆ ಔಷಧವಾಗಿ ಬಳಸುವಂತಿಲ್ಲ. ಅದಕ್ಕೂ ಅದರದೇ ಆದ ಕ್ರಮಗಳಿವೆ. ಆಯುರ್ವೇದ ಔಷಧವನ್ನು ಪಡೆಯಬೇಕೆಂದಾದಲ್ಲಿ ತಜ್ಞ ವೈದ್ಯರ ಮಾರ್ಗದರ್ಶನ ಅತ್ಯವಶ್ಯ. ಇಂತಹವರಿಂದ ಆಯುರ್ವೇದಕ್ಕೆ ಕೆಟ್ಟ ಹೆಸರು ಬರುತ್ತಿದೆ.
ನಾಟಿ ವೈದ್ಯರೆಂದರೆ, ಗ್ರಾಮೀಣ ಭಾಗದಲ್ಲಿ ಯಾವುದೋ ಒಂದು ನಿರ್ದಿಷ್ಟ ಕಾಯಿಲೆಗೆ ಮಾತ್ರ ಔಷಧಿ ನೀಡುವ ಪರಂಪರೆ ಮುಂದುವರಿಸುತ್ತಾರೆ. ಎಲ್ಲ ಕಾಯಿಲೆಗೂ ಔಷಧಿ ನೀಡಬೇಕೆಂದರೆ ಅದರಲ್ಲಿ ವೈಜ್ಞಾನಿಕವಾಗಿ ನಿಪುಣತೆ ಹೊಂದಿರಬೇಕು. ಹೀಗಾಗಿ ಜನರು ಇಂತಹ ಕಡೆಗಳಲ್ಲಿ ಯಾವುದೇ ಔಷಧಿಯನ್ನೂ ಪಡೆಯಬಾರದು ಎನ್ನುತ್ತಾರೆ ನುರಿತ ವೈದ್ಯಾಧಿಕಾರಿಗಳು.
ಜನರಿಗೆ ಚಿಕಿತ್ಸೆ ನೀಡಲು ಅವರ ಬಳಿ ಸರ್ಕಾರದಿಂದ ನೀಡಲಾಗುವ ಯಾವುದೇ ವೈದ್ಯಕೀಯ ಪ್ರಮಾಣ ಪತ್ರವಿಲ್ಲ. ಈ ಕುರಿತು ಪ್ರಶ್ನಿಸಿದರೆ, ನಮ್ಮದು ವಂಶಪಾರಂಪರ್ಯವಾಗಿ ಬಂದಿರುವ ವೈದ್ಯ ಕುಟುಂಬ. ನಮಗೇಕೆ ಪತ್ರ ಎಂದು ಮರುಪ್ರಶ್ನೆ ಹಾಕುತ್ತಾರೆ. ಅವರೇ ಜೋಡಿಸಿಟ್ಟಿರುವ ಗಿಡಮೂಲಿಕೆಗಳ ಬಗ್ಗೆ ಕೇಳಿದಲ್ಲಿ ಇಷ್ಟಬಂದ ರೀತಿಯಲ್ಲಿ ಉತ್ತರಿಸುತ್ತಾರೆ. ಒಟ್ಟಾರೆ ಇಂತಹ ನಕಲಿ ವೈದ್ಯರಿಂದ ವೈದ್ಯ ಲೋಕಕ್ಕೆ ಕಳಂಕ. ಯಾವುದಕ್ಕೂ ಜನರಂತೂ ಹುಷಾರಿಗಿರುವುದು ಒಳಿತು!