ಅರಮನೆ ನಗರಿ ಮೈಸೂರು ಸುತ್ತಲು ಹೆಲಿಕಾಪ್ಟರ್ ಜಾಲಿ ರೈಡ್
ಮೈಸೂರು, ಸೆಪ್ಟೆಂಬರ್ 18: ಕಣ್ಣು ಹಾಯಿಸಿದಷ್ಟು ಉದ್ದಗಲಕ್ಕೂ ಹಸಿರು. ಚಾಮುಂಡಿ ಬೆಟ್ಟವೂ ನಗರದೊಳಗೆ ಬೆರತಿದೆಯೇನೋ ಎಂಬ ಭಾವ. ಬಾನೆಂಬ ಕಡಲನು ತಬ್ಬಿಕೊಳ್ಳಲು ಕಣ್ಣರಳಿಸಿ ನಿಂತಂತಿದೆ ಭೂಮಿ, ಗಗನವನ್ನು ಚುಂಬಿಸಲು ಕಾದು ನಿಂತಂತಿರುವ ಅರಮನೆ, ಬಾನಿನ ಕುಡಿನೋಟಕ್ಕೆ ಅರಳಿದಂತಿರುವ ಮೈದಾನಗಳು. ಇದೆಲ್ಲ ಕಂಡುಬಂದದ್ದು ಮೈಸೂರು ದಸರೆಯ ಅಂಗವಾಗಿ ಹಮ್ಮಿಕೊಂಡಿರುವ ಹೆಲಿರೈಡ್ ಸೇವೆಯಲ್ಲಿ.
ಅಬ್ಬಾ! ಮೈಸೂರು ಅದೆಷ್ಟು ಸುಂದರ. ಇಂಥ ಅಪರೂಪದ ಸೌಂದರ್ಯ ಆಸ್ವಾದಿಸಿಕೊಳ್ಳುವ ಅವಕಾಶ ಮೈಸೂರಿಗರು ಹಾಗೂ ಪ್ರವಾಸಿಗರಿಗೆ ಲಭ್ಯವಾಗುತ್ತಿದೆ. ದಸರಾ ಅಂಗವಾಗಿ ಏರ್ಪಡಿಸಿರುವ ಹೆಲಿಕಾಪ್ಟರ್ ಜಾಲಿ ರೈಡ್ ಮೂಲಕ ಸಿಗುತ್ತಿರುವ ಅವಕಾಶ ಶನಿವಾರದಿಂದ ಲಭ್ಯವಾಗಿದೆ.
ಲಲಿತಮಹಲ್ ನಿಂದ ಹೊರಟು ಕಾರಂಜಿ ಕೆರೆ, ಗಾಲ್ಫ್ ಕೋರ್ಸ್, ಮೃಗಾಲಯ, ಚಾಮುಂಡಿ ವಿಹಾರ ಕ್ರೀಡಾಂಗಣ, ಸೇಂಟ್ ಫಿಲೋಮಿನಾ ಚರ್ಚ್, ಬನ್ನಿಮಂಟಪ, ಜಿಲ್ಲಾಧಿಕಾರಿ ಕಚೇರಿ, ಮೈಸೂರು ವಿಶ್ವವಿದ್ಯಾಲಯ, ಕುಕ್ಕರಹಳ್ಳಿ ಕೆರೆ, ಸರಸ್ವತಿಪುರಂ, ಕುವೆಂಪುನಗರ, ಅರಮನೆ, ಚಾಮುಂಡಿ ಬೆಟ್ಟವನ್ನು ದಿಗಂತದಿಂದ ದರ್ಶನ ಮಾಡಿಸಿತು. 'ಪವನ್ ಹಂಸ್' ಕಂಪೆನಿಯ ಈ ಹೆಲಿಕಾಪ್ಟರ್ ಆಕಾಶದಲ್ಲಿ 10 ನಿಮಿಷ ಹಾರಾಟ ನಡೆಸಿತು.
ಕಣ್ಮನ ಸೆಳೆವ ಮೈಸೂರಿನ ಸೊಮಗು
ಚಾಮುಂಡಿ ಬೆಟ್ಟ, ಅರಮನೆ ಹಾಗೂ ವಿವಿಧ ವೃತ್ತಗಳ ಸೊಬಗನ್ನು ಮತ್ತೊಂದು ದೃಷ್ಟಿಕೋನದಿಂದ ಸವಿಯಬಹುದು. ವಿವಿಧ ರಸ್ತೆಗಳು, ವಸತಿ ಪ್ರದೇಶಗಳ ಚಿತ್ತಾರವೂ ಕಣ್ಮನ ಸೆಳೆಯಲಿದೆ. ಒಂದು ಟ್ರಿಪ್ನಲ್ಲಿ 6 ಪ್ರಯಾಣಿಕರು, ಒಬ್ಬ ಪೈಲಟ್ ಸೇರಿ 7 ಮಂದಿ ಪ್ರಯಾಣಿಸಬಹುದು. ಗುಪ್ತ ಹಾಗೂ ಸೆಹಗಲ್ ಈ ಹೆಲಿಕಾಪ್ಟರ್ ನ ಪೈಲಟ್ಗಳು. ಮೈಸೂರಿನ ಸೌಂದರ್ಯವನ್ನು ಆಕಾಶದಿಂದ ವೀಕ್ಷಿಸಿ ಸಂಭ್ರಮಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಹೆಲಿಪ್ಯಾಡ್
ನಗರದ ಚಾಮುಂಡಿ ಬೆಟ್ಟದ ತಪ್ಪಲಿ ನಲ್ಲಿರುವ ಹೆಲಿಪ್ಯಾಡ್ ನಲ್ಲಿ ಶಾಸಕ ಎಂ.ಕೆ. ಸೋಮಶೇಖರ್ ಈ ಜಾಲಿ ರೈಡ್ ಉದ್ಘಾಟಿಸಿದರು. ವಿಶ್ವವಿಖ್ಯಾತ ಮೈಸೂರು ದಸರಾಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಹಮ್ಮಿಕೊಂಡಿರುವ ವಿವಿಧ ಕಾರ್ಯಕಮಗಳಲ್ಲಿ ಹೆಲಿಕಾಪ್ಟರ್ ರೈಡ್ ಒಂದು. ಮೈಸೂರ ನಗರದ ಸೌಂದರ್ಯವನ್ನು ನಗರದಾದ್ಯಂತ ಸುತ್ತಾಡಿ ನೋಡುವುದು ಒಂದು ರೀತಿಯ ಮಜಾ ಎನಿಸಿದರೆ. ಅದನ್ನು ಮೇಲಿನಿಂದ ನೋಡುವುದೂ ಕೂಡ ನಗರದ ಸೌಂದರ್ಯ ಆಸ್ವಾದಿಸುವ ಮತ್ತೊಂದು ಪರಿಯಾಗಿದೆ.
ಹಕ್ಕಿಯಾಗಿ ಮೈಸೂರು ನೋಡಿ
ಇದಕ್ಕಾಗಿ ಪವನ್ ಹನ್ಸ್ ಮತ್ತು ಜಿಪ್ಸನ್ ಏವಿಯೇಷನ್ ಸಂಸ್ಥೆಗಳು 2 ಹೆಲಿಕಾಪ್ಟರ್ ಗಳನ್ನು ಆಯೋಜಿಸಿದೆ. ಮೈಸೂರನ್ನು ನಾವೆಲ್ಲರೂ ನೋಡಿ ಅದೊಂದು ಸುಂದರ, ಸ್ವಚ್ಛ, ಪಾರಂಪರಿಕ, ಅರಮನೆ ನಗರಿ ಎಂದೆಲ್ಲಾ ಹೊಗಳುತ್ತಲೆ ಇರುತ್ತೇವೆ. ಇದೇ ಮೈಸೂರು ನಗರವನ್ನು ಹಾಗೂ ಅದರ ಸುತ್ತಲಿನ ಪದೇಶವನ್ನು ಒಂದು ಹಕ್ಕಿಯಂತೆ ನೋಡುವ ಅವಕಾಶ ಈ ದಸರೆಯಲ್ಲೂ ಲಭ್ಯವಿದೆ.
ಟಿಕೇಟ್ ದರ
ಜಾಲಿ ರೈಡ್ ಉದ್ಘಾಟಿಸಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಮೈಸೂರಿನ ಪರಿ, ಇಲ್ಲಿನ ಸೌಂದರ್ಯ ನೋಡಲು ಹೆಲಿಕಾಪ್ಟರ್ ರೈಡ್ ಏರ್ಪಡಿಸಲಾಗಿದೆ. ದೊಡ್ಡವರಿಗೆ 2300 ಹಾಗೂ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ 2000 ರೂ. ಟಿಕೆಟ್ ಇದೆ. ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರು ಇದರ ಸದುಪಯೋಗ ಪಡಿಸಿಕೊಳ್ಳಲಿ ಎಂದು ಹೇಳಿದರು.