ಯುವರಾಣಿ ತ್ರಿಷಿಕಾ ಕಾಣದೆ ನಿರಾಶರಾದ ಜನ
ಮೈಸೂರು, ಅಕ್ಟೋಬರ್ 23 : ಯುವರಾಣಿಯನ್ನು ನೋಡಲು ಕಾತರದಲ್ಲಿದ್ದ ಮಂದಿ ಅವರು ಕಾಣಸಿಗದೆ ನಿರಾಶರಾಗಿದ್ದಾರೆ. ದಸರಾಕ್ಕೆ ದೂರದ ರಾಜಸ್ತಾನದಿಂದ ಬಂದಿದ್ದ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಭಾವಿ ಪತ್ನಿ ತ್ರಿಷಿಕಾ ಕುಮಾರಿ ಸಿಂಗ್ ಅವರು ಅರಮನೆಯಲ್ಲಿ ನಡೆದ ಖಾಸಗಿ ದರ್ಬಾರ್ಗೆ ಸಾಕ್ಷಿಯಾಗಿದ್ದರು.
ಗುರುವಾರ ಆಯುಧ ಪೂಜೆಯ ಸಂದರ್ಭ ಅರಮನೆಯ ಮೇಲ್ಭಾಗದಲ್ಲಿ ನಿಂತು ಪೂಜಾ ಕೈಂಕರ್ಯಗಳನ್ನು ವೀಕ್ಷಿಸುತ್ತಿದ್ದರಾದರೂ ಸಾರ್ವಜನಿಕವಾಗಿ ಎಲ್ಲೂ ಕಂಡು ಬಂದಿಲ್ಲ. ಯದುವೀರರು ಪಟ್ಟ ಧರಿಸಿದ್ದ ಸಂದರ್ಭದಲ್ಲಿ ತ್ರಿಷಿಕಾ ಅವರು ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. [ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]
ಮೈಸೂರು ದಸರಾಗೆ ದೂರದಿಂದ ಬಂದಿರುವ ಜನರಿಗೆ ಯುವರಾಣಿ ತ್ರಿಷಿಕಾ ಅವರನ್ನು ನೋಡಬೇಕೆಂಬ ಹಂಬಲವಿದ್ದದ್ದು ಸಹಜ. ಹೀಗಾಗಿ ಜಂಬೂಸವಾರಿ ದಿನವಾದ ಶುಕ್ರವಾರ ಅರಮನೆಯತ್ತ ದೃಷ್ಟಿ ನೆಟ್ಟು, ಎಲ್ಲಾದರೂ ಕಾಣಸಿಗುತ್ತಾರಾ ಎಂದು ಹುಡುಕಾಡುತ್ತಿದ್ದ ದೃಶ್ಯ ಕೆಲವೆಡೆ ಕಂಡು ಬಂತು. ಅಲ್ಲದೆ ಯುವರಾಣಿ ದಸರಾಕ್ಕೆ ಬಂದಿದ್ದಾರಂತೆ ಎಂದು ಒಬ್ಬರನೊಬ್ಬರು ಮಾತನಾಡಿಕೊಳ್ಳುತ್ತಿದ್ದರು.[ಯದುವೀರ ಒಡೆಯರ್ ಭಾವಿ ಪತ್ನಿ ರಾಜಸ್ಥಾನಿ ಕುವರಿ]
ಗುರುವಾರ ಸೀರೆಯುಟ್ಟು ಸುಂದರವಾಗಿ ಕಂಗೊಳಿಸುತ್ತಿದ್ದ ತ್ರಿಷಿಕಾ ಕುಮಾರಿ ಸಿಂಗ್ ಅವರನ್ನು ಅರಮನೆಯ ಮಂಟಪದಲ್ಲಿ ಕೆಲವರು ನೋಡಿದ್ದರಾದರೂ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಜೊತೆಯಲ್ಲಿ ಎಲ್ಲೂ ಕಾಣಲಿಲ್ಲ. [ಮೈಸೂರು ದಸರಾ 2015 ಜಂಬೂ ಸವಾರಿ]
ಬೆಳಿಗ್ಗೆ ಸುತ್ತೂರು ಮಠಕ್ಕೆ ತೆರಳಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಯದುವೀರ್, ಸಂಪ್ರದಾಯದಂತೆ ಎಲ್ಲ ವಿಧಿವಿಧಾನಗಳನ್ನು ನಡೆಸಲಾಗಿದ್ದು ಖುಷಿ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಆ ನಂತರ ಅರಮನೆಗೆ ಆಗಮಿಸಿದ ಅವರು 3.07 ನಿಮಿಷಕ್ಕೆ ಸಾಂಪ್ರದಾಯಿಕ ಉಡುಪಿನೊಂದಿಗೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅಂಬಾರಿಯ ವೀರಾಜಮಾನಳಾಗಿದ್ದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರು.
ಭಾವಿ ಪತ್ನಿ ತ್ರಿಷಿಕಾ ಅವರೊಂದಿಗೆ ಯಾರ್ಯಾರು ಬಂದಿದ್ದಾರೆ ಎಷ್ಟು ದಿನ ಮೈಸೂರಿನಲ್ಲಿ ಉಳಿದುಕೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅಷ್ಟೇ ಅಲ್ಲ ಅವರು ಮಾಧ್ಯಮದವರಿಗೆ ಕಾಣಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿದ್ದಾರೆ.