ರಾಮನಾಥ್ ಕೋವಿಂದ್ ಪದಗ್ರಹಣ: ಮೈಸೂರಿನಲ್ಲಿ ಸಂಭ್ರಮಾಚರಣೆ
ಮೈಸೂರು, ಜುಲೈ 25:- ಭಾರತದ 14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಅವರು ಇಂದು (ಮಂಗಳವಾರ) ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ ಮೈಸೂರಿನ ಅಶೋಕ್ ಪುರಂನಲ್ಲಿ ಬಿಜೆಪಿ ಹಾಗೂ ಛಲವಾದಿ ಮಹಾಸಭಾ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಸುರೇಶ್ ಕುಮಾರ್ 'ಇದೊಂದು ಸಂಭ್ರಮದ ದಿನ. ರಾಮನಾಥನ್ ಕೋವಿಂದ್ ಅವರಿಗೆ ರಾಷ್ಟ್ರಪತಿ ಭವನಕ್ಕೆ ಪ್ರವೇಶಕ್ಕೆ ಅವಕಾಶ ಕೊಟ್ಟಿರಲಿಲ್ಲ. ಅಂತಹ ವ್ಯಕ್ತಿ ಇಂದು ರಾಷ್ಟ್ರಪತಿಯಾಗಿದ್ದಾರೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿದ ಕೋವಿಂದ್ ಅವರಿಗೆ ದೇಶದ ಅತ್ಯುನ್ನತ ಹುದ್ದೆ ದೊರಕಿರುವುದು ಹೆಮ್ಮೆಯ ವಿಚಾರ' ಎಂದು ಸಂತಸ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜಾತಿ ಭೇದ ಭಾವ ತೋರದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದೆ. ಕೆಳವರ್ಗದವರಿಗೂ ಉನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶವನ್ನು ನೀಡಿದ್ದಲ್ಲದೇ ಅವರ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿದೆ.
ಬಡವರ, ದೀನದಲಿತರಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಜನತೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಇದೇ ವೇಳೆ ನೆರೆದವರಿಗೆ ಸಿಹಿ ವಿತರಿಸಲಾಯಿತು. ಮಾಜಿ ಸಚಿವ ಎಸ್.ಎ.ರಾಮದಾಸ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.