ಮೈಸೂರು ದಸರಾ ಕೆಎಸ್ ಆರ್ಟಿಸಿ ಪ್ಯಾಕೇಜ್ ಟೂರಿಗೆ ಭರ್ಜರಿ ರೆಸ್ಪಾನ್ಸ್
ಮೈಸೂರು, ನವೆಂಬರ್. 2: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ಕೆಎಸ್ ಆರ್ಟಿಸಿ ರೂಪಿಸಿದ್ದ ಪ್ಯಾಕೇಜ್ ಪ್ರವಾಸಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟಾರೆ ಈ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಒಟ್ಟು 4.03 ಲಕ್ಷ ಆದಾಯ ನಿಗಮಕ್ಕೆ ಲಭಿಸಿದೆ.
ಜಲದರ್ಶನಿ, ಗಿರಿದರ್ಶಿನಿ ಹಾಗೂ ದೇವದರ್ಶಿನಿ ಎಂಬ ಮೂರು ಬಗೆಯ ಪ್ಯಾಕೇಜ್ ಪ್ರವಾಸ ಯೋಜನೆಯನ್ನು ಅ. 11ರಿಂದ 25ರವರೆಗೆ ಕೆಎಸ್ ಆರ್ಟಿಸಿ ಜಾರಿಗೆ ತಂದಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ₹ 82,260ನಷ್ಟು ಆದಾಯ ಕಡಿಮೆ ಬಂದಿದ್ದರೂ, ಸಾರ್ವಜನಿಕರು ವ್ಯಕ್ತಪಡಿಸಿದ ಬೇಡಿಕೆಯಿಂದ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು.
ಕಳೆದ ವರ್ಷ ಕೇವಲ 32 ಬಸ್ಗಳನ್ನು ಮಾತ್ರ ಯೋಜನೆಗೆ ಬಳಸಿಕೊಳ್ಳಲಾಗಿತ್ತು. ಈ ಬಾರಿ ಒಟ್ಟು 36 ಬಸ್ಗಳನ್ನು ಬಳಸಿಕೊಳ್ಳಲಾಗಿದೆ.
ಸಾರ್ವಜನಿಕರು ಜಲದರ್ಶಿನಿ ಹಾಗೂ ಗಿರಿದರ್ಶಿನಿಗೆ ತೋರಿಸಿದ ಉತ್ಸಾಹ ದೇವದರ್ಶಿನಿಗೆ ವ್ಯಕ್ತಪಡಿಸಿಲ್ಲ. ಜಲದರ್ಶಿನಿಯಿಂದ 1.86 ಲಕ್ಷ ಆದಾಯ ಬಂದಿದ್ದರೆ, ಗಿರಿದರ್ಶಿನಿಯಿಂದ 1.83 ಲಕ್ಷ ಆದಾಯ ಲಭಿಸಿದೆ. ಆದರೆ, ದೇವದರ್ಶಿನಿಯಿಂದ ಕೇವಲ 33,703 ಮಾತ್ರ ಆದಾಯ ಸಿಕ್ಕಿದೆ.
ದೀಪಾವಳಿಗೆ ಕೆಎಸ್ಆರ್ಟಿಸಿ ಇಂದ 1500 ಹೆಚ್ಚುವರಿ ಬಸ್
ದೇವದರ್ಶಿನಿಗೆ ಅತಿ ಕಡಿಮೆ ದರ ನಿಗದಿ ಮಾಡಲಾಗಿತ್ತು. ಆದರೂ, ಪ್ರವಾಸಿಗಳು ಜಲಾಶಯಗಳು ಹಾಗೂ ಬೆಟ್ಟಗುಡ್ಡಗಳನ್ನು ಕಣ್ತುಂಬಿಕೊಳ್ಳಲು ತೋರಿಸಿದ ಉತ್ಸಾಹವನ್ನು ದೇಗುಲಗಳಿಗೆ ತೋರಿಸಿಲ್ಲ. ಈ ಬಾರಿ ಕಡಿಮೆ ಜನರಿದ್ದರೂ ಬಸ್ಗಳನ್ನು ರಿಯಾಯಿತಿ ದರದಲ್ಲಿ ಚಾಲನೆ ಮಾಡಿರುವುದು ವಿಶೇಷ ಎನಿಸಿದೆ.
ಆದಾಯದಲ್ಲಿ ಕೊಂಚ ಇಳಿಕೆ
ಕೆಲವೊಂದು ಸಂದರ್ಭಗಳಲ್ಲಿ ಕೇವಲ ಐದಾರು ಮಂದಿಯಷ್ಟೇ ಪ್ರಯಾಣಿಕರಿದ್ದರೂ ಬಸ್ಗಳನ್ನು ನಿಗದಿಯಂತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹೀಗಾಗಿ, ಬಸ್ಗಳ ಸಂಖ್ಯೆ ಹೆಚ್ಚಾಗಿ ಆದಾಯದಲ್ಲಿ ಕೊಂಚ ಇಳಿಕೆಯಾಗಿದೆ ಎಂದು ಕೆಎಸ್ ಆರ್ಟಿಸಿ ಮೂಲಗಳು ಹೇಳಿವೆ.
ಮೈಸೂರು ದಸರಾ: ಗ್ರಾಮೀಣ ಭಾಗದ ಜನರಿಗೆ ಕೆಎಸ್ ಆರ್ ಟಿಸಿಯಿಂದ ಬಂಪರ್ ಕೊಡುಗೆ
ಗಿರಿದರ್ಶಿನಿಗೆ 350 ರೂ. ನಿಗದಿ
ಗಿರಿದರ್ಶಿನಿಯಡಿ 350 ರೂ.ದರ ನಿಗದಿ ಮಾಡಿ ಬಂಡೀಪುರ, ಗೋಪಾಲಸ್ವಾಮಿಬೆಟ್ಟ, ಬಿಳಿಗಿರಿರಂಗನಬೆಟ್ಟ, ನಂಜನಗೂಡು, ಚಾಮುಂಡಿಬೆಟ್ಟಗಳಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಒಟ್ಟು 325 ಕಿ.ಮೀ ಸಂಚಾರ ಇರುತ್ತಿತ್ತು. ಈ ಪ್ಯಾಕೇಜ್ನಡಿ ಮಕ್ಕಳಿಗೆ 175 ರೂ.ದರ ನಿಗದಿಯಾಗಿತ್ತು.
ದಸರಾ ಸಾಲು-ಸಾಲು ರಜೆ : ಕೆಎಸ್ಆರ್ಟಿಸಿಯಿಂದ 2500 ಬಸ್
ಜಲದರ್ಶಿನಿಗೆ 375 ರೂ.
ಜಲದರ್ಶಿನಿಯಡಿ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ, ನಿಸರ್ಗಧಾಮ, ಅಬ್ಬಿಜಲಪಾತ, ರಾಜಾಸೀಟ್, ಹಾರಂಗಿ ಜಲಾಶಯ, ಕೆ.ಆರ್.ಎಸ್ಗಳು ಇದ್ದವು. ಹಿರಿಯರಿಗೆ 375 ರೂ., ಮಕ್ಕಳಿಗೆ 190 ರೂ. ಟಿಕೆಟ್ ದರ ನಿಗದಿಯಾಗಿತ್ತು. ಒಟ್ಟು 350 ಕಿ.ಮೀ. ದೂರದ ಪ್ರಯಾಣ ಇದಾಗಿತ್ತು.
ದೇವದರ್ಶಿನಿಗೆ 275 ರೂ.
ದೇವದರ್ಶಿನಿಯಡಿ ನಂಜನಗೂಡು, ತಲಕಾಡು, ಬ್ಲಫ್, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆ.ಆರ್.ಎಸ್ ಅನ್ನು ಸೇರಿಸಲಾಗಿತ್ತು. ಒಟ್ಟು 250 ಕಿ.ಮೀ ದೂರದ ಈ ಪ್ರಯಾಣಕ್ಕೆ ಹಿರಿಯರಿಗೆ 275 ರೂ. ಹಾಗೂ ಮಕ್ಕಳಿಗೆ 140 ರೂ.ಟಿಕೆಟ್ ದರ ನಿಗದಿಯಾಗಿತ್ತು. ಈ ಯೋಜನೆಯ ಎಲ್ಲಾ ಬಸ್ಗಳೂ ಬೆಳಗ್ಗೆ 6.30ಕ್ಕೆ ಗ್ರಾಮಾಂತರ ಬಸ್ನಿಲ್ದಾಣದಿಂದ ಹೊರಡುತ್ತಿದ್ದವು.
ಮುಂಚಿತವಾಗಿ ಬುಕಿಂಗ್ ಮಾಡುವ ಸೌಲಭ್ಯವನ್ನೂ ಈ ಬಾರಿ ಒದಗಿಸಲಾಗಿತ್ತು. ಒಟ್ಟಿನಲ್ಲಿ ರಾಜ್ಯ ರಸ್ತೆ ಸಾರಿಗೆಯ ಭರ್ಜರಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿರುವುದಂತೂ ಸಂತಸದ ವಿಚಾರವೇ ಸರಿ.