ಮುಂಗಾರು ಮಳೆಗೆ ನಾಗರಹೊಳೆಯಲ್ಲಿ ವನ್ಯಪ್ರಾಣಿಗಳ ಸಂಭ್ರಮ!
ಮೈಸೂರು, ಜುಲೈ 11: ಈ ಬಾರಿಯ ಮುಂಗಾರು ಉತ್ತಮವಾಗಿರುವ ಕಾರಣ ಈಗಾಗಲೇ ಕೆರೆಕಟ್ಟೆಗಳು ತುಂಬಿದ್ದು, ಅರಣ್ಯಗಳೆಲ್ಲವೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಕಾಡಾನೆ, ಜಿಂಕೆ ಸೇರಿದಂತೆ ವನ್ಯ ಪ್ರಾಣಿಗಳು ಸಂಭ್ರಮದಿಂದ ಎಲ್ಲೆಂದರಲ್ಲಿ ಓಡಾಡುತ್ತಿವೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಈ ಬಾರಿ ಹೊಸ ಕಳೆ ಬಂದಿದೆ. ಬೇಸಿಗೆಯಲ್ಲಿ ಬಿಸಿಲಿಗೆ ಬಾಡಿದ ಮತ್ತು ಬೆಂಕಿಗೆ ಆಹುತಿಯಾಗಿದ್ದ ಕುರುಚಲು ಕಾಡುಗಳು ಮಳೆಗೆ ಮತ್ತೆ ಚಿಗುರಿ ಹಸಿರಾಗಿವೆ. ಕೆಲವೆಡೆ ಬಿದಿರು ಮೆಳೆಗಳು ಹುಟ್ಟುತ್ತಿವೆ. ಹುಲ್ಲುಗಳು ಚಿಗುರಿದ್ದು, ಪ್ರಾಣಿ ಪಕ್ಷಿಗಳು ನೆಮ್ಮದಿಯಾಗಿ ಎಲ್ಲೆಂದರಲ್ಲಿ ಸಂಚರಿಸುತ್ತಿವೆ.
ನಾಗರಹೊಳೆ ರಾತ್ರಿ ಸಂಚಾರ ನಿರ್ಬಂಧಕ್ಕೆ ಸುಪ್ರೀಂ ಸಮ್ಮತಿ
ಕಳೆದ ಕೆಲವು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದ ಕಾರಣ ಅರಣ್ಯದಲ್ಲಿದ್ದ ಕೆರೆ ಕಟ್ಟೆಗಳು ಭರ್ತಿಯಾಗದೆ ತೊಂದರೆಯಾಗಿತ್ತು. ಪ್ರಾಣಿ ಪಕ್ಷಿಗಳು ನೀರನ್ನರಸಿ ಬೇರೆಡೆಗೆ ಹೋಗುವಂತಹ ಅಷ್ಟೇ ನಾಡಿನೊಳಗೆ ಬರುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಬಾರಿ ಉತ್ತಮವಾಗಿ ಮಳೆಯಾಗಿರುವುದರಿಂದ ಬಹುತೇಕ ಸಮಸ್ಯೆಗಳು ಪರಿಹಾರವಾಗಿ ನೆಮ್ಮದಿಯ ವಾತಾವರಣ ಅರಣ್ಯದಲ್ಲಿ ನೆಲೆಸಿದೆ.
ಅರಣ್ಯದಲ್ಲಿ ಹರಿಯುವ ಜೀವನದಿ ಲಕ್ಷ್ಮಣತೀರ್ಥನದಿ ಮೈದುಂಬಿ ಹರಿಯುತ್ತಿದ್ದರೆ, ಚನ್ನಮ್ಮನಕಟ್ಟೆ, ಎರೆಕಟ್ಟೆ, ಮಂಟಳ್ಳಿಕೆರೆ, ಮಾದಳ್ಳಿಕಟ್ಟೆ ಮುದಗನೂರುಕೆರೆ, ಬಿಲ್ಲೆನಹೊಸಹಳ್ಳಿಕೆರೆ, ಭೀಮನಕಟ್ಟಿ, ಬಾಣೇರಿಕೆರೆ ಸೇರಿದಂತೆ ಹಲವು ಕೆರೆ-ಕಟ್ಟೆಗಳು ತುಂಬಿವೆ. ಕಳೆದ ಬಾರಿ ಈ ಕೆರೆಗಳ ಪೈಕಿ ಹಲವು ಭರ್ತಿಯಾಗದೆ ತೊಂದರೆಯಾಗಿತ್ತು. ಹೀಗಾಗಿ ಬೇಸಿಗೆಯಲ್ಲಿ ಟ್ಯಾಂಕರ್ ಮತ್ತು ಬೋರ್ವೆಲ್ ಮೂಲಕ ಕೆರೆಗಳಿಗೆ ನೀರು ತುಂಬಿಸಿ ವನ್ಯಪ್ರಾಣಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆಯನ್ನು ಮಾಡಿಕೊಡಲಾಗಿತ್ತು. ಆದರೆ ಈ ಬಾರಿ ಈಗಾಗಲೇ ಕೆರೆಗಳು ಭರ್ತಿಯಾಗಿರುವುದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಣಿಸದು ಎಂದರೆ ತಪ್ಪಾಗಲಾರದು.
ನಾಗರಹೊಳೆ: ಅನಾರೋಗ್ಯದಿಂದ ಐರಾವತ ಆನೆ ಸಾವು
ಹಾಗೆನೋಡಿದರೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ 643 ಚ.ಕಿ.ಮೀ ವ್ಯಾಪ್ತಿ ಹೊಂದಿದ್ದು, ವನ್ಯಪ್ರಾಣಿಗಳ ಆಹಾರ ಮತ್ತು ಕಾಡಿನ ರಕ್ಷಣೆ ದೃಷ್ಠಿಯಿಂದ ನಾಗರಹೊಳೆ, ಕಲ್ಲಹಳ್ಳ, ವೀರನಹೊಸಹಳ್ಳಿ, ಹುಣಸೂರು, ಆನೆಚೌಕೂರು, ಅಂತರಸಂತೆ, ಡಿ.ಬಿ.ಕುಪ್ಪೆ, ಮೇಟಿಕುಪ್ಪೆ ಹೀಗೆ ಎಂಟು ವಲಯಗಳಾಗಿ ವಿಂಗಡಿಸಲಾಗಿದೆ.
ಈ ಪೈಕಿ ವೀರನಹೊಸಳ್ಳಿ, ಹುಣಸೂರು ಹಾಗೂ ಮತ್ತಿಗೋಡು ವಲಯಗಳಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಒಟ್ಟಾರೆಯಾಗಿ ಈ ಬಾರಿಯ ಮುಂಗಾರು ಒಂದಷ್ಟು ನೆಮ್ಮದಿಯನ್ನು ತಂದಿದ್ದಂತೂ ನಿಜ. ಹೀಗಾಗಿ ಕಾಡಾನೆಗಳು ಸೇರಿದಂತೆ ವಿವಿಧ ಪ್ರಾಣಿಗಳು ಸ್ವಚ್ಛಂದವಾಗಿ ಓಡಾಡುತ್ತಿರುವುದು ಈಗ ಗೋಚರಿಸುತ್ತಿದೆ.