ಸಾಲದ ಶೂಲಕ್ಕೆ ಸಿಕ್ಕ ಹುಣಸೂರಿನ ರೈತ ಆತ್ಮಹತ್ಯೆ
ಮೈಸೂರು, ಜನವರಿ, 15: ಸಾಲಬಾಧೆಯಿಂದ ಮೃತರಾಗುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಲೇ ಇದೆ. ಒಬ್ಬರಾದ ನಂತರ ಮತ್ತೊಬ್ಬರು ಎಂಬಂತೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ.
ಇದೀಗ ಹುಣಸೂರಿನಲ್ಲಿ ರೈತರೊಬ್ಬರು ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ವೆಂಕಟರಾಮಶೆಟ್ಟಿ(70) ಕ್ರಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೆಂಕಟರಾಮಶೆಟ್ಟಿ ಅವರು ತಮ್ಮ ಎರಡು ಎಕರೆ ಭೂಮಿಯಲ್ಲಿ ಅರಿಶಿನ ಮತ್ತು ಜೋಳದ ಬೆಳೆಗಾಗಿ ಗುರುಪುರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿನಿಂದ 3 ಲಕ್ಷ ರು. ಸಾಲ ಪಡೆದಿದ್ದರು. ಅಲ್ಲದೇ ಅಲ್ಪ ಪ್ರಮಾಣದ ಕೈಸಾಲವನ್ನೂ ಮಾಡಿಕೊಂಡಿದ್ದರು.
ಮಳೆ ಸಮಯಕ್ಕೆ ಸರಿಯಾಗಿ ಸಿಗದೆ ಬೆಳೆ ಒಣಗಿ ಸಂಪೂರ್ಣ ನಾಶವಾಗಿತ್ತು. ಇದರಿಂದ ಮನನೊಂದು ಅವರು ಗುರುಪುರ ಮುಖ್ಯರಸ್ತೆಯ ತಮ್ಮ ಜಮೀನಿನ ಬಳಿ ಹೋರಿಗಳನ್ನು ಕಟ್ಟಿಹಾಕುವ ಗುಡ್ಲುವಿನಲ್ಲಿ ಕ್ರಿಮಿನಾಶಕ ಸೇವಿಸಿದ್ದಾರೆ. ವಿಷಯ ತಿಳಿದ ಮನೆಯವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೇಲಿಂದ ಮೇಲೆ ರೈತರು ಸಾವನ್ನಪ್ಪುತ್ತಿದ್ದರೂ ಆತ್ಮಹತ್ಯೆ ತಡೆಗೆ ಯಾವುದೇ ಕ್ರಮಗಳು ಕೈಗೊಳ್ಳುವ ಗೋಜಿಗೆ ಸರ್ಕಾರ ಹೋಗುತ್ತಿಲ್ಲ. ಅಷ್ಟೇ ಅಲ್ಲ ಗಂಭೀರವಾಗಿ ಪರಿಗಣಿಸಿದಂತೆಯೂ ಕಾಣುತ್ತಿಲ್ಲ ಎಂಬುದು ಮಾತ್ರ ನೋವಿನ ಸಂಗತಿಯಾಗಿದೆ.