ಹುಣಸೂರು ನಗರಸಭೆಯಲ್ಲಿ 'ಕೈ' ಮುರಿದ ಪ್ರತಾಪ್-ವಿಶ್ವನಾಥ್ ಜೋಡಿ
ಮೈಸೂರು, ಜನವರಿ 19 : ಹುಣಸೂರು ನಗರಸಭೆಯಲ್ಲಿ ಶುಕ್ರವಾರ ನಡೆದ ಪ್ರಯೋಗವೊಂದು ರಾಜ್ಯದಾದ್ಯಂತ ಸುದ್ದಿಯಾಯಿತು. ಬಿಜೆಪಿ ಹಾಗೂ ಜೆಡಿಎಸ್ ಜೊತೆಯಾಗಿ ಸೇರಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಡಲು ಯಶಸ್ವಿಯಾದವು. ಸಂಸದ ಪ್ರತಾಪ್ ಸಿಂಹ ಅವರ ಚಾಣಾಕ್ಷ ನಡೆ ಹಾಗೂ ಜೆಡಿಎಸ್ ನಿಂದಲೂ ಅಂಥದ್ದೇ ಚತುರತೆ ಪ್ರದರ್ಶನ ಮಾಡಿದ್ದು ಸುದ್ದಿಯಾಗಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದ ಶಿವಕುಮಮಾರ್ ಹುಣಸೂರು ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದರು. ಜೆಡಿಎಸ್ ನ ತಂತ್ರಗಾರಿಕೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಅವರ ಪಾತ್ರವಿದೆ ಎಂಬ ಮಾತು ಕೇಳಿಬರುತ್ತಿದೆ. ಒಟ್ಟಿನಲ್ಲಿ ನಗರಸಭೆಯಲ್ಲಿನ ಕಾಂಗ್ರೆಸ್ ಸದಸ್ಯರನ್ನು ಜೆಡಿಎಸ್ ಗೆ ಸೆಳೆಯುವಲ್ಲಿ ಸಫಲರಾಗಿದ್ದರಿಂದ ಅಧಿಕಾರ ಹಿಡಿಯಲು ಸಾಧ್ಯವಾಗಿದೆ.
'ಸಾಯುವವರೆಗೂ ನಾನು ವಿಶ್ವೇಶ್ವರ ಭಟ್ ಮತ್ತು ಮೋದಿಜಿ ನಿಷ್ಠ'
ಈ ಮಧ್ಯೆ ಕುತೂಹಲಕಾರಿ ಬೆಳವಣಿಗೆ ಎಂಬಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಜೆಡಿಎಸ್ ಪರ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಿ, ಮನವೊಲಿಸಿದ್ದು ಪ್ರಜ್ವಲ್ ರೇವಣ್ಣ ಎಂಬುದು ಸದ್ಯಕ್ಕೆ ಚರ್ಚೆ ಆಗುತ್ತಿದೆ.
ಕಾಂಗ್ರೆಸ್ ಪಕ್ಷದ ಆರು ಸದಸ್ಯರು, ಜೆಡಿಎಸ್ ನ ಆರು ಸದಸ್ಯರು, ಇಬ್ಬರು ಪಕ್ಷೇತರರು ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಸೇರಿದಂತೆ 15 ಮತ ಪಡೆದು ಶಿವಕುಮಾರ್ ಆಯ್ಕೆಯಾದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಸೌರಭ ಸಿದ್ದರಾಜ್ ಕಾಂಗ್ರೆಸ್ ನ 9, ಜೆಡಿಎಸ್ ನ ಮೂವರು, ಪಕ್ಷೇತರ ಸದಸ್ಯ ಹಾಗೂ ಶಾಸಕ ಎಚ್.ಪಿ.ಮಂಜುನಾಥ್ ಸೇರಿದಂತೆ 14 ಮತಗಳನ್ನು ಪಡೆದಿದ್ದರು.
ಹುಣಸೂರು ಕ್ಷೇತ್ರ : ಮಂಜುಗೆ ಹ್ಯಾಟ್ರಿಕ್ ಗೆಲುವಿಗೆ ತಡೆ ಸಾಧ್ಯವೇ?
ಈ ಹಿಂದೆ ಜೆಡಿಎಸ್ ನ ಭದ್ರಕೋಟೆಯಾಗಿದ್ದ ಹುಣಸೂರು ನಗರಸಭೆಯನ್ನು ಕಾಂಗ್ರೆಸ್ ಪಕ್ಷ ಕಸಿದುಕೊಂಡಿತ್ತು. ಆದಕ್ಕೆ ಪ್ರತಿಯಾಗಿ ಈಗ ಜೆಡಿಎಸ್ ತನ್ನ ರಾಜಕೀಯ ಚತುರತೆ ಮೆರೆದು, ತನ್ನ ಪಾಬಲ್ಯವನ್ನು ಮತ್ತೆ ಸ್ಥಾಪಿಸಿದೆ.
ಎಚ್.ವಿಶ್ವನಾಥ್ ಹಾಗೂ ಸಂಸದ ಪ್ರತಾಪ್ ಸಿಂಹ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರಿಂದ ನಾನಾ ಊಹಾಪೋಹಕ್ಕೆ ಕಾರಣವಾಯಿತು. ಇನ್ನು ಈ ಕುರಿತಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಜೆಡಿಎಸ್ ಅಭ್ಯರ್ಥಿ ಜನಪರ ಕಾಳಜಿಯುಳ್ಳವರು. ಅವರನ್ನು ಗೆಲ್ಲಿಸುವುದು ನನ್ನ ಗುರಿಯಾಗಿತ್ತು ಅಷ್ಟೇ. ಕಾಂಗ್ರೆಸ್ ಪರಾಭವಗೊಂಡಿರುವುದರಿಂದ ಈ ಬಾರಿಯ ಗೆಲುವು ಜೆಡಿಎಸ್ ನವರದ್ದಾಗಿದೆ ಎಂದರು.