"ಮೈಸೂರು: ಕನ್ನಡ ಸಾಹಿತ್ಯ ಸಮ್ಮೇಳನದ ರಥದ ವಿನ್ಯಾಸ ಕದ್ದಿದ್ದಂತೆ!"
ಮೈಸೂರು, ನವೆಂಬರ್ 13 : ಕಳ್ಳತನ ನಡೆಯುವುದು ಮನೆಗೆ ಅಥವಾ ಮಳಿಗೆ, ಬ್ಯಾಂಕ್ ಗಳಿಗೆ. ಅದಕ್ಕೂ ಸಾಹಿತ್ಯ ಸಮ್ಮೇಳನಕ್ಕೂ ಏನು ಸಂಬಂಧ ಎಂದು ಅಚ್ಚರಿ ಪಡಬೇಡಿ. ಕೃತಿ ಚೌರ್ಯ ಮಾಡಿ ಅಕ್ಷರವನ್ನು ಅಚ್ಚಳಿಯದಂತೆ ಮಾಡುವುದು ಮಾಮೂಲಿ. ಆದರೆ ಸಾಹಿತ್ಯ ಸಮ್ಮೇಳನದ ಕನ್ನಡ ತೇರಿನ ವಿನ್ಯಾಸ ಕದ್ದಿದ್ದಂತೆ!
ಅರೇ.. ಇದೇನು ಸುದ್ದಿ ಎಂದಿರಾ! ಮುಂದಿನ ವಾರ ನ.24ರಿಂದ ಮೂರು ದಿನ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ವಾಹನ 'ಕನ್ನಡ ತೇರು' ನಕಲು ಎಂದು ಹೇಳಲಾಗುತ್ತಿದ್ದು ಇದು ಜಿಲ್ಲಾಡಳಿತ ಹಾಗೂ ಸಾಹಿತ್ಯ ಪರಿಷತ್ತಿಗೆ ಮುಜುಗರ ಉಂಟು ಮಾಡಿದೆ.
ಹಾಗಾದರೆ ರಥದ ವಿನ್ಯಾಸ ಹೇಗಿದೆ?
ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜನ್ಮ ಶತಮಾನೋತ್ಸವದ ಅಂಗವಾಗಿ ರಾಜೇಂದ್ರ ಜ್ಯೋತಿಯಾತ್ರೆ ರಥದ ನಕಲು ಪ್ರತಿ ಇದಾಗಿದೆ. ರಥ ಮೂಲಸ್ವರೂಪದಲ್ಲಿ ಯಾವುದೇ ಬದಲಾವಣೆ ಇಲ್ಲ. ವಿಷಯಕ್ಕೆ ತಕ್ಕಂತೆ ಮೇಲ್ಭಾಗದಲ್ಲಿ ಕೆಲ ಮಾರ್ಪಾಡು ಮಾಡಿಕೊಳ್ಳಲಾಗಿದೆ. ವಾಹನವನ್ನು ಫೈಬರ್ ಮೂಲಕ ಸುತ್ತೂರು ಮಠದ ಮಾದರಿಯಲ್ಲಿ ರಥವನ್ನು ಸೃಷ್ಟಿಸಲಾಗಿತ್ತು. ಕಲ್ಲಿನ ಕಂಬಗಳು, ಕಲ್ಲಿನ ಚಕ್ರ, ಜೋಡಿ ಆನೆ- ನಂದಿ, ಸುತ್ತಲೂ ಆನೆ ಬಳಸಿ ಕಲಾತ್ಮಕ ಕೆತ್ತನೆ ಇತ್ತು. ರಥದಲ್ಲಿ ಮಂಟಪವಿರಿಸಿ ಅದರ ಮೇಲೆ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.
ಮೈಸೂರು: ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾದ ಕನ್ನಡ ತೇರು
ಎರಡೂ ರಥವನ್ನು ತಯಾರಿಸಿದವರು ಒಬ್ಬರೇ !
ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ಬಳಸುವ 'ಕನ್ನಡ ತೇರು' ಹೆಸರಿನ ಈ ವಾಹನವನ್ನು ಹಲವರು ಉದ್ಘಾಟನೆ ದಿನದಂದ ಗಮನಿಸಿದರು ಅಂದೇ ಅನುಮಾನ ಕೂಡ ಹುಟ್ಟಿತು. ಇದೇ ವೇಳೆ ಪರಿಸೀಲಿಸಿದಾಗ ಎರಡೂ ರಥವನ್ನು ತಯಾರಿಸಿದವರು ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ. ಇವರನ್ನು ಸಂಪರ್ಕಿಸಲು ಸಹ ಪ್ರಯತ್ನಿಸಲಾಯಿತಾದರೂ ಅವರು ಉತ್ತರಿಸಲು ನಿರಾಕರಿಸಿದರು.
ಎರಡೂ ರಥದಲ್ಲೂ ಒಂದೇ ಸಾಮ್ಯತೆ
ಇನ್ನು ಎರಡೂ ರಥದಲ್ಲೂ ಏಕ ಸ್ವಾಮ್ಯತೆ ಕಂಡುಬರುತ್ತಿದ್ದು, ರಾಜೇಂದ್ರ ಶ್ರೀಗಳ ರಥದ ಮೂಲ ಮಾದರಿಯನ್ನು ಕನ್ನಡ ತೇರಿನ ರಥದಲ್ಲೂ ಹಾಗೆ ಉಳಿಸಿಕೊಳ್ಳಲಾಗಿದೆ. ಮರದ ಬಣ್ಣದ ಮಂಟಪದ ಕಂಬಗಳು ಸೇರಿ ರಥದ ಹಸಿರು ಬಣ್ಣ ಬದಲಿಸಿ, ಕನ್ನಡ ತೇರಿನ ರಥಕ್ಕೆ ಸಂಪೂರ್ಣವಾಗಿ ಹಳದಿ ಬಣ್ಣ ಬಳಿಯಲಾಗಿದೆ. ಹಳೇ ರಥದ ಮುಂದೆ ಇದ್ದ ಜೋಡಿ ನಂದಿ ವಿಗ್ರಹವು ಇಲ್ಲಿ ಹಿಂಭಾಗಕ್ಕೆ ಬಂದಿದ್ದರೆ, ಹಿಂದೆ ಇದ್ದ ಜೋಡಿ ಆನೆಗಳು ಮುಂಭಾಗಕ್ಕೆ ಸ್ಥಳಾಂತರಗೊಂಡಿವೆ. ರಥ ಎರಡು ಬದಿಯಲ್ಲಿ ಸುತ್ತೂರು ಮಠ ಮಾದರಿ ಬದಲಿಗೆ ಮೈಸೂರು ಅರಮನೆ ಮತ್ತು ಕರ್ನಾಟಕ ನಕಾಶೆಯಲ್ಲಿ ಭುವನೇಶ್ವರಿದೇವಿ ಚಿತ್ರ ಹಾಕಲಾಗಿದೆ. ಉಳಿದಂತೆ ಕಲ್ಲಿನ ಕಂಬಗಳು, ಕಲ್ಲಿನ ಚಕ್ರ, ರಥ ಸುತ್ತಲಿನ ಆನೆ ಬಳಸಿರುವ ಕಲಾತ್ಮಕ ಕೆತ್ತನೆ ಯಥಾವತ್ತಾಗಿದೆ.
ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಸಜ್ಜಾಗುತ್ತಿದೆ ಮಲ್ಲಿಗೆ ಸಾರೋಟು!
ಇಲ್ಲೂ ರಥದ ಮೇಲೆ ಮಂಟಪವಿದೆ. ಆದರೆ, ಅದರ ಮಧ್ಯಭಾಗದಲ್ಲಿ ಮುಚ್ಚಲಾಗಿದೆ. ಈ ಭಾಗದ ಎಡ-ಬಲ ಬದಿಯಲ್ಲಿ ಭುವನೇಶ್ವರಿದೇವಿಯ ಪ್ರತಿಮೆ ಇಡಲಾಗಿದೆ. ವಾಹನದ ಮುಂಭಾಗದಲ್ಲಿ ಒಂದೆಡೆ ಕರ್ನಾಟಕ ಸರ್ಕಾರದ ಲಾಂಛನ, ಇನ್ನೊಂದೆಡೆ ಕಸಾಪ ಲಾಂಛನ, ಅದರ ಕೆಳಗೆ ಸಮ್ಮೇಳನದ ಲಾಂಛನ, 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೊ.ಚಂದ್ರಶೇಖರ್ ಪಾಟೀಲ ಅವರ ಭಾವಚಿತ್ರ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಕಸಾಪ ಅಧ್ಯಕ್ಷರ ಭಾವಚಿತ್ರವನ್ನು ಹೊಸದಾಗಿ ಹಾಕಲಾಗಿದೆ.
ಕನ್ನಡ ತೇರಿನ ಬಲಭಾಗದಲ್ಲಿ ಚಾಲಕರ ಕ್ಯಾಬಿನ್ ಬಾಗಿಲಿನ ಮೇಲೆ 'ಅಕ್ಷರ ಜಾತ್ರೆಗೆ ಅಕ್ಕರೆಯ ಸ್ವಾಗತ' ಫಲಕವಿದೆ. ಅಲ್ಲದೆ, ಜ್ಞಾನಪೀಠ ಪಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಭಾವಚಿತ್ರವಿದೆ. ರಥ ಹತ್ತು ಕಂಬಗಳು, ಅವುಗಳ ಮೇಲಿನ ಕುಸುರಿ ಮಾದರಿ ವಿನ್ಯಾಸ ಒಂದೇ ರೀತಿ ಇದೆ. ಒಟ್ಟಾರೆ ಈ ರಥದ ಮಾದರಿ ಮಾತ್ರ ಒಂದೇ ರೀತಿಯಾಗಿದ್ದು ಕಸಿವಿಸಿಯುಂಟುಮಾಡುತ್ತಿರುವದರಲ್ಲಿ ಸಂಶಯವಿಲ್ಲ.