ಮೈಸೂರು ಜಿಲ್ಲಾಡಳಿತದಿಂದ ಕೊಡಗು ಪ್ರವಾಹಕ್ಕೆ ಸಹಾಯಹಸ್ತ
ಮೈಸೂರು, ಆಗಸ್ಟ್ 18 : ಜೀವ ಉಳಿಸುವ ಜಲ ಈಗ ಪ್ರಳಯ ಸ್ವರೂಪಿಯಾಗಿ ಜನರ ಜೀವ ತೆಗೆಯುವುದಲ್ಲದೇ ಬದುಕಿನ ಬುಡವನ್ನೇ ಕುಸಿಯುವಂತೆ ಮಾಡಿದೆ. ಈ ಪ್ರವಾಹದ ರೌದ್ರತೆ ಎದುರಿಸಲು ಅಲ್ಲಿನ ಜನರಿಗೆ ಬೇಕಿರುವುದು ಮಾನವೀಯ ಮನಸ್ಸುಗಳ ಉದಾರ ಕೊಡುಗೆ.
ಇವತ್ತು ಅವರಿಗೆ ಒಂದು ಹಗ್ಗ, ಒಂದು ಟಾರ್ಚ್, ಛತ್ರಿ, ಸವೆದ ಚಪ್ಪಲಿ, ಗಂಜಿ ಎಲ್ಲವೂ ಪ್ರಾಣ ರಕ್ಷಣೆಯ ಪರಿಕರಗಳಾಗಿವೆ. ಅದನ್ನೇ ಅವರೂ ಬಯಸುತ್ತಿದ್ದಾರೆ. ಬನ್ನಿ ಸೋದರರೇ, ಆತ್ಮೀಯರೇ ಅವರ ನೆರವಿಗೆ ಧಾವಿಸಿ... ನಮಗೇಕೆ ಅದರ ಗೊಡವೆ ಎನ್ನದಿರಿ.
ಹೆಚ್ಚುವರಿ ಸೇನಾಪಡೆ: ರಕ್ಷಣಾ ಸಚಿವೆ ನಿರ್ಮಲಾ ಜತೆ ಎಚ್ಡಿಕೆ ಚರ್ಚೆ
ಅಲ್ಲಿ ಬಸವಳಿಯುತ್ತಿರುವವರು ನಮ್ಮ-ನಿಮ್ಮ ಬಂಧುಗಳೇ ಇರಬಹುದು, ನೆಂಟರಿಷ್ಟರೇ ಆಗಿರಬಹುದು. ಅವೆಲ್ಲವನ್ನೂ ಮೀರಿ ನಮ್ಮಂತೆ ಮನುಷ್ಯರೇ ಹೌದು. ಅದೂ ಎಲ್ಲೋ ದೂರದಲ್ಲಿಲ್ಲ. ನಮ್ಮ ನೆರೆಯ ಕೊಡಗು ಜಿಲ್ಲೆಯಲ್ಲೇ ಇಂತಹ ಘೋರ ಪರಿಸ್ಥಿತಿ ಎದುರಾಗಿದೆ.
ಹಸಿರು ಹೊದ್ದ ಭೂರಮೆಯ ಸೌಂದರ್ಯ ಸವಿಯಲು ನೀವು ಅಲ್ಲಿಗೆ ಭೇಟಿ ನೀಡಿದ್ದಿರಬಹುದು ಮೈಸೂರಿನ ಜನರು ಕೊಡಗಿನ ಜನರ ಸಂಕಟ, ನೋವಿಗೆ ತಾಯಿ ಹೃದಯದಿಂದ ಸ್ಪಂದಿಸಬೇಕಿದೆ. ಅದೇ ನಂಬಿಕೆಯಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಾಮಗ್ರಿಗಳನ್ನು ಪೂರೈಸಲು ಮೈಸೂರು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಜಂಟಿಯಾಗಿ ಅವಶ್ಯ ಸಾಮಗಿಗಳ ಸ್ವೀಕಾರ ಕೇಂದ್ರ'ವನ್ನು ಪುರಭವನದಲ್ಲಿ ಆರಂಭಿಸಿವೆ. ಈಗಾಗಲೇ ಕೇಂದ್ರಕ್ಕೆ ನೆರವಿನ ಕೋಡಿ ಹರಿದು ಬಂದಿದೆ. ಅದು ಪ್ರವಾಹದಂತಾಗಬೇಕಿದೆ.
ಪ್ರವಾಹಪೀಡಿತ ಕೊಡಗಿಗೆ ಇಂದು ಸಿಎಂ ಕುಮಾರಸ್ವಾಮಿ ಭೇಟಿ
ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಹಗ್ಗ, ಕುಡಿಯುವ ನೀರು, ಆಹಾರ ಪದಾರ್ಥಗಳು, ಹೊದಿಕೆ, ಔಷಧ ಇನ್ನಿತರ ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ಸಂಕಷ್ಟದಲ್ಲಿರುವ ಕೊಡಗಿನ ಜನತೆಗೆ ಸಹಾಯಸ್ತ ನೀಡುವಂತೆ ಮೈಸೂರು ಜಿಲ್ಲಾಧಿಕಾರಿಗೆ ಪತ್ರದ ಬರೆದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮಾನವತಾ ಕಾರ್ಯ ಶುರುವಾಗಿದೆ.
ಉತ್ತಮ ಸ್ಪಂದನೆ: ಸಾರ್ವಜನಿಕರು ನೀಡುವ ವಸ್ತುಗಳನ್ನು ಒಂದೇ ಕಡೆ ಸಂಗ್ರಹಿಸಲು ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಲು ಅನುಕೂಲವಾಗಲೆಂದು ಪುರಭವನದಲ್ಲಿ ಅವಶ್ಯ ವಸ್ತುಗಳ ಸ್ವೀಕಾರ ಕೇಂದ್ರ ಆರಂಭಿಸಲಾಗಿದೆ. ಸಾರ್ವಜನಿಕರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆಂದು ಜಗದೀಶ್ ಹೇಳಿದರು.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
7 ಸಾವಿರ ಬಾಟಲ್: ತಕ್ಷಣಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡಲು ಪಾಲಿಕೆ ವತಿಯಿಂದ 5 ಸಾವಿರ ಬಾಟಲ್ಗಳು, ಜತೆಗೆ ದಾನಿಗಳು ನೀಡಿರುವ 2 ಸಾವಿರ ರೂ. ಬಾಟಲ್ ಗಳು ಸೇರಿ ಒಟ್ಟು 7 ಸಾವಿರ ಬಾಟಲ್ಗಳನ್ನು ಕೊಡಗಿಗೆ ಕಳುಹಿಸಿಕೊಡಲಾಗಿದೆ. ತುರ್ತಾಗಿ ಹಗ್ಗಗಳನ್ನು ಕಳುಹಿಸುವಂತೆ ಕೇಳಿದ್ದ ಹಿನ್ನೆಲೆಯಲ್ಲಿ ಖರೀದಿಸಿ ಕಳುಹಿಸಿಕೊಡಲಾಗಿದೆ.
ಟಾರ್ಚ್ ಸಿಗುತ್ತಿಲ್ಲ: ಅತ್ಯಂತ ಅವಶ್ಯ ವಸ್ತುಗಳಲ್ಲಿ ಟಾರ್ಚ್ ಕೂಡ ಒಂದು. ಆದರೆ ಅವಶ್ಯ ವಿರುವಷ್ಟು ಟಾರ್ಚ್ಗಳು ನಗರದಲ್ಲಿ ಲಭ್ಯವಾಗುತ್ತಿಲ್ಲ. ನಗರ ಪಾಲಿಕೆ ಅಧಿಕಾರಿಗಳು ಟಾರ್ಚ್ ಲೈಟ್ಗಳ ಖರೀದಿಗಾಗಿ ಹರ ಸಾಹಸಪಟ್ಟರು. ಪುರಭವನದ ಆವರಣದಲ್ಲಿ ನೆರವು ಸ್ವೀಕರಿಸುತ್ತಿದ್ದಾರೆಂಬ ವಿಚಾರ ತಿಳಿದ ಕೂಡಲೇ ಮೈಸೂರು ಜನತೆ ಸ್ಪಂದಿಸಿದ್ದಾರೆ. ಶಿವರಾಂ ಪೇಟೆ ಪ್ಲಾಸ್ಟಿಕ್ ವಸ್ತು ಮಾರಾಟ ಮಳಿಗೆಯ ಭರತ್ 200 ಬೆಡ್ ಶೀಟ್ ಗಳನ್ನು ತಂದು ಕೊಟ್ಟಿದ್ದಾರೆ.
ಹೆಲಿಕಾಪ್ಟರ್ ಮೂಲಕ ಆಹಾರ: ಇದೇ ವೇಳೆ 4 ಕೆಜಿ ಬ್ರೆಡ್, 4 ಕೆಜಿ ರಸ್ಕ್ ಹಾಗೂ 2 ಕೆಜಿ ಒಣಖರ್ಜೂರ ಇರುವ ಆಹಾರದ ಕಿಟ್ಗಳನ್ನು ಜಿಲ್ಲಾಡಳಿತ ಸಿದ್ಧಗೊಳಿಸಿದ್ದು, ಪ್ರವಾಹದಲ್ಲಿ ಸಿಲುಕಿರುವವರಿಗೆ ಹೆಲಿಕಾಪ್ಟರ್ ಮೂಲಕ ತಲುಪಿಸಲಿದೆ. ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸಿಟಿಜನ್ ಫೋರಂ ಫಾರ್ ಕೊಡಗು ಫ್ಲಡ್ ರೀಲಿಪ್ ತಂಡದ ವಿ.ಕಾರ್ತಿಕ್, ಜಿಎಸ್ ಎಸ್ಎಸ್ ಶ್ರೀಹರಿ, ರಮೇಶ್ ಕಿಕ್ಕೇರಿ ನೇರವಾಗಿದ್ದಾರೆ. ಎನ್ಐಇ, ಎಂಐಟಿ, ಕಾವೇರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ಆಗಮಿಸುವಂತೆ ಕೋರಲಾಗಿದೆ.