ಮೈಸೂರು ದಸರಾ ಅರ್ಜುನ ಬಳ್ಳೆ ಶಿಬಿರದಿಂದ ಹೋಗಿದ್ದೆಲ್ಲಿಗೆ?
ಮೈಸೂರು, ಜನವರಿ, 21: ನಾಲ್ಕು ದಿನಗಳ ಹಿಂದೆ ತಪ್ಪಿಸಿಕೊಂಡಿದ್ದ ಮೈಸೂರು ದಸರಾ ಜಂಬುಸವಾರಿಯ ಕ್ಯಾಪ್ಟನ್ ಅರ್ಜುನ ಮಾನಂದವಾಡಿ-ಮೈಸೂರು ಹೆದ್ದಾರಿ ಬಳಿ ಇರುವ ಬಳ್ಳೆ ಅರಣ್ಯ ಶಿಬಿರಕ್ಕೆ ಮರಳಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆತಂಕದಿಂದ ದೂರವಾಗಿದ್ದಾರೆ.
ಕಾಪ್ಟನ್ ಅರ್ಜುನ ಮದವೇರಿ ಬಂಡೀಪುರ ರಾಷ್ಟ್ರೀಯ ಉದ್ಯಾನದ ದೊಡ್ಡ ಬೈರನಕುಪ್ಪೆ ಅರಣ್ಯ ವಲಯದ ಬಳ್ಳೆ ಆನೆ ಶಿಬಿರದಿಂದ ತಪ್ಪಿಸಿಕೊಂಡಿದ್ದನು. ಈತನನ್ನು ಮಾವುತರು ನಾಲ್ಕು ದಿನದಿಂದ ಹುಡುಕಿದರೂ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಈತನ ಮರಳುವಿಕೆ ಇದೀಗ ಎಲ್ಲರಲ್ಲೂ ಸಂತಸ ತಂದಿದೆ.[ಅಂಬಾರಿ ಹೊತ್ತ ಅರ್ಜುನನ ತಾಲೀಮು ಹೇಗಿತ್ತು?]
ದಸರಾ ಅಂಬಾರಿ ಆನೆ ಅರ್ಜುನ ನಾಲ್ಕು ದಿನಗಳ ಹಿಂದೆ ಮದವೇರಿ ಆನೆ ಶಿಬಿರದಿಂದ ತಪ್ಪಿಸಿಕೊಂಡು ಕಾಡಿಗೆ ಹೋಗಿದ್ದನು. ಮದವೇರಿದ ಆತನ ವರ್ತನೆ ಕಂಡ ಮಾವುತರು ಹತ್ತಿರ ಹೋಗಲು ಹೆದರುತ್ತಿದ್ದರು. ಹೀಗಾಗಿ ಮಾವುತರ ಕಣ್ಣು ತಪ್ಪಿಸಿ ಕಾಡಿನತ್ತ ಹೋದ ಅರ್ಜುನ ಸಂಗಾತಿ ಹುಡುಕುತ್ತಾ ಅಲೆದಿದ್ದನು.
ಅರ್ಜುನನನ್ನು ಹುಡುಕುವಲ್ಲಿ ಮಾವುತರು ಹೈರಾಣವಾಗಿದ್ದರು. ನಾಲ್ಕು ದಿನಗಳ ಕಾಲ ಯಾರ ಕಣ್ಣಿಗೂ ಬೀಳದ ಅರ್ಜುನ ಪತ್ತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಂಡು ಕಾಡನ್ನೆಲ್ಲಾ ಜಾಲಾಡಿದ್ದರು. ಆದರೂ ಆತನ ಸುಳಿವಿರಲಿಲ್ಲ.[ಪ್ರಾಣಿಗಳ ಮೂತ್ರ ವಾಸನೆ ಬಂದೆಡೆ ಆನೆಗಳು ಸುಳಿಯುವುದಿಲ್ಲವಂತೆ!]
ಮಾನಂದವಾಡಿ-ಮೈಸೂರು ಹೆದ್ದಾರಿ ಬಳ್ಳೆ ಆನೆ ಶಿಬಿರದ ಮಾರ್ಗವಾಗಿ ಹಾದು ಹೋದ ಅರ್ಜುನ ಜನರಿಗೆ, ವಾಹನಗಳಿಗೆ ಉಪಟಳ ನೀಡುತ್ತಿದ್ದಾನೆಯೇ ಎಂಬ ಭಯ ಕಾಡಿತ್ತು. ಆದರೆ ಮದ ಇಳಿದ ಅರ್ಜುನ ಶಾಂತನಾಗಿ ಬಳ್ಳೆ ಅರಣ್ಯ ಶಿಬಿರಕ್ಕೆ ಮರಳಿದ್ದು ಎಂದಿನಂತೆ ತನ್ನ ಕಾರ್ಯದಲ್ಲಿ ತೊಡಗಿದ್ದಾನೆ. ಬಳ್ಳೆ ಆನೆ ಶಿಬಿರದ ಸಿಬ್ಬಂದಿಗಳು ನೆಮ್ಮದಿಯಿಂದ ಈಗ ಕೆಲಸ ಮಾಡುತ್ತಿದ್ದಾರೆ.