ಯದುವೀರ್-ತ್ರಿಷಿಕಾ ವಿವಾಹಕ್ಕೆ ಮೈಸೂರು ಅರಮನೆ ಸಿಂಗಾರ
ಮೈಸೂರು, ಜೂನ್ 14 : ಜಗತ್ಪ್ರಸಿದ್ಧ ಐತಿಹಾಸಿಕ ಅಂಬಾವಿಲಾಸ ಅರಮನೆ ಸುಮಾರು 40 ವರ್ಷಗಳ ಬಳಿಕ ರಾಜಮನೆತನದ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗುತ್ತಿದೆ. ಈಗಾಗಲೇ ಅರಮನೆಗೆ ಮದುವೆಯ ಕಳೆ ಬಂದಿದ್ದು, ಸಡಗರ ಸಂಭ್ರಮ ಮನೆಮಾಡಿದೆ.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿವಾಹ ರಾಜಸ್ಥಾನದ ದುಂಗರ್ಪುರ್ ಯುವರಾಣಿ ತ್ರಿಷಿಕಾ ಅವರೊಂದಿಗೆ ಜೂನ್ 27ರಂದು ನಡೆಯಲಿರುವುದರಿಂದ ಸಕಲ ಸಿದ್ಧತೆಗಳ ಕಾರ್ಯ ಇದೀಗ ಭರದಿಂದ ಸಾಗುತ್ತಿದೆ. ಯುವರಾಣಿ ತ್ರಿಷಿಕಾ ಕುಮಾರಿ ಸಿಂಗ್ ಅವರು ಬೆಂಗಳೂರಿನಲ್ಲಿಯೇ ಅಧ್ಯಯನ ಮಾಡುತ್ತಿದ್ದರು. [ಮೈಸೂರು ಮಹಾರಾಜರ 550 ವರ್ಷಗಳ ಭವ್ಯ ಇತಿಹಾಸ]
ಅರಮನೆ ಆವರಣದಲ್ಲಿ ಬೃಹತ್ ಚಪ್ಪರ, ಶಾಮಿಯಾನ ಅಳವಡಿಕೆ, ಅತಿಥಿಗಳಿಗೆ ಆಸನದ ವ್ಯವಸ್ಥೆ ಹೀಗೆ ಸಮಾರೋಪಾದಿಯಲ್ಲಿ ಕಾರ್ಯಗಳು ಸಾಗುತ್ತಿವೆ. ಸುಮಾರು ಆರು ದಿನಗಳ ಕಾಲ ವಿವಾಹ ಮಹೋತ್ಸವ ನಡೆಯಲಿರುವುದರಿಂದ ಜೂನ್ 22ರಿಂದ 28ರವರೆಗೆ ಅರಮನೆಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. [ಯದುವೀರ ಒಡೆಯರ್ ಭಾವಿ ಪತ್ನಿ ರಾಜಸ್ಥಾನಿ ಕುವರಿ]
ಮೈಸೂರಿನಲ್ಲಿ ನಡೆಯಲಿರುವ ವೈಭವದ ಮದುವೆಗೆ ಅಲ್ಲಿನ ಜನರು ಮಾತ್ರವಲ್ಲ ಇಡೀ ಕರ್ನಾಟಕದ ಜನತೆ ಕಾತುರದಿಂದ ಎದುರು ನೋಡುತ್ತಿದೆ. ಸಿದ್ಧತೆಗಳು ಹೇಗಿವೆ ಮುಂದೆ ಓದಿರಿ...
ಸತಿಪತಿಗಳಾಗಲಿದ್ದಾರೆ ತ್ರಿಷಿಕಾ, ಯದುವೀರ್
ಗ್ರೀಷ್ಮ ಋತು ಜೇಷ್ಠ ಮಾಸದ ಸಪ್ತಮಿ, ಜೂನ್ 27ರ ಸೋಮವಾರದಂದು 24 ವರ್ಷದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು 23 ವರ್ಷದ ಸುಂದರಿ ತ್ರಿಷಿಕಾ ಕುಮಾರಿ ಸಿಂಗ್ ಅವರು ಸತಿಪತಿಗಳಾಗಲಿದ್ದಾರೆ.
ಧಾರ್ಮಿಕ ವಿಧಿವಿಧಾನಕ್ಕೆ ಸಕಲ ಸಿದ್ಧತೆ
ವಿವಾಹಕ್ಕೆ ಸಂಬಂಧಿಸಿದಂತೆ ಏಳು ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಸಂಪ್ರದಾಯದಂತೆ 22ರಿಂದಲೇ ವಿವಾಹ ಮಹೋತ್ಸವಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಕೈಂಕರ್ಯಗಳು ಅಂಬಾವಿಲಾಸ ಅರಮನೆಯ ಕಲ್ಯಾಣ ಮಂಟಪದಲ್ಲಿ ಆರಂಭವಾಗಲಿವೆ. 27ರಂದು ಯದುವೀರ್ ಮತ್ತು ತ್ರಿಷಿಕಾರವರ ಕಲ್ಯಾಣ ನಡೆಯಲಿದೆ.
ರಾಜಮಾತೆಯಿಂದ ಆಹ್ವಾನ ವಿತರಣೆ
ಈಗಾಗಲೇ ರಾಜಮಾತೆ ಪ್ರಮೋದಾ ದೇವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಗೆ ವಿವಾಹದ ಆಹ್ವಾನ ಪತ್ರಿಕೆಯನ್ನು ನೀಡಿದ್ದಾರೆ. ಗಣ್ಯರನ್ನು ಆಹ್ವಾನಿಸುವ ಕಾರ್ಯವೂ ಭರದಿಂದ ನಡೆಯುತ್ತಿದೆ.
ದೇಶವಿದೇಶಗಳಿಂದ ಆಗಮಿಸಲಿರುವ ಅತಿಥಿಗಳು
ವಿವಾಹಕ್ಕೆ ಸುಮಾರು 35 ಸಾವಿರಕ್ಕೂ ಹೆಚ್ಚು ಅತಿಥಿಗಳು ದೇಶವಿದೇಶಗಳಿಂದ ಆಗಮಿಸುವ ಸಾಧ್ಯತೆ ಇರುವುದರಿಂದ ಅವರಿಗೆ ಆಸನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈಗಾಗಲೇ ಈ ಕಾರ್ಯಗಳು ಸಮಾರೋಪಾದಿಯಲ್ಲಿ ಸಾಗುತ್ತಿದೆ.
ಏಪ್ರಿಲ್ನಲ್ಲಿ ಲಗ್ನಪತ್ರಿಕೆ ಶಾಸ್ತ್ರ ನಡೆದಿತ್ತು
ಏಪ್ರಿಲ್ನಲ್ಲಿ ಲಗ್ನಪತ್ರಿಕೆ ಶಾಸ್ತ್ರ ನಡೆದು ಯದುವೀರ್ ಅವರ ಜನ್ಮ ನಕ್ಷತ್ರ ಹಾಗೂ ಪಟ್ಟಾಭಿಷೇಕ ನಡೆದ ದಿನ, ಗೋತ್ರ, ನಕ್ಷತ್ರದ ಅನುಗೂಣವಾಗಿ ಜೂನ್ 27ರಂದು ವಿವಾಹದ ದಿನವನ್ನು ನಿಗದಿ ಪಡಿಸಲಾಗಿತ್ತು. ಗ್ರೀಷ್ಮ ಋತು ಜೇಷ್ಠ ಮಾಸದ ಸಪ್ತಮಿ, ಸೋಮವಾರದಂದು ರಾಜಮನೆತನದ ಸಂಪ್ರದಾಯದಂತೆ ವಿವಾಹ ಅದ್ಧೂರಿಯಾಗಿ ನಡೆಯಲಿದೆ.
ನಾಲ್ಕು ದಶಕಗಳ ಹಿಂದೆ ನಡೆದಿದ್ದ ವಿವಾಹ
ನಾಲ್ಕು ದಶಕಗಳ ಹಿಂದೆ, 1976ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತು ಪ್ರಮೋದಾದೇವಿ ಅವರ ವಿವಾಹ ಅಂಬಾವಿಲಾಸ ಅರಮನೆಯಲ್ಲಿ ನಡೆದಿತ್ತು. ಅದು ಹೊರತು ಪಡಿಸಿದರೆ ಇಲ್ಲಿ ಯಾವುದೇ ಮದುವೆ ಶುಭಕಾರ್ಯಗಳು ನಡೆದಿರಲಿಲ್ಲ.
ರಾಜವೈಭವ ಮತ್ತೆ ಮರುಕಳಿಸಲಿದೆ
ಹೀಗಾಗಿ ಇದೀಗ ಯದುವೀರ್ ಅವರ ವಿವಾಹ ನಡೆಯುತ್ತಿದ್ದು, ಈ ಭವ್ಯ ಕ್ಷಣಗಳಿಗಾಗಿ ಜನ ಕಾಯುತ್ತಿದ್ದರೆ, ರಾಜಮನೆತನದಲ್ಲಿ ಮದುವೆ ಓಡಾಟ, ಸಂಭ್ರಮದೊಂದಿಗೆ ಸಿದ್ಧತೆಗಳು ನಡೆಯುತ್ತಿವೆ. ಎಲ್ಲವೂ ರಾಜಮನೆತನದ ಸಂಪ್ರದಾಯದಂತೆ ನಡೆಯಲಿರುವುದರಿಂದ ಗತದಿನಗಳ ರಾಜವೈಭವ ಮತ್ತೆ ಮರುಕಳಿಸಲಿದೆ.