ಮೈಸೂರು ಅರಮನೆಯಿಂದ ಸ್ವಸ್ಥಾನಕ್ಕೆ ಮರಳಿದ ಗಜಪಡೆಗಳು
ಮೈಸೂರು, ಅಕ್ಟೋಬರ್ 13: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಂಡ ಗಜಪಡೆಗಳಿಗೆ ಅರಮನೆಯ ಆವರಣದಲ್ಲಿ ಗುರುವಾರ ಸಾಂಪ್ರದಾಯಿಕ ಪೂಜೆ ನೆರವೇರಿಸುವುದರೊಂದಿಗೆ ಬೀಳ್ಕೊಡಲಾಯಿತು.
ಜಂಬೂ ಸವಾರಿಯಲ್ಲಿ ಪಾಲ್ಗೊಂಡು ಅಂಬಾರಿಯನ್ನು ಹೊತ್ತು, ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದ ಕ್ಯಾಪ್ಟನ್ ಅರ್ಜುನನಿಗೆ ವಿಶೇಷ ಪೂಜೆಯನ್ನು ಮಾಡಲಾಯಿತು. ಬೀಳ್ಕೊಡುಗೆಗೂ ಮುನ್ನ ಕಾವಾಡಿ, ಮಾವುತರ ಕುಟುಂಬದ ಸದಸ್ಯರಿಗೆ ಬೆಳಗ್ಗೆ ಉಪಾಹಾರ ನೀಡಲಾಯಿತು. ಬಳಿಕ ಆನೆಗಳಿಗೆ ಹೂವಿನ ಹಾರ ಹಾಕಿ ಪೂಜಿಸಲಾಯಿತು.[ದಸರಾ ಮುಗಿದ ಖುಷಿಯಲ್ಲಿ ಗಜಪಡೆ ಮಾವುತರು]
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾವುತರಿಗೆ ಗೌರವಧನ ವಿತರಿಸಿದರು. ಬಳಿಕ ಮಾತನಾಡಿದ ಅವರು, ಜಂಬೂಸವಾರಿ ಯಶಸ್ವಿಯಾಗಿ ನೆರವೇರಿದ್ದಕ್ಕೆ ಸಂತಸಪಟ್ಟರು. ಅಲ್ಲದೆ ಈ ಬಾರಿ ಗೌರವ ಧನದ ಮೊತ್ತವನ್ನು ಹೆಚ್ಚಿಸಿದ್ದಾಗಿ ಹೇಳಿದ ಅವರು, ಕಳೆದ ವರ್ಷ ತಲಾ ಐದು ಸಾವಿರ ರುಪಾಯಿ ಗೌರವಧನ ನೀಡಲಾಗಿತ್ತು. ಈ ಬಾರಿ ಏಳೂವರೆ ಸಾವಿರ ನೀಡಿರುವುದಾಗಿ ತಿಳಿಸಿದರು.
ಕಾವೇರಿ ವಿವಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಜಲ ಆಯೋಗದ ತಂಡ ಭೇಟಿ ನೀಡಿ ವಾಸ್ತವ ಅಧ್ಯಯನ ಮಾಡಿದೆ. ಅಲ್ಲದೆ ರೈತರ ಕಷ್ಟದ ಪರಿಸ್ಥಿತಿಯನ್ನು ಅರಿತಿರುವ ತಂಡ, ಇಲ್ಲಿನ ವಸ್ತುಸ್ಥಿತಿಯ ವರದಿಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಲಿದೆ. ಕರ್ನಾಟಕದ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ ಎಂದು ಹೇಳಿದರು.[ಕೇಂದ್ರ ಜಲ ಆಯೋಗದಿಂದ ವಾಸ್ತವ ವರದಿ: ದೇವೇಗೌಡ ವಿಶ್ವಾಸ]
ಅರಣ್ಯ ಇಲಾಖೆ ವತಿಯಿಂದ ಶಾಲು ಹೊದಿಸಿ, ಮಾವುತರನ್ನು ಸನ್ಮಾನಿಸಲಾಯಿತು. ಅರಮನೆ ಆಡಳಿತ ಮಂಡಳಿ ವತಿಯಿಂದಲೂ ನೆನಪಿನ ಕಾಣಿಕೆ ನೀಡಲಾಯಿತು. ಸುಮಾರು ಎರಡು ತಿಂಗಳ ಕಾಲ ಅರಮನೆ ಆವರಣದಲ್ಲಿ ಬೀಡು ಬಿಟ್ಟು, ದಸರಾದಲ್ಲಿ ತೊಡಗಿಸಿಕೊಂಡಿದ್ದ ಗಜಪಡೆ ಮತ್ತೆ ಶಿಬಿರಗಳಿಗೆ ತೆರಳಿವೆ.