83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಗ್ರ ಮಾಹಿತಿ
ಮೈಸೂರು, ನವೆಂಬರ್ 23 : ಗುರುವಾರದಿಂದ ಮೈಸೂರಿನಲ್ಲಿ ನಡೆಯುತ್ತಿರುವ 83ನೇ ನುಡಿಹಬ್ಬಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಇದೇ 26ರವರೆಗೆ ಮೂರು ದಿನಗಳ ಕಾಲ ನಗರದ ಮಹಾರಾಜ ಕಾಲೇಜು ಮೈದಾನ ಈಗಾಗಲೇ ಸಜ್ಜುಗೊಂಡಿದೆ.
ಚಿತ್ರಗಳು : ಸಾಂಸ್ಕೃತಿಕ ನಗರಿಯಲ್ಲಿ ಅಕ್ಷರ ಜಾತ್ರೆ
ನವೆಂಬರ್ 24ರಂದು ಬೆಳಿಗ್ಗೆ 8.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ರಾಷ್ಟ್ರಧ್ವಜಾರೋಹಣ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್ ಪರಿಷತ್ತಿನ ಧ್ವಜಾರೋಹಣ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ ನಾಡ ಧ್ವಜಾರೋಹಣ ನೆರವೇರಿಸುವರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಗಳ ಪಟ್ಟಿ
ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲ (ಚಂಪಾ) ಅವರ ಮೆರವಣಿಗೆಗೆ ಬೆಳಿಗ್ಗೆ 9 ಗಂಟೆಗೆ ಅರಮನೆ ಆವರಣದ ಕೋಟೆ ಆಂಜನೇಯ ಸ್ವಾಮಿ ಮುಂಭಾಗದಲ್ಲಿ ಮೈಸೂರು ಜಿಲ್ಲಾ ಪಂಚಾಯತಿ ಅಧ್ಯಕ್ಷ ನಯಿಮಾ ಸುಲ್ತಾನ್ ನಜೀರ್ ಅಹಮದ್ ಚಾಲನೆ ನೀಡುವರು.
ಮೈಸೂರು: ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಮಾದರಿ ಕದ್ದಿದ್ದಂತೆ!
ದರ್ಬಾರ್ ಹಾಲ್ ಮಾದರಿಯ ಬೃಹತ್ ವೇದಿಕೆಯ ಮುಂಬಾಗ ಒಟ್ಟು 25 ಸಾವಿರ ಮಂದಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದ್ದು, ಗಣ್ಯರಿಗಾಗಿ 2 ಸಾವಿರ ಕುಶನ್ ಕುರ್ಚಿಗಳನ್ನು ಜೋಡಿಸಲಾಗಿದೆ. ವೇದಿಕೆಯಲ್ಲಿ ಗ್ರ್ಯಾಂಡ್ ವಿಐಪಿ ಕುರ್ಚಿಗಳಿರಲಿವೆ. ವೇದಿಕೆಯಲ್ಲಿರುವ ಎಲ್ಲರಿಗೂ ಒಂದೇ ಮಾದರಿಯ ಆಸನ ವ್ಯವಸ್ಥೆ ಮಾಡಲಾಗಿದೆ.
ವೇದಿಕೆಯ ವಿಶೇಷತೆಗಳೇನು ?
ಪೆಂಡಾಲ್ ನ ಒಟ್ಟು ವಿಸ್ತೀರ್ಣ 250 ಅಡಿ ಅಗಲ ಮತ್ತು 550 ಅಡಿ ಉದ್ದ ಇರಲಿದ್ದು, ದರ್ಬಾರ್ ಹಾಲ್ ಮಾದರಿಯ ಪ್ರಧಾನ ವೇದಿಕೆ 48 ಅಡಿ ಅಗಲ ಮತ್ತು 135 ಅಡಿ ಉದ್ದವಿದೆ. ಸುಮಾರು 50 ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಇನ್ನು ಇದರಲ್ಲಿ 132 ಅಡಿ ಅಗಲ ಮತ್ತು 550 ಅಡಿ ಉದ್ದದವರೆಗೆ ಯಾವುದೇ ಕಂಬಗಳನ್ನು ಹಾಕಲಾಗಿಲ್ಲ. ಬೃಹತ್ ಗಾತ್ರದ 10 ಎಲ್ಇಡಿ ಪರದೆಗಳನ್ನು ಹಾಕಲಾಗಿದೆ. ಕನ್ನಡ ಧ್ವಜದ ಬಣ್ಣ ಹೊಂದಿರುವ ಸುಮಾರು 350 ಲಾಟಿನುಗಳನ್ನು ಪೆಂಡಾಲ್ ನ ಚಾವಣಿಯಲ್ಲಿ ತೂಗುಹಾಕಿ ಸಿಂಗರಿಸಲಾಗಿದ್ದು, ಸುಮಾರು 450 ರಿಂದ 500 ಫ್ಯಾನ್ ಅಳವಡಿಸಲಾಗಿದೆ.
ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಬೆಳಿಗ್ಗೆ 9 ಗಂಟೆಗೆ ಅರಮನೆ ಆವರಣದ ಕೋಟೆ ಆಂಜನೇಯ ಸ್ವಾಮಿ ಮುಂಭಾಗದಿಂದ ಮೆರವಣಿಗೆ ಆರಂಭವಾಗಲಿದ್ದು, ಇದರಲ್ಲಿ 600 ಜನ ಕಲಾವಿದರು, ಕೆಂಪು , ಹಳದಿ ಸಮವಸ್ತ್ರ ಧರಿಸಿದ 5 ಸಾವಿರ ವಿದ್ಯಾರ್ಥಿಗಳು , ಸಾವಿರ ಮಹಿಳೆಯರು, 10 ಎತ್ತಿನಗಾಡಿ, 15 ಸಾರೋಟ್ ಗಳು, ಪೊಲೀಸ್ ವಾದ್ಯವೃಂದ ಲ್ಲವೂ ಮೆರವಣಿಗೆಯಲ್ಲಿ ಮೇಳೈಸಲಿದೆ. ಜೊತೆಗೆ ಮೈಸೂರು ಒಡೆಯರ್, ಮಹಿಳಾ ಸಾಧಕರು, ವಚನ, ದಾಸ, ಶಿಲ್ಪಕಲೆ ನೀಲಗಾರರ ಪರಂಪರೆ ಸೇರಿದಂತೆ 8 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಲಿದೆ.
ಈಗಾಗಲೇ 8500 ಮಂದಿ ನೋಂದಣಿ
ಸಮ್ಮೇಳನಕ್ಕೆ 1.5 ಲಕ್ಷ ಜನ ಬರುವ ನಿರೀಕ್ಷೆಯಿದ್ದು, ಈಗಾಗಲೇ 8500 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಾಯಿಸಿಕೊಂಡವರಿಗೆ ವಸತಿ ವ್ಯವಸ್ಥೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯನವರು ಸಮ್ಮೇಳನವನ್ನ 24ರ ನಾಳೆ ಕುವೆಂಪು ಪ್ರಧಾನ ವೇದಿಕೆಯಲ್ಲಿ ಬೆಳಗ್ಗೆ 11ಕ್ಕೆ ಉದ್ಘಾಟಿಸಲಿದ್ದು, ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಆಶಯ ನುಡಿ ಆಡುವರು. ನಂತರ ಪ್ರೊ.ಚಂದ್ರಶೇಖರ್ ಪಾಟೀಲ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ.
ಸಮ್ಮೇಳನದಲ್ಲಿ ಬಗೆ-ಬಗೆ ಊಟದ ವ್ಯವಸ್ಥೆ
24 ರಿಂದ 26ರವರೆಗೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಚ್ಚುಕಟ್ಟಾಗಿ ಗಣ್ಯರಿಗೆ, ಆಹ್ವಾನಿತರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನಗರದ ವಿವಿ ಸ್ಪೋರ್ಟ್ಸ್ ಪೆವಿಲಿಯನ್, ಅರಸು ವಸತಿ ಶಾಲೆ ಹಾಗೂ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಆಹಾರ ಪಟ್ಟಿ ಅಂತಿಮಗೊಂಡಿದ್ದು, ಮೈಸೂರು ಭಾಗದ ಖಾದ್ಯಗಳಿಗೆ ಆದ್ಯತೆ ನೀಡಲಾಗಿದೆ. ಮೇಲುಕೋಟೆ ಪುಳಿಯೊಗರೆ, ಕಳ್ಳೆ ಹುಳಿ, ಸಿಹಿ, ಖಾರಾ ಪೊಂಗಲ್, ಹುಚ್ಚೆಳ್ಳು ಚಟ್ನಿ, ಕಜ್ಜಾಯ, ಮೈಸೂರು ಪಾಕ್, ನಂಜನಗೂಡಿನ ರಸಬಾಳೆ ಹಣ್ಣಿಗೆ ಮಹತ್ವ ನೀಡಲಾಗುತ್ತಿದೆ
ಸಮ್ಮೇಳನ ಭದ್ರತೆಗಾಗಿ ಖಾಕಿ ಕಾವಲು
''ಸಮ್ಮೇಳನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಪರಾಧ ಕೃತ್ಯಗಳು, ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ,'' ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ. ''ಬಂದೋಬಸ್ತ್ ಕರ್ತವ್ಯಕ್ಕೆ ಒಟ್ಟು 900 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಏಳು ಕೆಎಸ್ ಆರ್ಪಿ ತುಕಡಿ, ಎಂಟು ಸಿಎಆರ್ ತುಕಡಿಗಳು ಹಾಗೂ ತುರ್ತು ಸೇವೆಗಾಗಿ ಐದು ಅಗ್ನಿ ಶಾಮಕ, ಆರು ಆಂಬುಲೆನ್ಸ್ ವಾಹನ ನಿಯೋಜಿಸಲಾಗಿದೆ,'' ಎಂದು ತಿಳಿಸಿದ್ದಾರೆ.