ಈ ಬಾರಿಯ ಜಂಬೂಸವಾರಿಗೆ ಹೆಚ್ಚುವರಿಯಾಗಿ 4 ಆನೆಗಳು ಸೇರ್ಪಡೆ?
ಮೈಸೂರು, ಜುಲೈ 12 : ವಿಶ್ವ ವಿಖ್ಯಾತ ದಸರಾಗೆ ಈಗಿನಿಂದಲೇ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ಮೊದಲ ಸುತ್ತಿನಂತೆ ಜಂಬೂಸವಾರಿಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸುತ್ತಿದ್ದು, ಈ ಬಾರಿಯ ಜಂಬೂಸವಾರಿಗೆ 12 ಆನೆಯ ಜತೆಗೆ ಹೆಚ್ಚುವರಿಯಾಗಿ 4 ಆನೆಗಳು ಸೇರ್ಪಡೆಗೊಳ್ಳಲಿವೆ.
ಈ ಹಿಂದಿನ ಎಲ್ಲಾ ದಸರಾ ಮಹೋತ್ಸವದಲ್ಲಿ 12 ಆನೆಗಳು ಪಾಲ್ಗೊಳ್ಳುವ ವಾಡಿಕೆಯಿದೆ. ಅದರಂತೆ ಕಳೆದ ಮೂರ್ನಾಲ್ಕು ವರ್ಷದಿಂದ ಸಿಡಿಮದ್ದಿನ ತಾಲೀಮು ನಡೆಸುವ ವೇಳೆ ಬೆದರುವುದು ಹಾಗೂ ಜಂಬೂಸವಾರಿಯ ಮುನ್ನ ದಿನ ಅನಾರೋಗ್ಯಕ್ಕೀಡಾಗುವುದು ಸೇರಿದಂತೆ ಕೆಲ ಕಾರಣಗಳಿಂದ ಎರಡು ಆನೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ.
ಮೈಸೂರು ದಸರಾ ಜಂಬೂಸವಾರಿಯ ಗಜಪಡೆಗಳ ಬಗ್ಗೆ ಗೊತ್ತಾ?
ಎರಡು ವರ್ಷದ ಹಿಂದೆ ಕರೆತರಲಾಗಿದ್ದ ಕೆಂಚಾಂಬ ಆನೆ ಸಿಡಿಮದ್ದಿನ ಶಬ್ದಕ್ಕೆ ಹೆದರಿದ್ದ ಕಾರಣ ಆ ಆನೆಯನ್ನು ಮೆರವಣಿಗೆಯಿಂದ ದೂರ ಇಡಲಾಗಿತ್ತು. ಕಳೆದ ವರ್ಷ ಗೋಪಾಲಸ್ವಾಮಿ ಆನೆಗೆ ಬೇದಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮೆರವಣಿಗೆಯಿಂದ ಕೈಬಿಡಲಾಗಿತ್ತು.
ಈ ಎಲ್ಲಾ ಅಂಶಗಳನ್ನು ಗಮನಿಸಿರುವ ಅರಣ್ಯ ಇಲಾಖೆ ಈ ಬಾರಿ ಎರಡು ಅಥವಾ ನಾಲ್ಕು ಹೆಚ್ಚುವರಿ ಆನೆಗಳನ್ನು ಕರೆತರಲು ನಿರ್ಧರಿಸಿದೆ. ಆದರೆ, ಮೆರವಣಿಗೆಯಲ್ಲಿ 12 ಆನೆಗಳು ಮಾತ್ರ ಪಾಲ್ಗೊಳ್ಳಲಿವೆ. ಯಾವುದಾದರೂ ಆನೆ ಅನಿರೀಕ್ಷಿತ ಹಾಗೂ ಆಕಸ್ಮಿಕವಾಗಿ ಅನಾರೋಗ್ಯಕ್ಕೀಡಾದರೆ ಆ ಆನೆಗಳ ಬದಲಿಗೆ ಬಳಸಿಕೊಳ್ಳಲು ಹೆಚ್ಚುವರಿಯಾಗಿ ಆನೆಗಳನ್ನು ಕರೆತರಲು ಉದ್ದೇಶಿಸಲಾಗಿದೆ.
ಇಷ್ಟಕ್ಕೂ ದಸರಾ ಆನೆಗಳನ್ನು ಸಾಕೋದು ಅಂದ್ರೆ ಸುಮ್ಮನೇನಾ?
ತಾಲೀಮಿಗೆ ಸಜ್ಜಾಗುತ್ತಿರುವ ಮಾವುತರು
ಸೆಪ್ಟೆಂಬರ್ 21ರಿಂದ 30ರವರೆಗೆ ದಸರಾ ನಡೆಯಲಿದ್ದು, ಆಗಸ್ಟ್ 10ರಂದು ಮೊದಲ ತಂಡದ ಗಜಪಡೆ ವಿವಿಧ ಆನೆ ಶಿಬಿರಗಳಿಂದ ಅರಮನೆಗಳ ನಗರಿ ಮೈಸೂರಿಗೆ ಆಗಮಿಸಲಿವೆ. ಇದಕ್ಕಾಗಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳ ಆರೋಗ್ಯ ಸ್ಥಿತಿ, ಸದೃಡತೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಆನೆಗಳನ್ನು ಪರೀಕ್ಷಿಸಲಾಗಿದೆ. ಒಟ್ಟು 20 ಆನೆಗಳನ್ನು ದಸರಾ ಮಹೋತ್ಸವಕ್ಕೆ ಗುರುತಿಸಲಾಗಿದೆಯಾದರೂ 16 ಆನೆಗಳು ಅಂತಿಮಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮಾವುತರು ಕೂಡ ಸರ್ವ ಸನ್ನದ್ಧರಾಗುತ್ತಿದ್ದಾರೆ.
ಆನೆಗಳ ಸಾಮರ್ಥ್ಯ ಪರಿಶೀಲನೆ
ಜಂಬೂಸವಾರಿಗಾಗಿ ಆನೆಗಳನ್ನು ಆರಿಸಲು ನಾಲ್ಕು ದಿನಗಳ ಹಿಂದೆ ಡಿಸಿಎಫ್ ವಿ.ಏಡುಕುಂಡಲು ಹಾಗೂ ಪಶುವೈಧ್ಯ ಡಾ.ಡಿ.ಎನ್.ನಾಗರಾಜು ಅವರು ಬಳ್ಳೆ, ಬಂಡೀಪುರ, ಕೆ.ಗುಡಿ, ಮತ್ತಿಗೂಡು, ದುಬಾರೆ ಸೇರಿದಂತೆ ವಿವಿಧ ಆನೆ ಕ್ಯಾಂಪ್ ಗಳಿಗೆ ಭೇಟಿ ನೀಡಿ ಆನೆಗಳನ್ನು ಪರಿಶೀಲಿಸಿದ್ದಾರೆ. ಆನೆಗಳ ಆರೋಗ್ಯ ಸ್ಥಿತಿ, ದೈಹಿಕ ಸದೃಡತೆ, ವಯಸ್ಸು, ದೃಷ್ಟಿ, ಮದದ ಸ್ಥಿತಿ, ವರ್ತನೆ, ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅನುಭವ, ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ವೇಳೆ ಎಲ್ಲಾ ಆನೆಗಳು ಫಿಟ್ ಆಗಿರುವುದು ಕಂಡು ಬಂದಿರುವುದರಿಂದ ಒಟ್ಟು 20 ಆನೆಗಳ ಪಟ್ಟಿ ಸಿದ್ದಪಡಿಸಿದ್ದಾರೆ.
16 ಆನೆಗಳನ್ನು ಜು.15 ಅಥವಾ 16ರಂದು ಅಂತಿಮ
20 ಆನೆಗಳಲ್ಲಿ ಅಂತಿಮವಾಗಿ 16 ಆನೆಗಳನ್ನು ಜುಲೈ 15 ಅಥವಾ 16ರಂದು ನಡೆಯಲಿರುವ ಆನೆಗಳ ಆಯ್ಕೆ ಸಮಿತಿಯ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತದೆ. ಅಲ್ಲದೆ ಆ ಸಭೆಯಲ್ಲಿ ಜಂಬೂಸವಾರಿ ಪಾಲಲ್ಗೊಳ್ಳುವ 12 ಆನೆಗಳ ಬಗ್ಗೆಯೂ ಸ್ಪಷ್ಟ ಚಿತ್ರಣ ದೊರೆಯುತ್ತದೆ.
ಮತ್ತಿಗೂಡು ಹಾಗೂ ದುಬಾರೆ ಆನೆ ಕ್ಯಾಂಪ್ ನ ಆನೆಗಳು
ಕಳೆದ ಎರಡು ವರ್ಷಗಳ ಹಿಂದೆ ಹಾಸನದಲ್ಲಿ ಸೆರೆ ಹಿಡಿದು ಮತ್ತಿಗೂಡು ಹಾಗೂ ದುಬಾರೆ ಆನೆ ಕ್ಯಾಂಪ್ ನಲ್ಲಿ ಪಳಗಿ ಮಾವುತರ ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮತ್ತಿಗೂಡು ಕ್ಯಾಂಪ್ ನಲ್ಲಿರುವ ದ್ರೋಣ, ಶ್ರೀನಿವಾಸ, ಭೀಮ, ಕೃಷ್ಣ, ದುಬಾರೆಯಲ್ಲಿರುವ ಅಜೇಯ ಆನೆಗಳ ಪೈಕಿ ಮೂರು ಆನೆಗಳು ಕರೆತರುವ ಉದ್ದೇಶ ಅರಣ್ಯ ಇಲಾಖೆಯದ್ದಾಗಿದೆ.
ಈ ಬಾರಿಯ ದಸಾರ ಲಿಸ್ಟ್ ನಲ್ಲಿರುವ ಆನೆಗಳು
ಗಜಪಡೆಯ ನಾಯಕ ಅರ್ಜುನ(ಬಳ್ಳೆ), ಬಲರಾಮ, ಗೋಪಾಲಸ್ವಾಮಿ, ದ್ರೋಣ, ಶ್ರೀನಿವಾಸ, ಭೀಮ, ವರಲಕ್ಷ್ಮೀ, ಕೃಷ್ಣ(ಮತ್ತಿಗೂಡು), ಕಾವೇರಿ, ವಿಕ್ರಮ, ಗೋಪಿ, ಹರ್ಷ, ಪ್ರಶಾಂತ, ಅಜೇಯ(ದುಬಾರೆ), ವಿಜಯ(ಆನೆಕಾಡು), ಗಜೇಂದ್ರ, ದುರ್ಗಾಪರಮೇಶ್ವರಿ(ಕೆ.ಗುಡಿ) ಹಾಗೂ ಇದರೊಂದಿಗೆ ಇನ್ನು ಮೂರು ಆನೆಗಳು ಸೇರಿವೆ.
ಈ ಸಾಲಿನ ದಸರಾ ಮಹೋತ್ಸವದಲ್ಲಿ 12 ಆನೆಗಳು
ಈ ಸಾಲಿನ ದಸರಾ ಮಹೋತ್ಸವದಲ್ಲಿ 12 ಆನೆಗಳನ್ನು ಕೊಂಡೊಯ್ಯಬೇಕೆಂಬ ಉದ್ದೇಶದಿಂದ ಎರಡು ಅಥವಾ ನಾಲ್ಕು ಆನೆಗಳನ್ನು ಹೆಚ್ಚುವರಿಯಾಗಿ ಕರೆತಂದು ತಾಲೀಮು ನಡೆಸಬೇಕೆಂಬ ಉದ್ದೇಶವಿದೆ. ಒಟ್ಟಾರೆ ಈ ಬಾರಿ ನವರಾತ್ರಿ ವೈಭವಕ್ಕೆ ಕಳೆಕಟ್ಟುವಂತೆ ಜಂಬೂಸವಾರಿಯಲ್ಲಿ ಮತ್ತಷ್ಟು ಗಜಗಳು ತಮ್ಮ ವಯ್ಯಾರದ ನಡುಗೆ ಹಾಕಲು ಸಜ್ಜಾಗಲಿರುವುದರಲ್ಲಿ ಸಂಶಯವಿಲ್ಲ.