ಯುವ ಸಂಭ್ರಮಕ್ಕೆ ಚಾಲನೆ ನೀಡಿದ ನಟಿ ಕಾರುಣ್ಯ ರಾಮ್
ಮೈಸೂರು, ಸೆಪ್ಟೆಂಬರ್ 12 : ಅಲ್ಲಿ ತುಂಬಿದ್ದ ಯುವಕರು, ನಟಿ ಕಾರುಣ್ಯ ರಾಮ್ ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿದ್ದಂತೆ ಶಿಳ್ಳೆ- ಚಪ್ಪಾಳೆ ಮುಗಿಲು ಮುಟ್ಟಿತ್ತು. ಇದು ನಡೆದದ್ದು ವಿಶ್ವವಿಖ್ಯಾತ ದಸರಾ ಮಹೋತ್ಸವ ಪ್ರಯುಕ್ತ ನಡೆಯುವ ಯುವ ಸಂಭ್ರಮದ ವೇದಿಕೆಯಲ್ಲಿ.
ಮೈಸೂರು ದಸರಾದಲ್ಲಿ ಶಿವಣ್ಣ, ದರ್ಶನ್: ರಂಗೇರಲಿದೆ ನಾಡಹಬ್ಬ
ಮಂಗಳವಾರ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಟಿ ಕಾರುಣ್ಯ ರಾಮ್ ಡೋಲು ಬಡಿಯುವ ಮೂಲಕ ಯುವ ಸಂಭ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೈಸೂರು ಎಂದಾಕ್ಷಣ ಮೊಗದಲ್ಲಿ ಮಂದಹಾಸ ಮೂಡುತ್ತದೆ. ನಾನು ಕೂಡಾ ಮೇಲುಕೋಟೆಯವಳು. ವಜ್ರಕಾಯ ಚಿತ್ರದ ಚಿತ್ರೀಕರಣ ಕೂಡ ಇದೇ ನಗರದಲ್ಲಿಯೇ ಆಗಿದೆ. ಮೈಸೂರು ದಸರಾ ಅದ್ಭುತ. ಮೈಸೂರು ದಸರಾ ಕಾರ್ಯಕ್ರಮದ ಅಂಗವಾದ ಯುವಸಂಭ್ರಮಕ್ಕೆ ಚಾಲನೆ ನೀಡಿರುವುದು ನನಗೆ ಸಂತಸ ನೀಡಿದೆ' ಎಂದರು.
ಭಾರತೀಯ ಪರಂಪರೆಯ ಹೆಮ್ಮೆಯ ಪ್ರತೀಕ ಈ 'ಮೈಸೂರು ಪೇಟ'
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಇತಿಹಾಸ ಇದೆ. ಹಾಡುವ ಹಾಡು, ಹಾಕುವ ಹೆಜ್ಜೆಯಲ್ಲಿ ಪೂರ್ವಜರು ಹಾಕಿಕೊಟ್ಟ ಭದ್ರ ಬುನಾದಿ ಇದೆ. ಯುವಕರಿಗೆ ಭವಿಷ್ಯದ ದಾರಿ ತೋರಿಸುತ್ತದೆ. ಕಾದಂಬರಿ, ಕವಿತೆ ಇವೆಲ್ಲದರಲ್ಲೂ ಸಾಂಸ್ಕೃತಿಕತೆ ಇದೆ. ಸಾಂಸ್ಕೃತಿಕತೆ ಮೈಮರೆಯುವುದಲ್ಲ. ಕವಿತೆಯಲ್ಲಿ ಬದುಕನ್ನು ಬದಲಿಸುವ ಶಕ್ತಿ ಇದೆ. ಸುಭಾಷ್ ಚಂದ್ರಬೋಸ್, ಚಂದ್ರಶೇಖರ ಆಜಾದ್ ಅವರ ಮೇಲೆ ಪ್ರಭಾವ ಬೀರಿದ್ದು ಅದೇ. ಸಾಂಸ್ಕೃತಿಕ ಚಟುವಟಿಕೆ ವ್ಯಕ್ತಿತ್ವ ರೂಪಿಸಿಕೊಡಲು ಇರುವ ಒಂದು ಮಹತ್ವದ ಅಂಶ. ಸರಿಯಾದ ತತ್ವಾದರ್ಶ ಪಾಲಿಸಿದರೆ ಸಾಧನೆ ಮಾಡಬಹುದು' ಎಂದರು.
ಪ್ರತಿಭಟಿಸುವ ಮನಸ್ಸು ಮೂಡಲಿ
ಸಮಾಜದಲ್ಲಿ ಅತ್ಯಾಚಾರದಂತಹ ಹೇಯ ಕೃತ್ಯಗಳು ನಡೆದಾಗ ಅದನ್ನು ಪ್ರತಿಭಟಿಸುವ ಮನಸ್ಸು ಯುವಕರಲ್ಲಿ ಮೂಡಬೇಕು. ಸಂವಿಧಾನ ಬಯಸುವುದೇ ಅದೇ. ಬದಲಾವಣೆ ತರದ ಪೂಜೆ ಪೂಜೆಯಲ್ಲ. ಜಾನಪದ, ಗೀಗೀ ಪದ ಬೆಳೆದು ಬಂದಿದ್ದು ಅದೇ ಹಾದಿಯಲ್ಲಿ. ಸಂವಿಧಾನ ರೂಪುಗೊಂಡಿದ್ದು ಅದೇ ಉದ್ದೇಶದಿಂದ. ಏನೇ ಆದರೂ ಧೈರ್ಯ ಗೆಡಬೇಡಿ ಎಂದು ಚೆನ್ನಣ್ಣನವರ್ ಹೇಳಿದರು.
ಮನರಂಜಿಸಿದ ಹಾಡುಗಳು
ಶಿವನೇ ನಿನ್ನ ಆಟ ಬಲ್ಲವರ್ಯಾರಾರು, ಚೆಲ್ಲಿದರು ಮಲ್ಲಿಗೆಯ ಹಾಡುಗಳನ್ನು ಹಾಡಿ ಜನ ಮನ ರಂಜಿಸಿದರು. ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ನೃತ್ಯದ ಮೂಲಕ ನವ ದುರ್ಗೆಯರಿಗೆ ನಮನ ಸಲ್ಲಿಸಿದರೆ, ಮಂಗಳೂರಿನ ಹೆಜ್ಜೆನಾದ ತಂಡದವರು ಶ್ರೀಗಣೇಶಾಯ ಏಕದಂತಾಯ ಧೀಮಹಿ ನೃತ್ಯ ಮಾಡುವ ಮೂಲಕ ಪ್ರಥಮ ವಂದಿತನಿಗೆ ನಮನ ಸಲ್ಲಿಸಿದರು. ಇದೇ ತಂಡದವರು ಬಾಜಿರಾವ್ ಮಸ್ತಾನಿ ಚಿತ್ರದ ಒಂದು ಗೀತೆಗೆ ನೃತ್ಯ ಮಾಡಿ ಎಲ್ಲರು ಕುಣಿದು ಕುಪ್ಪಳಿಸುವಂತೆ ಮಾಡಿದರು.
ನೃತ್ಯ ವೈಭವ
ಹೆಜ್ಜೆನಾದ ತಂಡದವರು ಲಾವಣಿ ನೃತ್ಯ, ಲೈಲಾ ಹೂ ಮೈ ಲೈಲಾ ಗೀತೆಗೆ ನೃತ್ಯ ಪ್ರಸ್ತುತಪಡಿಸಿದರು. ಬನ್ನೂರು ಸಂತೇಮಾಳ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ತಮ್ಮನೃತ್ಯದ ಮೂಲಕ ಸ್ವಚ್ಛಭಾರತದ ಕುರಿತು ಅರಿವು ಮೂಡಿಸಿದರಲ್ಲದೇ ಸ್ವಚ್ಛತೆಗೆ ಪ್ರತಿಯೊಬ್ಬರೂ ಕೈಜೋಡಿಸಿ ಎಂಬ ಜಾಗೃತಿ ಮೂಡಿಸಿದರು.
ನಮಗಿಲ್ಲ ಸಾಟಿ!
ಯುವ ಸಭ್ರಮದಲ್ಲಿ ಪ್ರತಿಯೊಬ್ಬರೂ ಸಂಭ್ರಮದಿಂದ ಪಾಲ್ಗೊಂಡು ಒಬ್ಬರನ್ನೊಬ್ಬರು ಮೀರಿಸುವಂತೆ ಪ್ರದರ್ಶನ ನೀಡಿ ನಮಗೆ ಬೇರಾರೂ ಸಾಟಿಯಿಲ್ಲ ಎಂಬುದನ್ನು ನಿರೂಪಿಸಿದರು.