ಮೈಸೂರಿನ 'ಜ್ಯೋತಿ'ಗೆ ಕರಕುಶಲ ಕಲೆಯೇ ಬಾಳಿನ ಬೆಳಕು
ರಂಗೋಲಿ ಬಿಡಿಸೋದು ಕಸೂತಿ ಹಾಕೋದು ಕಲಿತರೆ ಅದರಲ್ಲೇನು ಹೊಟ್ಟೆಪಾಡು ಕಳೆಯುತ್ತಾ, ಬದುಕಿನ ಕಷ್ಟಕಾರ್ಪಣ್ಯ ನೀಗಿಸಬಹುದಾ ಎಂದು ಪ್ರಶ್ನೆ ಮಾಡುವ ಮಹಿಳೆಯರ ಹುಬ್ಬೇರಿಸುವಂತೆ ಮಾಡುವಲ್ಲಿ ಮೈಸೂರಿನ ಯುವತಿಯ ಕಾರ್ಯವೈಖರಿ ಎಲ್ಲರಿಗೂ ಮಾದರಿ. ಕಲೆ ಮೂಲಕ ಸಾರ್ಥಕ ಬದುಕು ನಡೆಸುತ್ತಿರುವ ಆತ್ಮತೃಪ್ತಿ ಇವರ ಪಾಲಿಗೆ.
ಮೈಸೂರಿನ ಜ್ಯೋತಿ ಎಂಬಾಕೆಯೇ ತನ್ನಲ್ಲಿನ ಕಲೆಗಳ ಮೂಲಕ ಎಲ್ಲರಿಗೂ ಚಿರಪರಿಚಿತಳಾದ ಯುವತಿ. ಮನೆಯ ಅಲಂಕಾರಿಕ ವಸ್ತುಗಳನ್ನು ತಯಾರು ಮಾಡುವುದರಿಂದ ಹಿಡಿದು, ವಿಭಿನ್ನ ಶೈಲಿಯಲ್ಲಿ ರಂಗೋಲಿ ಹಾಕುವವರೆಗೂ ಕಲೆಯ ವಿವಿಧ ರೂಪಗಳು ಇವರಿಗೆ ಕರಗತವಾಗಿವೆ. ಈ ಕಾರ್ಯವನ್ನು ಇವರು ಸುಮಾರು 10 ವರ್ಷಗಳಿಂದ ಮಾಡಿಕೊಂಡು ಬಂದಿದ್ದು ತಂದೆ, ತಾಯಿ ಹಾಗೂ ಇಬ್ಬರು ಸಹೋದರರನ್ನು ಸಲಹುತ್ತಿದ್ದಾರೆ.[ಅಗಲಿದ ನೆನಪು ಮರೆಸಿ ಶಾಶ್ವತ ಸಂತಸ ನೀಡುವ 3ಡಿ ಕಾಸ್ಟಿಂಗ್]
ಸ್ವಾವಲಂಬಿ ಬದುಕಿನ ರಹದಾರಿ, ಮನಸ್ಸನ್ನು ಸದಾ ಉತ್ಸಾಹದಲ್ಲಿಡುವ ಚೈತನ್ಯವಾದ ಕಲೆಗಳಲ್ಲಿ ಕರಕುಶಲ ವಸ್ತುಗಳ ತಯಾರಿಕೆಯೂ ಒಂದು. ಜ್ಯೋತಿಯವರು ಕರಕುಶಲ ವಸ್ತುಗಳನ್ನು ಮಾಡುವಲ್ಲಿ ನಿಸ್ಸೀಮರು. ಇವರು ಬಟ್ಟೆಯಿಂದಲೇ ಹ್ಯಾಂಡ್ ಮೇಡ್ ಮೊಬೈಲ್ ಪೌಚ್ ತಯಾರಿಕೆ, ಮದುವೆ, ಶುಭ ಸಮಾರಂಭಗಳಲ್ಲಿ ಸೀರೆ ಹಾಗೂ ಬ್ಲೌಸ್ ಗಳಿಗೆ ವಿವಿಧ ಮಾದರಿಯ ವಿನ್ಯಾಸವನ್ನು ಮಾಡುತ್ತಾರೆ.
ಮನೆಯ ಶೋಕೇಸ್ ನಲ್ಲಿ ಇಡಲು ಅನುಕೂಲವಾಗುವ ಮತ್ತು ಆಕರ್ಷಿಸುವ ಅಲಂಕಾರಿಕ ವಸ್ತುಗಳನ್ನು ಕೂಡ ಇವರು ಯಾವುದೇ ತ್ರಾಸಿಲ್ಲದೆ ತಯಾರಿಸುತ್ತಾರೆ. ಸದಾ ಒಂದಲ್ಲ ಒಂದು ರೀತಿಯ ಹೊಸತನವನ್ನು ಹುಡುಕುತ್ತಿರುವ ಅವರು ಏನಾದರೊಂದು ಮಾಡಬೇಕೆಂಬ ಹಠತೊಟ್ಟು ಅದರಲ್ಲಿ ಸಂಪೂರ್ಣ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದಾರೆ.['ಕಿರಣ್ ಸುಬ್ಬಯ್ಯ' ಕೈಯಿಂದ ಮೂಡಿದ ಶಿಲ್ಪಗಳು ಮಾತಾಡ್ತಾವೆ]
ಜ್ಯೋತಿ ಏನೆಲ್ಲಾ ವಸ್ತುಗಳನ್ನು ತಯಾರಿಸುತ್ತಾರೆ?
ಮನೆಯ ಅಲಂಕಾರಕ್ಕೆ ಬೇಕಾದ ಅಲಂಕೃತ ವಸ್ತುಗಳು, ದಸರಾ ವೇಳೆ ಅಲಂಕರಿಸುವ ಗೊಂಬೆಗಳು, ಬಟ್ಟೆಯಿಂದ ತಯಾರಿಸಲಾಗುವ ಹಾರ, ಇತ್ತೀಚಿನ ಟ್ರೆಂಡ್ ಆದ ಸ್ಟೋನ್ ವರ್ಕ್, ಸ್ಯಾಟೀನ್ ಟೇಪ್ ನಿಂದ ತೋರಣ, ಫೆಯಿಲ್ ಶೀಟ್ ನಿಂದ ಆನೆಯ ಚಿತ್ರಗಳು ಹಾಗೂ ಅಪ್ಪಟ ಹ್ಯಾಂಡ್ ಮೇಡ್ ಕಲಾಕೃತಿ, ಕುಂದನ್ಸ್ ನಿಂದ ತಯಾರಿಸಿರುವ ರಂಗೋಲಿ, ಕಸೂತಿ ಹೀಗೆ ಜನ ಇಷ್ಟಪಡುವ ವಸ್ತುಗಳನ್ನೇ ತಯಾರಿಸಿಕೊಂಡು ಹೀಗೂ ಬದುಕು ಕಾಣಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.[ಗೆರೆಗಳೊಂದಿಗೆ ಆಟವಾಡುತ್ತಾ ಬದುಕು ಕಟ್ಟಿಕೊಂಡ ಕಲಾವಿದ]