ಮೈಸೂರು ದಸರಾ 2018 : ಅರ್ಜುನನ ನೇತೃತ್ವದಲ್ಲಿ ಗಜಪಯಣ ಆರಂಭ
ಮೈಸೂರು, ಸೆಪ್ಟೆಂಬರ್ 02 : 2018ನೇ ಸಾಲಿನ ವಿಶ್ವವಿಖ್ಯಾತ ಮೈಸೂರು ದಸರಾ ಸಿದ್ಧತೆಗಳಿಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಭಾನುವಾರ ಗಜಪಯಣಕ್ಕೆ ಚಾಲನೆ ನೀಡಲಾಗಿದೆ. ಧನಂಜಯ ಎಂಬ ಆನೆ ಈ ಬಾರಿಯ ದಸರಾದಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದೆ.
ಭಾನುವಾರ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಪ್ರದೇಶದಲ್ಲಿರುವ ನಾಗರ ಹೊಳೆ ದ್ವಾರದ ಮುಂದೆ ಆನೆಗಳಿಗೆ ಪೂಜೆ ಸಲ್ಲಿಸಿ 2018ನೇ ಸಾಲಿನ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವ ಸಾ.ರಾ.ಮಹೇಶ್, ಜೆಡಿಎಸ್ ಅಧ್ಯಕ್ಷ ಮತ್ತು ಹುಣಸೂರು ಶಾಸಕ ಎಚ್.ವಿಶ್ವನಾಥ್ ಮುಂತಾದವರು ಪಾಲ್ಗೊಂಡಿದ್ದರು.
ಈ ಬಾರಿ ಮಾವುತರಿಗೆ ಮಾತ್ರವಲ್ಲ, ಆನೆಗಳಿಂದ ತೊಂದರೆಯಾದರೂ ವಿಮೆ
ಕಳೆದ ನಾಲ್ಕೈದು ವರ್ಷಗಳಿಂದ ನಾಗಾಪುರ ಹಾಡಿ ಸಮೀಪದ ಆಶ್ರಮ ಶಾಲೆ ಬಳಿ ಗಜಪಯಣಕ್ಕೆ ಚಾಲನೆ ನೀಡಲಾಗುತ್ತಿತ್ತು. ಈ ಬಾರಿ ಶಾಸಕ ಎಚ್.ವಿಶ್ವನಾಥ್ ಸೂಚನೆಯಂತೆ ನಾಗರ ಹೊಳೆ ದ್ವಾರದ ಮುಂದೆ ಗಜಪಯಣ ಆರಂಭಗೊಂಡಿತು.
ಗಜಪಯಣಕ್ಕೆ ಚಾಲನೆ, ಸಂಪ್ರದಾಯದ ಬಗ್ಗೆ ಎಚ್ ವಿಶ್ವನಾಥ್ ಹೇಳಿದ್ದು ಕೇಳಿ
ಅಂಬಾರಿ ಹೊರುವ ಕ್ಯಾಪ್ಟನ್ ಅರ್ಜುನ (58) ನೇತೃತ್ವದಲ್ಲಿ ವರಲಕ್ಷ್ಮೀ (62), ವಿಕ್ರಮ (45), ಚೈತ್ರ (47), ಧನಂಜಯ (35) 5 ಆನೆಗಳು ಗಜಪಯಣವನ್ನು ಆರಂಭಿಸಿವೆ. ಸೆಪ್ಟೆಂಬರ್ 3ರಂದು ಆನೆಗಳು ಮೈಸೂರು ಅರಮನೆಗೆ ಬಂದು ಸೇರಲಿವೆ.
ದಸರಾ ಕಾರ್ಯಗಳಿಗೆ ಚಾಲನೆ
ಪ್ರತಿ ವರ್ಷಕ್ಕಿಂತ ಹತ್ತು ದಿನ ತಡವಾಗಿ ಗಜಪಯಣ ಆರಂಭವಾಗಿದೆ. ಕೊಡಗಿನಲ್ಲಿ ಅದ ಪ್ರಕೃತಿ ವಿಕೋಪದ ಕಾರಣ ಸರಳವಾಗಿ ಈ ಬಾರಿಯ ದಸರಾವನ್ನು ಆಚರಣೆ ಮಾಡಲಾಗುತ್ತಿದೆ.
ಗಜಪಡೆಗೆ ಚಾಲನೆ ನೀಡುವ ಮೂಲಕ ದಸರಾ ಅಧಿಕೃತವಾಗಿ ಆರಂಭವಾಗಿದೆ. ಗಜಪಡೆಯ ಮೊದಲ ತಂಡದಲ್ಲಿ ಅರ್ಜುನ, ವರಲಕ್ಷ್ಮೀ, ವಿಕ್ರಮ, ಧನಂಜಯ ಹಾಗೂ ಚೈತ್ರ ಆನೆಗಳು ಮೈಸೂರಿಗೆ ಆಗಮಿಸಲಿವೆ.
ಆನೆಗಳಿಗೆ ಉಪಹಾರ
ದುಬಾರೆ ಆನೆ ಶಿಬಿರದಲ್ಲಿದ್ದ ಎಲ್ಲಾ ಆನೆಗಳು ಶನಿವಾರ ರಾತ್ರಿಯೇ ವೀರನಹೊಸಹಳ್ಳಿಗೆ ಆಗಮಿಸಿದ್ದವು. ಭಾನುವಾರ ಬೆಳಗ್ಗೆ ಆನೆಗಳಿಗೆ ಸ್ನಾನ ಮಾಡಿಸಿ, ಸಿಂಗರಿಸಿ ಗಜಯಪಯಣಕ್ಕೆ ಸಿದ್ದಗೊಳಿಸಲಾಯಿತು.
ಅರ್ಜನ ನೇತೃತ್ವದ ಆನೆಗಳಿಗೆ ಬೆಳಗಿನ ಉಪಹಾರವಾಗಿ ಭತ್ತ, ಬೆಲ್ಲ, ತೆಂಗಿನ ಕಾಯಿಗಳನ್ನು ಭತ್ತದ ಹುಲ್ಲಿನಲ್ಲಿ ಕಟ್ಟಲಾದ 'ಕುಸುರೆ' ನೀಡಲಾಯಿತು. ಆನೆಗಳ ಜೊತೆ ಮಾವುತರು, ಕಾವಾಡಿಗಳು ಮೈಸೂರಿನತ್ತ ಹೊರಟಿದ್ದಾರೆ.
ಈ ಸಲ ಡಿಫರೆಂಟ್ ದಸರಾ ಅಂತೆ: ಎಚ್ಡಿಕೆ ಪ್ಲ್ಯಾನ್ ಏನು?
ವೀರನಹೊಸಹಳ್ಳಿಯಲ್ಲಿ ಹಬ್ಬದ ಕಳೆ
ವೀರನಹೊಸಹಳ್ಳಿಯಲ್ಲಿ ಬೃಹತ್ ವೇದಿಕೆ, ಕಮಾನು, ತಳಿರು ತೋರಣಗಳನ್ನು ಹಾಕಿ ಅರಣ್ಯ ಇಲಾಖೆ ಗಜಯಪರಣಕ್ಕೆ ಸಿದ್ಧತೆ ಮಾಡಿತ್ತು. ಆನೆಗಳಿಗೆ ಪೂಜೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ನಾಗಾಪುರ, ವೀರನಹೊಸಹಳ್ಳಿ ಆಶ್ರಮ ಶಾಲೆಯ ಆದಿವಾಸಿ ಮಕ್ಕಳು ಗಜಪಯಣಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
2ನೇ ಗಜಪಡೆಯ ಆನೆಗಳು
ಇದುವರೆಗೂ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದ ಬಲರಾಮ, ಅಭಿಮನ್ಯು, ಕೃಷ್ಣ, ದ್ರೋಣ, ಹರ್ಷ ಆನೆಗಳು ರಾಮನಗರದಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿವೆ. ಆದ್ದರಿಂದ, ಅರ್ಜುನನ ಜೊತೆ ಅವರು ಮೈಸೂರಿಗೆ ಆಗಮಿಸುತ್ತಿಲ್ಲ.
2ನೇ ಹಂತದ ಗಜಪಯಣದಲ್ಲಿ ಈ ಎಲ್ಲಾ ಆನೆಗಳು ಮೈಸೂರಿಗೆ ಬರಲಿವೆ. ಧನಂಜಯ ಎಂಬ ಆನೆ ಈ ಬಾರಿಯ ದಸರಾದಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದೆ.