ಪ್ರೊ.ಕೆ.ಎಸ್.ರಂಗಪ್ಪ-ಗೋ.ಮಧುಸೂದನ್ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧ
ಮೈಸೂರು, ಜುಲೈ.2 : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಗಳ ಕುರಿತು ಪರಸ್ಪರ ವಾಗ್ವಾದ ನಡೆಸುತ್ತಿದ್ದ ವಿಶ್ರಾಂತ ಕುಲಪತಿ ಪ್ರೊ. ಕೆ. ಎಸ್.ರಂಗಪ್ಪ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ನಡುವಿನ ಬಹಿರಂಗ ಚರ್ಚೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ವೇದಿಕೆ ಕಲ್ಪಿಸಿದೆ.
ಭ್ರಷ್ಟಾಚಾರ ಆರೋಪ ಕುರಿತು ಇಬ್ಬರು ಆರೋಪ - ಪ್ರತ್ಯಾರೋಪಗಳನ್ನು ಮಾಡುತ್ತ ಬಹಿರಂಗ ಚರ್ಚೆಗೆ ಆಹ್ವಾನ ನೀಡುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘವು ಜು.3 ರಂದು, ನಾಳೆ ಬೆಳಗ್ಗೆ 10 ಗಂಟೆಗೆ ಪತ್ರಕರ್ತರ ಭವನದಲ್ಲಿ ಬಹಿರಂಗ ಚರ್ಚೆಗೆ ವೇದಿಕೆ ಕಲ್ಪಿಸಿ ಇಬ್ಬರಿಗೂ ಆಹ್ವಾನ ನೀಡಿದೆ.
ಕರ್ನಾಟಕ ರಾಜ್ಯ ಮುಕ್ತ ವಿವಿ ಕರ್ಮಕಾಂಡ: ಚಾಲೆಂಜ್ ಸ್ವೀಕರಿಸಿದ ಮಾಜಿ ಉಪಕುಲಪತಿ
ಜೂ.20 ರಂದು ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಉನ್ನತ ಶಿಕ್ಷಣ ಇಲಾಖೆ ಸಲಹೆಗಾರ ಹುದ್ದೆ ನೀಡಬಾರದೆಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಮತ್ತು ಮಾಜಿ ಸದಸ್ಯ ಗೋ.ಮಧುಸೂದನ್ ಒತ್ತಾಯಿಸಿದ್ದರು.
ಜೂ.23ರಂದು ಮಾಧ್ಯದಮವರೊಂದಿಗೆ ಮಾತನಾಡಿದ್ದ ರಂಗಪ್ಪ ಅವರು, ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಗೋ.ಮಧುಸೂದನ್, ರವಿಕುಮಾರ್ ತಾಕತ್ತಿದ್ದರೆ ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದರು.
ಮೇ 27ರಂದು ಗೋ.ಮಧುಸೂದನ್ ಅವರು ಪೊ.ಕೆ.ಎಸ್.ರಂಗಪ್ಪ ಅವರ ಸವಾಲು ಸ್ವೀಕಾರ ಮಾಡಿದ್ದೇನೆ. ಉನ್ನತ ಶಿಕ್ಷಣ ಸಚಿವರೇ ವೇದಿಕೆ ಸಿದ್ಧಪಡಿಸಲಿ ಎಂದು ತಿಳಿಸಿದ್ದರು. ಜೂ.29 ರಂದು .ಕೆ. ಎಸ್.ರಂಗಪ್ಪ ಅವರು ಗೋ. ಮಧುಸೂದನ್ ಅವರೇ ವೇದಿಕೆ ನಿಗದಿಪಡಿಸಿದರೆ ಬಹಿರಂಗ ಚರ್ಚೆಗೆ ಬರಲು ಸಿದ್ಧವೆಂದು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಬಹಿರಂಗ ಚರ್ಚೆಗೆ ವೇದಿಕೆ ಕಲ್ಪಿಸಿದೆ. ಈ ಸಂಬಂಧ ಮಾತನಾಡಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ ಅವರು, ಗೋ.ಮಧುಸೂದನ್ ಹಾಗೂ ಪ್ರೊ ರಂಗಪ್ಪರ ಮೇಲೆ ಮಾಡುತ್ತಿರುವ ಆರೋಪ-ಪ್ರತ್ಯಾರೋಪ ಗಳಿಗೆ ತಾರ್ಕಿಕ ಅಂತ್ಯ ಹಾಡುವ ನಿಟ್ಟಿನಲ್ಲಿ ಪತ್ರಕರ್ತರ ಸಂಘವು ಮುಂದಾಗಿದ್ದು, ಈ ನಿಟ್ಟಿನಲ್ಲಿ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.