33 ಗಂಟೆ ನಿಂತು ಪ್ರಯಾಣಿಸುವಂತೆ ಮಾಡಿದ ರೈಲ್ವೆಗೆ ರು. 37 ಸಾವಿರ ದಂಡ
ಮೈಸೂರು, ಜನವರಿ 22 : ಇಲ್ಲಿನ ಗ್ರಾಹಕ ವ್ಯಾಜ್ಯ ಪರಿಹಾರ ನ್ಯಾಯಾಲಯವು ರೈಲ್ವೆ ಇಲಾಖೆಗೆ 37 ಸಾವಿರ ರುಪಾಯಿ ದಂಡ ವಿಧಿಸಿದೆ. ನಗರದ ಕುಟುಂಬವೊಂದು ಟಿಕೆಟ್ ಬುಕಿಂಗ್ ಮಾಡಿಸಿದ್ದರೂ 33 ಗಂಟೆಗಳ ಕಾಲ ನಿಂತೇ ಪ್ರಯಾಣಿಸುವಂತೆ ಮಾಡಿದ ತಪ್ಪಿಗೆ ಈ ದಂಡ ವಿಧಿಸಲಾಗಿದೆ.
2017ರ ಮೇ 25ರಂದು ಇಲ್ಲಿನ ಸಿದ್ದಾರ್ಥ ಬಡಾವಣೆಯ ವೈಜೇಶ್ ಮತ್ತು ಕುಟುಂಬದ ಇಬ್ಬರು ಸದಸ್ಯರು ಉಜ್ಜಯಿನಿಯಿಂದ ಹೊರಟ ಜೈಪುರ್-ಮೈಸೂರು ಸೂಪರ್ ಫಾಸ್ಟ್ ಎಕ್ಸ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಸ್ಲೀಪರ್ ಕ್ಲಾಸ್ ನಲ್ಲಿ ಮುಂಗಡವಾಗಿ ಟಿಕೆಟ್ ಖರೀದಿಸಿದ್ದರು.
ಏರ್ ಟೆಲ್ ಗೆ 50 ಸಾವಿರ ದಂಡ, ಮಂಗಳೂರು ಗ್ರಾಹಕರ ಖುಲ್ ಜಾ ಸಿಮ್ ಸಿಮ್
ಅದಕ್ಕಾಗಿ ತಲಾ 740 ರುಪಾಯಿ ಪಾವತಿಸಿದ್ದರು. ಆದರೆ ಅವರು ರೈಲು ಹತ್ತಿದಾಗ ಮೀಸಲಿಟ್ಟಿದ್ದ ಬರ್ತ್ ಗಳಲ್ಲಿ ಬೇರೆಯವರು ಮಲಗಿದ್ದರು. ಅಲ್ಲಿದ್ದವರಿಗೆ ಟಿಕೆಟ್ ಗಳನ್ನು ತೋರಿಸಿದ ವೈಜೇಶ್, ಈ ಬರ್ತ್ ಗಳು ನಮಗೆ ಕಾಯ್ದಿರಿಸಿದವು. ಜಾಗ ಬಿಟ್ಟುಕೊಡಿ ಎಂದು ಮನವಿ ಮಾಡಿದ್ದಾರೆ.
ಆದರೂ ಅವರು ಜಾಗ ಬಿಟ್ಟಿಲ್ಲ. ಈ ಬಗ್ಗೆ ವೈಜೇಶ್ ಅವರು ಕೋಚ್ ನಲ್ಲಿ ಕರ್ತವ್ಯದಲ್ಲಿದ್ದ ಟಿಕೆಟ್ ಚೆಕಿಂಗ್ ಅಧಿಕಾರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ನಂತರ ಭದ್ರತೆಗೆ ನಿಯೋಜನೆಗೊಂಡಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಗಮನಕ್ಕೆ ವಿಷಯ ತಂದಿದ್ದಾರೆ. ಅವರೂ ಸಹಾಯ ಮಾಡಿಲ್ಲ.
ಹೀಗಾಗಿ ವೈಜೇಶ್ ಮತ್ತು ಕುಟುಂಬದ ಸದಸ್ಯರು 33 ಗಂಟೆಗಳ ಕಾಲ ನಿಂತುಕೊಂಡೇ ಪ್ರಯಾಣಿಸುವಂತಾಗಿದೆ. ಇದರಿಂದ ದೈಹಿಕ, ಮಾನಸಿಕ ಹಿಂಸೆಯೂ ಅನುಭವಿಸುವಂತಾಗಿದೆ. ಮೈಸೂರಿಗೆ ಮರಳಿದ ಬಳಿಕ ವೈಜೇಶ್ ಅವರು ನೈರುತ್ಯ ರೈಲ್ವೆ ವಿಭಾಗದ ರೈಲ್ವೆ ಮ್ಯಾನೇಜರ್ ವಿರುದ್ಧ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಯಲ್ಲಿ 2017ರ ಜೂನ್ 23ರಂದು ದಾವೆ ಹೂಡಿದ್ದರು.
6 ತಿಂಗಳ ವಿಚಾರಣೆ ನಂತರ ನ್ಯಾಯಾಧೀಶರು, ರೈಲ್ವೆ ಟಿಟಿಇ ಮತ್ತು ಆರ್ ಪಿಎಫ್ ಸಿಬ್ಬಂದಿಯಿಂದ ಕರ್ತವ್ಯಲೋಪವಾಗಿದೆ ಎಂದು ತೀರ್ಪು ನೀಡಿದ್ದಾರೆ. ಪ್ರಯಾಣಿಕರಿಗೆ ಸೌಲಭ್ಯ ಒದಗಿಸದ ರೈಲ್ವೆ ಇಲಾಖೆಗೆ 37 ಸಾವಿರ ರುಪಾಯಿ ದಂಡ ವಿಧಿಸಿದ್ದು, ಆ ಹಣವನ್ನು ಪ್ರಯಾಣಿಕರಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.