ಅಭಿಮಾನಿಯ ಅಂತಿಮ ದರ್ಶನಕ್ಕೆ ಬರುತ್ತಾರಾ ದರ್ಶನ್?
ಮೈಸೂರು, ಮೇ 5: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪ್ಪಟ ಅಭಿಮಾನಿಯೋರ್ವ ಅನಾರೋಗ್ಯದಿಂದ ಮೃತಪಟ್ಟಿದ್ದು, ತಾನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೋಡಬೇಕೆಂದು ಕೊನೆಯ ಆಸೆಯನ್ನು ತಿಳಿಸಿದ್ದರು. ಇದರಿಂದ ಮೃತರ ಕುಟುಂಬ ದರ್ಶನ್ ಅವರ ನಿರೀಕ್ಷೆಯಲ್ಲಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೊಪ್ಪಲು ಗ್ರಾಮದಲ್ಲಿನ ನಿವಾಸಿ ಭಾಸ್ಕರ್ ರೆಡ್ಡಿ (29) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಆದರೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಭಾಸ್ಕರ್ ದರ್ಶನ್ ಅವರನ್ನು ನೋಡಬೇಕೆಂಬ ಮಹಾದಾಸೆಯಿತ್ತು ಎನ್ನಲಾಗಿದ್ದು, ಅವರು ತಮ್ಮ ಕೊನೆ ಆಸೆಯನ್ನು ತಿಳಿಸಿದ್ದರು.
ಮೈಸೂರು: ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ದರ್ಶನ್
ಆದರೆ ಅವರ ಆಸೆ ಈಡೇರಿರಲಿಲ್ಲ. ದರ್ಶನ್ ಪ್ರಚಾರ ನಿಮಿತ್ತ ಮೈಸೂರಿಗೆ ಆಗಮಿಸಿದ್ದು, ದರ್ಶನ್ ಆಗಮಿಸುವವರೆಗೂ ಭಾಸ್ಕರ್ ಅಂತ್ಯಸಂಸ್ಕಾರ ಮಾಡದಂತೆ ಸ್ನೇಹಿತರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಮೈಸೂರಿಗೆ ದರ್ಶನ್ ಬಂದಿದ್ದು, ವಿಷಯ ತಿಳಿದು ಒಮ್ಮೆಯಾದರೂ ಭೇಟಿ ಮಾಡಬಹುದೆಂಬ ನಿರೀಕ್ಷೆಯಲ್ಲಿದೆ ಕುಟುಂಬ ವರ್ಗ.