ಸುಪಾರಿ ನೀಡಿದ್ದ ಮೈಸೂರು ಯುವತಿ ಪೊಲೀಸರ ಅತಿಥಿ
ಮೈಸೂರು, ಅಕ್ಟೋಬರ್ 27: ಮದುವೆಗೆ ವಿರೋಧ ಮಾಡಿದರು ಎಂಬ ಕಾರಣಕ್ಕೆ ತಂದೆ-ಮಗನ ಮೇಲೆ ಹಲ್ಲೆ ಮಾಡಿಸಿದ್ದ ಪ್ರಕರಣದಲ್ಲಿ ಇಲ್ಲಿನ ನರಸಿಂಹರಾಜ ಪೊಲೀಸ್ ಠಾಣೆ ಪೊಲೀಸರು ಯುವತಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಚಾಮರಾಜಪುರಂನ ಮಂಜುನಾಥ ಅವರ ಮಗಳು ಮೋನಿಶಾ, ಆಕೆ ಸ್ನೇಹಿತರಾದ ಗೌರವ್, ರಾಘವೇಂದ್ರ ಬಂಧಿತರು.
ಇನ್ನು ಮೋನಿಶಾಳ ಪ್ರಿಯಕರ ಸಿರಾಜ್ ನ ಬಂಧನಕ್ಕಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ನರಸಿಂಹರಾಜ ಮೊಹಲ್ಲಾದ ಮನೆಗೆ ನುಗ್ಗಿ ಮುಕ್ತಾರ್ ಹಾಗೂ ಅವರ ಮಗ ಮೋಹಿನ್ ಅಹಮ್ಮದ್ ಅವರ ಮೇಲೆ ಭಾನುವಾರ ರಾತ್ರಿ ಹಲ್ಲೆ ನಡೆಸಲಾಗಿತ್ತು. ಮೋಹಿನ್ ಭಾವಮೈದುನ ಸಿರಾಜ್ ಮಾಡೆಲಿಂಗ್ ನಲ್ಲಿ ಇದ್ದಾರೆ. ಆತ ಮೋನಿಶಾಳಾನ್ನು ಪ್ರೀತಿಸುತ್ತಿದ್ದ. ಇಬ್ಬರೂ ಮದುವೆಯಾಗಬೇಕು ಎಂದಿದ್ದರು.[ಮದುವೆಗೆ ಅಡ್ಡಿಯಾದರೆಂದು ಜನ ಬಿಟ್ಟು ಹೊಡೆಸಿದಳೆ ಯುವತಿ?]
ಆದರೆ, ಇದಕ್ಕೆ ಮೋಹಿನ್ ವಿರೋಧ ಮಾಡಿದ್ದರು. ಇದೇ ವಿಚಾರವಾಗಿ ಮೋಹಿನ್ ಹಾಗೂ ಮೋನಿಶಾ ಮಧ್ಯೆ ಜಗಳವಾಗಿತ್ತು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಯುವತಿಯು ತನ್ನ ಸ್ನೇಹಿತರಿಗೆ ಸುಪಾರಿ ನೀಡಿ, ಹಲ್ಲೆ ಮಾಡಿಸಿದ್ದು ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.