ಮೈಸೂರು-ಬೆಂಗಳೂರು: ಚತುಷ್ಪಥ ನಿರ್ಮಾಣ ಎಲ್ಲೆಲ್ಲಿ?
ಮೈಸೂರು, ಮೇ 31: ಮೈಸೂರು ಮತ್ತು ಬೆಂಗಳೂರು ಭಾಗದಲ್ಲಿ ರಸ್ತೆ ಸಾರಿಗೆಗೆ ಸುಗಮಾವಕಾಶ ಕಲ್ಪಿಸಲು ಲೋಕೋಪಯೋಗಿ ಸಚಿವ ಎಚ್ ಸಿ ಮಹದೇವಪ್ಪ ಅವರು ಒಂದಷ್ಟು ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದ್ದಾರೆ.
ತಕ್ಷಣಕ್ಕೆ, ಜೂನ್ 6ರಿಂದ ಮೈಸೂರು ಮತ್ತು ನಂಜನಗೂಡು ನಡುವಣ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಚತುಷ್ಫಥ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಈ ಚತುಷ್ಫಥವು ನೆರೆಯ ಕೇರಳಕ್ಕೆ ಹೊಂದಿಕೊಂಡಂತೆ ಕೊಳ್ಳೇಗಾಲದವರೆಗಿನ ರಾಷ್ಟ್ರೀಯ ಹೆದ್ದಾರಿ (NH 212) ನಿರ್ಮಾಣದ ಒಂದು ಭಾಗವಾಗಿದೆ.
ಬೆಂಗಳೂರು-ಕನಕಪುರ ರಸ್ತೆ ಅಭಿವೃದ್ಧಿ, ಬೆಂಗಳೂರು-ಮೈಸೂರು-ಬಂಟ್ವಾಳ ಹೆದ್ದಾರಿಯನ್ನು ಷಟ್ಪಥವನ್ನಾಗಿ ಪರಿವರ್ತಿಸಲಾಗುವುದು. ತುಮಕೂರು-ಶಿವಮೊಗ್ಗ ರಸ್ತೆಯನ್ನು ಚತುಷ್ಫಥವನ್ನಾಗಿಯೂ ಪರಿವರ್ತಿಸಲಾಗುವುದು ಎಂದು ಸಚಿವ ಮಹದೇವಪ್ಪ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಂದಾಜು ಪ್ರತಿ 800 ಮೀಟರಿಗೆ ಒಂದು ರಸ್ತೆಯುಬ್ಬು (ಹಂಪ್) ಇದೆ. ಹೀಗೆ ಒಟ್ಟು 137 ಹಂಪ್ ಗಳಿವೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಇದನ್ನೆಲ್ಲಾ ತೆಗೆದುಹಾಕಿ solar blinkers ಅಳವಡಿಸಲಾಗುವುದು. ಇದರಿಂದ ಪ್ರಮಾಣದ ಸಮಯವೂ ಉಳಿಯುತ್ತದೆ. ಅಮೂಲ್ಯ ಜೀವಗಳೂ ಉಳಿಯುತ್ತವೆ ಎಂದು ಅವರು ತಿಳಿಸಿದರು.
ಮೈಸೂರು-ನಂಜನಗೂಡು ನಡುವಣ 21.51 ಕಿಮೀ ಉದ್ದನೆಯ ಚತುಷ್ಫಥ ನಿರ್ಮಾಣವು 585.74 ಕೋಟಿ ರೂ. ವೆಚ್ಚದಲ್ಲಿ 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವ ಮಹದೇವಪ್ಪ ಅವರು ತಿಳಿಸಿದ್ದಾರೆ. (ಕೊಳ್ಳೇಗಾಲ ಹೆದ್ದಾರಿಗೆ 2667 ಮರ ಮಾರಣಹೋಮ)
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಉಸ್ತುವಾರಿಯಲ್ಲಿ ಇದೇ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಟಿ ನರಸೀಪುರ ಮತ್ತು ಕೊಳ್ಳೇಗಾಲ ಮಧ್ಯೆ 26.90 ಕಿಮೀ ಉದ್ದದ ಹೆದ್ದಾರಿ, ಗುಂಡ್ಲುಪೇಟೆಯಲ್ಲಿ 2 ಕಿಮೀ ಉದ್ದನೆಯ ಬಾಕ್ಸ್ ಮಾದರಿ ಚರಂಡಿ, ಗುಂಡ್ಲುಪೇಟೆಯಿಂದ ಅಭಯಾರಣ್ಯದಲ್ಲಿನ ಮುಲೆಹೊಳೆವರೆಗಿನ 15.90 ಕಿಮೀ ರಸ್ತೆ ಅಗಲೀಕರಣ, ಮೈಸೂರು ನಗರದಲ್ಲಿಯೇ 9 ಕಿಮೀ ಉದ್ದದ ಮಾರ್ಗದಲ್ಲಿ ಚತುಷ್ಫಥ ನಿರ್ಮಾಣ ಮತ್ತು ಬಾಕ್ಸ್ ಮಾದರಿ ಚರಂಡಿ ನಿರ್ಮಾಣ ಕಾರ್ಯವನ್ನು ಶೀಘ್ರವೇ ಆರಂಭಿಸಲಾಗುವುದು. ಇದಕ್ಕಾಗಿ ಮೈಸೂರು ರೇಸ್ ಕೋರ್ಸ್ ಗೆ ಸೇರಿದ 8 ಮೀಟರ್ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವ ಮಹದೇವಪ್ಪ ಅವರು ವಿವರಿಸಿದ್ದಾರೆ.
ಈ ಭಾಗಗಳಲ್ಲಿ ರಸ್ತೆ ನಿರ್ಮಾಣಕ್ಕಾಗಿ ಭೂಮಿ ನೀಡಿರುವವರಿಗೆ 28 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ ಹಾಗಾಗಿ ವಿಳಂಬವಿಲ್ಲದೆ ಪೂರ್ವನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಯಲಿದೆ ಎಂದು ಸಚಿವರು ಆಶಿಸಿದರು.
2013ರ ಡಿಸೆಂಬರ್ 31ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಯೋಜನೆಗೆ ಅನುಮತಿ ನೀಡಿದೆ. 489.29 ಕೋಟಿ ರೂ ವೆಚ್ಚದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಕೇರಳದಿಂದ ಕೊಳ್ಳೇಗಾಲದವರೆಗಿನ ಈ ರಸ್ತೆಯನ್ನು ದ್ವಿಪಥ ಮತ್ತು ಚತುಷ್ಫಥವನ್ನಾಗಿ ನಿರ್ಮಿಸಲಾಗುವುದು.
ಮರಗಳನ್ನು ಕಡಿಯದೆಯೇ ರಸ್ತೆಯನ್ನು ಅಗಲೀಕರಣ ಮಾಡುವುದು ದುಸ್ಸಾಧ್ಯ. ನಾನೂ ಸಹ ಮರ ಕಡಿಯುವುದನ್ನು ವಿರೋಧಿಸುತ್ತೇನೆ. ಆದರೆ ನಾನು ಅಸಹಾಯಕ. ಹೆದ್ದಾರಿ ಮಿರ್ಮಿಸಲು 2,667 ಮರಗಳನ್ನು ಕಡಿಯಲೇಬೇಕಿದೆ. ಇದು ಹೆಚ್ಚು ಸಂಚಾರವಿರುವ ರಸ್ತೆಯಾಗಿದೆ. ಅಪಘಾತ ವಲಯವೂ ಆಗಿದೆ. ಕಡಿದುಹಾಕಲಾದ ಮರಗಳನ್ನು ತೆರವು ಗೊಳಿಸಿದ ಬಳಿಕವಷ್ಟೇ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು. ಮರಗಳನ್ನು ಕಡಿಯಲು ಮತ್ತು ಕಡಿದ ಮರಗಳಿಗೆ ಪರ್ಯಾಯವಾಗಿ ಹೊಸ ಸಸಿಗಳನ್ನು ನೆಡಲು ಕರ್ನಾಟಕ ಅರಣ್ಯ ಇಲಾಖೆಗೆ ಅಗತ್ಯ ಹಣಕಾಸನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ, ನಂಜನಗೂಡು, ಮೈಸೂರು ಗ್ರಾಮಾಂತರ, ಮೈಸೂರು ನಗರ ಮತ್ತು ಟಿ ನರಸೀಪುರ ಭಾಗಗಳಲ್ಲಿ ಯೋಜನೆಗಾಗಿ ಸುಮಾರು 2,78,216 ಚದರಡಿ ಭೂಸ್ವಾಧೀನವಾಗಿದೆ.
NH 212 ಹೆದ್ದಾರಿಯು 131 ಕಿಮೀ ಉದ್ದವಾಗಿದ್ದು, ಬಂಡೀಪುರ ಅರಣ್ಯದಲ್ಲಿ ಉಟ್ಟಂಬಳ್ಳಿ ಬಳಿ ಮೊಳೆಹೊಳೆಯಿಂದ ಆರಂಭವಾಗಿ ಕೊಳಿಕ್ಕೋಡ್ ಬಳಿ ಅಂತ್ಯವಾಗುತ್ತದೆ. ಇದೇ ಯೋಜನೆಯ ಅಂಗವಾಗಿ ನಂಜನಗೂಡು ಬಳಿ ಕಬಿನಿ ನದಿಗೆ ಅಡ್ಡಲಾಗಿ ದೊಡ್ಡ ಸೇತುವೆ ನಿರ್ಮಾಣವೂ ಆಗಲಿದೆ.