ಮೈಸೂರು ಇಂದಿರಾ ಕ್ಯಾಂಟೀನ್ ನ ತಿಂಡಿ 7.30ಕ್ಕೆ ಖಾಲಿ, ಜೋರು ಗಲಾಟೆ
Recommended Video
ಮೈಸೂರು, ಜನವರಿ 13: ಇಂದಿರಾ ಕ್ಯಾಂಟೀನ್ ನಲ್ಲಿ ಶನಿವಾರ ಬೆಳಗ್ಗೆ ಬೇಗ ತಿಂಡಿ ಖಾಲಿಯಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ 7.30ರ ಹೊತ್ತಿಗೆ ತಿಂಡಿ ಖಾಲಿಯಾಗಿತ್ತು ಎಂಬ ಕಾರಣಕ್ಕೆ ಈ ರೀತಿ ಸಿಟ್ಟು ಹೊರ ಹಾಕಿದ್ದಾರೆ. ಅರಮನೆ ಸಮೀಪದ ಕಾಡಾ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಈ ಘಟನೆ ನಡೆದಿದೆ.
ಇದರಿಂದ ಆಕ್ರೋಶಗೊಂಡ ಕೆಲ ಕೂಲಿ ಕಾರ್ಮಿಕರು, ಹೊಟ್ಟೆ ಹೊಡೆದುಕೊಂಡು, 'ಹಸಿವು ಸ್ವಾಮಿ' ಎಂದು ಘೋಷಣೆ ಕೂಗಿದ್ದರು. ನೂರಾರು ಸಂಖ್ಯೆಯಲ್ಲಿ ಜನರು ಕ್ಯಾಂಟೀನ್ ಗೆ ಬಂದಿದ್ದರು. ಈ ವೇಳೆ 'ತಿಂಡಿ ಖಾಲಿಯಾಗಿದೆ' ಎಂದು ಹೇಳಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಅಂದಹಾಗೆ ಶುಕ್ರವಾರವಷ್ಟೇ ಇಂದಿರಾ ಕ್ಯಾಂಟೀನ್ ಅನ್ನು ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದರು.
ಮೈಸೂರು: ಇಂದಿರಾ ಕ್ಯಾಂಟಿನ್ ಲೋಕಾರ್ಪಣೆಗೊಳಿಸಿದ ಸಿದ್ದರಾಮಯ್ಯ
ಎರಡನೇ ದಿನವೇ ಹೀಗೆ ಬೆಳಗಿನ ತಿಂಡಿ ಸಿಕ್ಕಿಲ್ಲ. ಇದರಿಂದ ಕೆರಳಿದ ಜನರು ಕ್ಯಾಂಟೀನ್ ನ ಮುಂಭಾಗವೇ ಆಕ್ರೋಶ ಹೊರಹಾಕಿದರು. ಇದೆಲ್ಲ ಕೇವಲ ವೋಟಿಗಾಗಿ ಮಾಡುತ್ತಿರುವ ಗಿಮಿಕ್. ಚುನಾವಣೆ ಮುಗಿದ ಬಳಿಕ ಇಂದಿರಾ ಕ್ಯಾಂಟೀನ್ ಬಂದ್ ಆಗಲಿವೆ ಎಂದು ಹರಿಹಾಯ್ದರು.
ನಮ್ಮ ಹಸಿವು ನಿಮಗೆ ಗೊತ್ತಾಗುವುದಿಲ್ಲ ಸ್ವಾಮಿ ಎಂದರು. ಇಂದಿರಾ ಕ್ಯಾಂಟೀನ್ ಎದುರು ವ್ಯವಸ್ಥಾಪಕರ ವಿರುದ್ಧ ಪ್ರತಿಭಟನೆ ನಡೆಸಿದರು. ಅವಧಿಗೂ ಮುಂಚೆಯೇ ಇಂದಿರಾ ಕ್ಯಾಂಟೀನ್ ನಲ್ಲಿ ತಿಂಡಿ ಮುಗಿದಿದೆ ಎಂದು ಆರೋಪಿಸಿ, ತಿಂಡಿ ಬೇಕು - ಬೇಕು ಎಂದು ಜನ ಕೂಗಾಡಿದರು. ಸ್ಥಳಕ್ಕೆ ಬಂದ ಕೆ.ಆರ್.ಠಾಣೆ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದರು. ಆಕ್ರೋಶವಾಗಿದ್ದ ಜನರನ್ನು ಕಾಡಾ ಕಚೇರಿ ಆವರಣದಿಂದ ಪೊಲೀಸರು ಹೊರಗೆ ಕಳುಹಿಸಿದರು.