'ಜಂಬೂ ಸವಾರಿಗೆ' ಅಂತಿಮ ಸಿದ್ಧತೆ : ಬಿಗಿ ಭದ್ರತೆ
ಮೈಸೂರು, ಅಕ್ಟೋಬರ್ 10: ಮಂಗಳವಾರ (ಅ.11)ದಂದು ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾಗೆ ಅಂತಿಮ ಕ್ಷಣದ ಸಿದ್ಧತೆ ನಡೆಯುತ್ತಿದ್ದು, ಜಂಬೂಸವಾರಿಯಲ್ಲಿ ಮಾತೆ ಚಾಮುಂಡೇಶ್ವರಿಯ ದರ್ಶನ ಪಡೆದುಕೊಳ್ಳಲು ಭಕ್ತಸಾಗರವೇ ಮೈಸೂರಿನತ್ತ ಹರಿದು ಬರಲಿದೆ.
ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಮೈಸೂರಿಗೆ ಬಂದಿದ್ದಾರೆ. ಇದು ಅರಮನೆ ನಗರಿ ಮೈಸೂರಿನ ಜನರ ಸಂಭ್ರಮವನ್ನು ದ್ವಿಗುಣಗೊಳಿಸಿದ್ದು, ಜಂಬೂಸವಾರಿಗೆ ವಿಶೇಷ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.(ಮೈಸೂರು ದಸರಾ : ಚಿನ್ನದ ಅಂಬಾರಿಗೆ ವಿಮೆ ಎಷ್ಟು ಗೊತ್ತೆ?)
ಮೈಸೂರಿನ ಪ್ರಮುಖ ರಸ್ತೆಗಳು, ಸ್ವಚ್ಛ ಮತ್ತು ಸುಂದರವಾಗಿ ಕಂಗೊಳಿಸುತ್ತಿವೆ. ನಗರದ ಪ್ರಮುಖ ಬೀದಿಗಳೆಲ್ಲಾ ವಿದ್ಯುದ್ವೀಪಗಳಿಂದ ಸಿಂಗಿರಿಸಿಕೊಂಡು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ಮೂಲ ಸೌಕರ್ಯಗಳಿಗೆ ಯಾವುದೇ ಕೊರತೆ ಉಂಟಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಮಂಗಳವಾರ ಮಧ್ಯಾಹ್ನ 2:45ಕ್ಕೆ ಅರಮನೆಯಿಂದ ಆರಂಭವಾಗುವ ಜಂಬೂ ಸವಾರಿ ಬನ್ನಿಮಂಟಪದಲ್ಲಿ ಸಂಜೆ 4:30ಕ್ಕೆ ಕೊನೆಗೊಳಲ್ಲಿದೆ. ಒಟ್ಟು ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಏರ್ಪಡಿಸಲಾಗಿದೆ.(ಅಂಬಾರಿ ಹೊರಲು ಸೈ ಎನಿಸಿಕೊಂಡ ಅರ್ಜುನ!)
ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್, ವಸತಿ ಗೃಹಗಳಲ್ಲಿ ವಿಶೇಷ ಭದ್ರತೆ ಒದಗಿಸಲು ಮತ್ತು ಸ್ವಚ್ಛತೆ ಕಾಪಾಡಲು ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸುತ್ತಿದೆ. ಮೈಸೂರು ಸುತ್ತಮುತ್ತಲಿನ ಪ್ರದೇಶಗಳಿಗೂ ವಿಶೇಷ ಭದ್ರತೆ ಒದಗಿಸಲಾಗಿದೆ.
ಈಗಾಗಲೇ ಗಜಪಡೆಗಳ ಅಭ್ಯಾಸ ತಾಲೀಮು ನಡೆದಿದ್ದು, ಬನ್ನಿಪ ಮಂಟಪ ಮೈದಾನದಲ್ಲಿ ಕುದುರೆ ಕವಾಯತು. ಪಂಜಿನ ಕವಾಯತು ಮತ್ತಿತರ ಪ್ರಮುಖ ಆಕರ್ಷಣಾ ಕಾರ್ಯಕ್ರಮಗಳು ನಡೆಯಲಿವೆ. ಗೌರವಾನ್ವಿತ ರಾಜ್ಯಪಾಲರಾದ ಶ್ರೀ ವಜುಭಾಯಿ ವಾಲಾ ಅವರು ಗೌರವ ವಂದನೆ ಸ್ವೀಕರಿಸಲಿದ್ದಾರೆ.