ಮೈಸೂರಿನಲ್ಲಿ ಸಿನಿ ದಸರಾಕ್ಕೆ ಕಿಕ್ಕಿರಿದ ಯುವ ಸಮೂಹ
ಮೈಸೂರು, ಸೆಪ್ಟೆಂಬರ್ 21:- ವಿಶ್ವವಿಖ್ಯಾತ ದಸರಾ ಮಹೋತ್ಸವ ಪ್ರಯುಕ್ತ ದಸರಾ ಚಲನಚಿತ್ರೋತ್ಸವಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಸಚಿವೆ ಉಮಾಶ್ರೀ ಮಾತನಾಡಿ, ಚಲನಚಿತ್ರೋತ್ಸವದಲ್ಲಿ ವಿಶೇಷವಾದ ಚಿತ್ರಗಳನ್ನು ತರಲಾಗಿದೆ. ಉತ್ತಮ ಅಭಿರುಚಿಯ ಚಿತ್ರಗಳನ್ನು ವೀಕ್ಷಿಸಬೇಕಿದೆ. ಸಂಸ್ಕೃತಿಯ ತವರು ಮೈಸೂರಿನಲ್ಲಿ ಎಲ್ಲ ರೀತಿಯ ಕಲಾವಿದರು ಇದ್ದಾರೆ ಎಂದರು.
ಕಲೆ, ಸಂಸ್ಕೃತಿ, ಚಿತ್ರರಂಗದ ಬೆಳವಣಿಗೆಗೆ ಸಿಎಂ ಅಪಾರ ಸಹಕಾರ ನೀಡಿದ್ದಾರೆ. ಚಿತ್ರೋದ್ಯಮದ ಎಲ್ಲ ರೀತಿಯ ಸಂಕಷ್ಟಗಳಿಗೂ ಮುಖ್ಯಮಂತ್ರಿಗಳು ಸ್ಪಂದಿಸಿ, ಉದ್ಯಮದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಅಲ್ಲದೆ ಪ್ರಶಸ್ತಿಗಳ ನೀಡುವುದರಲ್ಲೂ ಉತ್ತಮವಾದ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
In Pics : ಖಾಸಗಿ ದರ್ಬಾರ್ ನಲ್ಲಿ ಯದುವೀರರಿಗೆ ತ್ರಿಷಿಕಾರಿಂದ ಪೂಜೆ
ರಾಜಕುಮಾರ್ ಅವರ ಜನ್ಮದಿನದಂದೇ ಪ್ರಶಸ್ತಿ ನೀಡಲು ಸಿಎಂ ಕ್ರಮ ಕೈಗೊಂಡಿದ್ದಾರೆ. ಚಿತ್ರೋದ್ಯಮದಲ್ಲಿ ಕಲಾವಿದರು ಮಾತ್ರವಲ್ಲ, ಎಲ್ಲ ಕೆಲಸಗಾರರ ಅನುಕೂಲಕ್ಕಾಗಿ ಕ್ಷೇಮನಿಧಿಗೆ 10 ಕೋಟಿ ರುಪಾಯಿಗಳನ್ನು ಸಿದ್ದರಾಮಯ್ಯ ನೀಡಿದ್ದಾರೆ ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರರಂಗಕ್ಕೆ ಎಲ್ಲ ರೀತಿ ಕೊಡುಗೆ ನೀಡಿದ್ದಾರೆ. ಆದರೂ ನವೆಂಬರ್ ತಿಂಗಳಲ್ಲಿ ಚಿತ್ರನಗರಿಗೆ ಶಂಕುಸ್ಥಾಪನೆ ನೆರವೇರಿಸುವ ಜತೆಗೆ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಜಾಗದ ಸಮಸ್ಯೆ ಬಗೆಹರಿಸಿ, ಶಂಕುಸ್ಥಾಪನೆ ಮಾಡುವಂತೆ ಕೋರಲಾಗಿದೆ. ಇದಕ್ಕೆ ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದರು
ಸಮಾರಂಭದ ಉದ್ಘಾಟನೆಗೂ ಮುನ್ನ ಇತ್ತೀಚೆಗೆ ನಿಧನರಾದ ಚಿತ್ರರಂಗದ ಹಿರಿಯ ಕಲಾವಿದರಾದ ಸುದರ್ಶನ್, ಲಂಬೂ ನಾಗೇಶ್ ಹಾಗೂ ಬಿ.ವಿ.ರಾಧಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಿರ್ದೇಶಕರಾದ ಪಿ.ಶೇಷಾದ್ರಿ, ಸುಧಾಕರ್ ಬನ್ನಂಜೆ, ನಂದ ಕಿಶೋರ್, ನಟಿ ರಚಿತಾ ರಾಮ್, ಸಂಭ್ರಮ ಗೌಡ, ನಟ ಆದಿತ್ಯ, ಶಶಿರಾಜ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 'ಒಂದು ಮೊಟ್ಟೆಯ ಕಥೆ' ಚಿತ್ರವನ್ನು ಪ್ರದರ್ಶಿಸಲಾಯಿತು.