ಮೈಸೂರಿಗೆ ಏನೇನು ತಂದಿದ್ದೀನಿ ನೋಡಿ: ಪ್ರತಾಪ್ ಸಿಂಹ ರಿಪೋರ್ಟ್ ಕಾರ್ಡ್
Recommended Video
ಬೆಂಗಳೂರು, ಜೂನ್ 28: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ನಾಲ್ಕು ವರ್ಷದ ಅವಧಿಯಲ್ಲಿ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಸಾಧನೆಯ ರಿಪೋರ್ಟ್ ಕಾರ್ಡ್ಅನ್ನು ಸಂಸದ ಪ್ರತಾಪ್ ಸಿಂಹ ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಮೇ 27ರಂದು ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ ಫೇಸ್ಬುಕ್ ಲೈವ್ ವಿಡಿಯೋದಲ್ಲಿ ಮಾತನಾಡಿದ್ದ ಪ್ರತಾಪ್ ಸಿಂಹ, ಮೋದಿ ಆಡಳಿತದಲ್ಲಿ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಕೆಲಸಗಳ ಕುರಿತು ಮಾಹಿತಿ ನೀಡಬೇಕಿದೆ. ಆದರೆ, ಅದನ್ನು ಈಗಲೇ ನೀಡುವುದಿಲ್ಲ. ಅದರ ಕುರಿತು ವಿವರವಾದ ಮಾಹಿತಿಯುಳ್ಳ ಪುಸ್ತಕ ಹೊರತರುವುದಾಗಿ ಹೇಳಿದ್ದರು.
ಅಭಿವೃದ್ಧಿ ಕುರಿತ ಪುಸ್ತಕ ತರಲಿದ್ದಾರಂತೆ ಪ್ರತಾಪ್ ಸಿಂಹ
ಈ ಹೇಳಿಕೆ ನೀಡಿದ ಒಂದು ತಿಂಗಳ ಬಳಿಕ ಪ್ರತಾಪ್ ಸಿಂಹ ಅವರು, ಎನ್ಡಿಎ ಸರ್ಕಾರದ ಅವಧಿಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿಯುಳ್ಳ ಪುಸ್ತಕವನ್ನು ಹೊರತಂದಿದ್ದಾರೆ.
12 ಪುಟಗಳ ಚಿತ್ರಸಹಿತ ಮಾಹಿತಿಯಲ್ಲಿ 30 ಅಂಶಗಳನ್ನು ಈ ಕಿರುಪುಸ್ತಕ ಒಳಗೊಂಡಿದೆ. ಇದನ್ನು ಪ್ರತಾಪ್ ಸಿಂಹ ಟ್ವಿಟ್ಟರ್ ಮತ್ತು ಫೇಸ್ಬುಕ್ಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಹನ್ನೆರಡು ಪುಟಗಳ ಪುಸ್ತಕದಲ್ಲಿ ಏನೇನಿವೆ ನೋಡಿ...
ಪ್ರತಾಪ್ ಸಿಂಹ ತಂದಿದ್ದೇನು?
ಪುಸ್ತಕದ ಮುಖಪುಟದಲ್ಲಿ 4 ವರ್ಷಗಳಲ್ಲಿ ಮೋದಿ ಎಂದು ದೊಡ್ಡ ಶೀರ್ಷಿಕೆಯನ್ನು ಪ್ರಕಟಿಸಲಾಗಿದೆ. ಮೈಸೂರಿಗೆ ಕೊಟ್ಟಿದ್ದೇನು? ಪ್ರತಾಪ್ ಸಿಂಹ ತಂದಿದ್ದೇನು? ಎಂಬ ಅಡಿಶೀರ್ಷಿಕೆ ಇದೆ.
ಮೈಸೂರು-ಬೆಂಗಳೂರು ಜೋಡಿ ರೈಲು ಹಳಿ ಹಾಕುವ ಕಾರ್ಯ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಆರಂಭವಾದರೂ 10 ವರ್ಷದ ಯುಪಿಎ ಅವಧಿಯಲ್ಲಿ ಪೂರ್ಣಗೊಳಿಸಲು ಆಗಿರಲಿಲ್ಲ. ನಾನು ಸಂಸದನಾದ ಪ್ರಾರಂಭದಲ್ಲಿ ರೈಲ್ವೆ ಸಚಿವರಾಗಿದ್ದ ಸದಾನಂದ ಗೌಡರ ಸಹಾಯದಿಂದ ಅನುದಾನ ಬಿಡುಗಡೆ ಮಾಡಿಸಿ, ಎಲ್ಲ ಕೆಲಸ ಮುಗಿಸಿ ಪ್ರಧಾನಿ ಮೋದಿ ಅವರಿಂದ 2018ರ ಫೆಬ್ರುವರಿ 19ರಂದು ಉದ್ಘಾಟನೆ ಮಾಡಿಸಿದ್ದೇನೆ.
ಎರಡೇ ವರ್ಷದಲ್ಲಿ ಮೈಸೂರಿಗೆ ಪಾಸ್ಪೋರ್ಟ್ ಸೇವಾ ಕೇಂದ್ರ ತೆರೆಯುವಂತೆ ಮಾಡಿದ್ದೇನೆ.
ಸಂಸದ ಪ್ರತಾಪ್ ಸಿಂಹ ಜನ್ಮದಿನಕ್ಕೆ ರಕ್ತದಿಂದ ಕವಿತೆ ಬರೆದ ಅಭಿಮಾನಿ
ಹೊಸ ರೈಲುಗಳ ಆರಂಭ
ಕಾರ್ಮಿಕರು, ನೌಕರರ ಅನುಕೂಲಕ್ಕಾಗಿ ಮೈಸೂರು-ಬೆಂಗಳೂರು ನಡುವೆ ಸಂಜೆ 6.30ಕ್ಕೆ ವಿಶ್ವಮಾನವ ಎಕ್ಸ್ಪ್ರೆಸ್ ಆರಂಭಿಸಿದೆ. ಮೈಸೂರು-ಉದಯಪುರ ಪ್ಯಾಲೇಸ್ ಕ್ವೀನ್, ಮೈಸೂರು-ವಾರಾಣಸಿ ರೈಲು ಆರಂಭಿಸಿದೆ.
ದೇಶದ ಮೊದಲ ಬ್ರೈಲ್ ಎನೇಬಲ್ಡ್ ಸ್ಟೇಷನ್ ಎಂಬ ಖ್ಯಾತಿಗೆ ಮೈಸೂರು ನಿಲ್ದಾಣ ಪಾತ್ರವಾಗಿದೆ. ರೈಲು ನಿಲ್ದಾಣಕ್ಕೆ ಲಿಫ್ಟ್, ಎಲವೇಟರ್, ಬ್ಯಾಟರಿ ಚಾಲಿತ ಕಾರುಗಳು, ಇ-ಟಾಯ್ಲೆಟ್, ಸಬ್ ವೇ ಅಳವಡಿಸಲಾಗಿದೆ.
ಸ್ಯಾಟಲೈಟ್ ರೈಲ್ವೆ ಟರ್ಮಿನಲ್
ಮೈಸೂರಿನ ರೈಲು ನಿಲ್ದಾಣ ವಿಸ್ತರಿಸಲು ಜಾಗದ ಕೊರತೆ ಇದ್ದಿದ್ದರಿಂದ ನಾಗನಹಳ್ಳಿಯಲ್ಲಿ 789 ಕೋಟಿ ವೆಚ್ಚದಲ್ಲಿ 347 ರಕರೆ ಜಮೀನಿನಲ್ಲಿ ಕರ್ಮಾಟಕದ ಅತಿ ದೊಡ್ಡ ಸ್ಯಾಟಲೈಟ್ ರೈಲ್ವೆ ಟರ್ಮಿನಲ್ ನಿರ್ಮಾಣದ ಘೋಷಣೆ ಮಾಡಿಸಿದ್ದೇನೆ.
ವಿಜಯನಗರದ ಮೊದಲ ಹಂತದಲ್ಲಿ ಪ್ರಾಣಿಗಳು ಪಕ್ಷಿಗಳು ಬಿದ್ದು ನಾರುತ್ತಿದ್ದ ನೀರಿನ ಟ್ಯಾಂಕುಗಳನ್ನು ಅಮೃತ್ ಯೋಜನೆಯಡಿ 29 ಕೋಟಿ ವೆಚ್ಚದಲ್ಲಿ ಹೊಸದಾಗಿ ಮಾಡಿಸುತ್ತಿದ್ದೇನೆ. 3 ಕೋಟಿ ಲೀಟರ್ ಸಾಮರ್ಥ್ಯದ ಈ ಟ್ಯಾಂಕುಗಳು ನಗರದ ಶೇ 40 ಭಾಗಕ್ಕೆ ನೀರು ಪೂರೈಕೆ ಮಾಡಲಿದೆ. 78 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸುತ್ತಿದ್ದೇನೆ.
ಪಾರ್ಕ್ಗಳ ಅಭಿವೃದ್ಧಿ
85 ಲಕ್ಷ ವೆಚ್ಚದಲ್ಲಿ ಲಿಂಗಾಂಬುದಿ ಕೆರೆ ಪಾರ್ಕ್ ನಿರ್ಮಾಣಕ್ಕೆ ಸದ್ಯದಲ್ಲೇ ಅನುದಾನ ಬಿಡುಗಡೆಯಾಗಲಿದೆ. ವಿಜಯನಗರ ನೀರಿನ ಟ್ಯಾಂಕ್ನಿಂದ ರಿಂಗ್ ರಸ್ತೆವರೆಗಿನ ಪಾರ್ಕ್, ವಿವೇಕಾನಂದ ಪ್ರತಿಮೆಯಿಂದ ಶ್ರೀರಾಮಪುರ ಚರಂಡಿವರೆಗಿನ ಪಾರ್ಕ್, ಗಾಯತ್ರಿಪುರಂನಿಂದ ಸೇಂಟ್ ಆಂತೋಣಿ ಚರ್ಚ್ ವರೆಗಿನ ಪಾರ್ಕ್ ಅಭಿವೃದ್ಧಿ ಮಾಡಲಾಗುತ್ತಿದೆ.
ಹಿನಕಲ್ ಸಿಗ್ನಲ್ಗೆ 19 ಕೋಟಿ ವೆಚ್ಚದಲ್ಲಿ ಫ್ಲೈಓವರ್ ನಿರ್ಮಾಣಮ ಮಡಿಕೇರಿವರೆಗೂ ನಾಲ್ಕು ಪಥದ ಹೈವೆ ನಿರ್ಮಾಣದ ಡಿಪಿಆರ್ ಸದ್ಯದಲ್ಲೇ ಸಲ್ಲಿಸಲಾಗುವುದು.
ರೈತರಿಗೆ ನೆರವು
ತಂಬಾಕು ಬೆಳೆಗಾರರಿಗೆ ಕೆಜಿಗೆ ಸರಾಸರಿ 135.56 ರೂಪಾಯಿ ಬೆಲೆ ಕೊಡಿಸಿದ್ದೇನೆ. ರೈತರಿಗೆ ಕಡಿಮೆ ಮೊತ್ತದಲ್ಲಿ ಗೊಬ್ಬರ ಸಿಗುವಂತೆ ಮಾಡಿದ್ದೇನೆ. ಕೆ.ಆರ್. ಆಸ್ಪತ್ರೆಯಲ್ಲಿ ವಿಆರ್ಡಿಎಲ್ ಮಾಡಿಸಿದ್ದೇನೆ.
ವಿಮಾನ ನಿಲ್ದಾಣಕ್ಕೆ ಪುನರ್ಜೀವ ನೀಡಿ ಚೆನ್ನೈ ಸಂಪರ್ಕ ಕಲ್ಪಿಸಿದ್ದೇನೆ. ಇನ್ನೂ ಮೂರ್ನಾಲ್ಕು ವಿಮಾನ ತರುವ ಗುರಿ ಇದೆ. ಇಎಸ್ಐ ಆಸ್ಪತ್ರೆ ಪೂರ್ಣಗೊಳಿಸಿದ್ದೇನೆ.
ಹೆದ್ದಾರಿ ನಿರ್ಮಾಣಕ್ಕೆ ಚಾಲನೆ
ಬೆಂಗಳೂರು-ಮೈಸೂರು ನಡುವೆ 7 ಸಾವಿರ ಕೋಟಿ ವೆಚ್ಚದ ಎಂಟು ಪಥದ ಹೆದ್ದಾರಿ ನಿರ್ಮಾಣಕ್ಕೆ ಚಾಲನೆ ನೀಡಿದ್ದೇವೆ. ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣಕ್ಕೆ ಬೈಪಾಸ್ ರಸ್ತೆ ಕೂಡುವ ಯೋಜನೆ 24 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ವರ್ತುಲ ರಸ್ತೆ ಕಾಮಗಾರಿ
ಮೈಸೂರಿನ ಸುತ್ತಲಿನ ನಿಂತು ಹೋಗಿದ್ದ ವರ್ತುಲ ರಸ್ತೆ ಕಾಮಗಾರಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿಕೊಂಡು ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಮೈಸೂರು-ಕೊಡಗು ಹೆದ್ದಾರಿಯಲ್ಲಿನ ಅಪಘಾತ ವಲಯಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಅರಣ್ಯ ಇಲಾಖೆಯ ಸಹಕಾರದೊಂದಿಗೆ ರಿಂಗ್ ರಸ್ತೆ ಮತ್ತು ಸರ್ವೀಸ್ ರಸ್ತೆಯುದ್ದಕ್ಕೂ ಗಿಡಗಳನ್ನು ನೆಡಲಾಗಿದೆ.
ಕೊಡಗಿಗೆ ರೈಲು
ಇಡೀ ರಾಜ್ಯದಲ್ಲೇ ರೈಲು ಸಂಪರ್ಕ ಇಲ್ಲದ ಏಕಮಾತ್ರ ಜಿಲ್ಲೆ ಎಂಬ ಕೊರಗನ್ನು ನಿವಾರಿಸಲು ಕುಶಾಲನಗರದವರೆಗೂ 'ಮಾತ್ರ' 667 ಕೋಟಿ ವೆಚ್ಚದ ರೈಲು ಸಂಪರ್ಕಕ್ಕೆ ಅನುಮೋದನೆ ಕೊಡಿಸಿದ್ದೇನೆ.
ಚನ್ನರಾಯಪಟ್ಟಣದಿಂದ ಸೋಮವಾರ ಪೇಟೆ-ಮಡಿಕೇರಿ ಮೂಲಕ ವಿರಾಜಪೇಟೆ ಮಾಕುಟ್ಟಿ ರಸ್ತೆಯನ್ನು ಹೆದ್ದಾರಿಯಾಗಿ ಘೋಷಿಸಲಾಗಿದೆ. ಭಾಗಮಂಡಲದಿಂದ ಮಡಿಕೇರಿವರೆಗೆ ಹೆದ್ದಾರಿ ಘೋಷಣೆ.
20 ಸಾವಿರ ಕುಟುಂಬಕ್ಕೆ ಉಚಿತ ಗ್ಯಾಸ್
ಉಜ್ವಲ ಯೋಜನೆಯಡಿ ಕೊಡಗು-ಮೈಸೂರಿನ 20 ಸಾವಿರ ಕುಟುಂಬಕ್ಕೆ ಉಚಿತ ಗ್ಯಾಸ್ ವಿತರಣೆ ಮಾಡಲಾಗಿದೆ.
ಹೌಸಿಂಗ್ ಫಾರ್ ಆಲ್ ಯೋಜನೆಯಡಿ ವಿವಿಧೆಡೆ ತಲಾ 1.5 ಲಕ್ಷ ಮಂಜೂರು ಮಾಡಲಾಗಿದೆ. ಕೂರ್ಗಳ್ಳಿ ಮತ್ತು ಕಡಕೊಳ ಕೈಗಾರಿಕಾ ವಲಯಗಳಿಗೆ ಅನುಕೂಲವಾಗಲು ಕಡಕೊಳದಲ್ಲಿ ಗೂಡ್ಸ್ ಟರ್ಮಿನಲ್ ನಿರ್ಮಿಸಲು ಟೆಂಡರ್ ಕರೆಯಲಾಗಿದೆ.
ಅಂಡರ್ಪಾಸ್ಗೆ ಅನುಮತಿ
ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ ಅಗತ್ಯವಾಗಿದ್ದ ರಾಷ್ಟ್ರೀಯ ಹೆದ್ದಾರಿಗೆ ಅಂಡರ್ಪಾಸ್ ನಿರ್ಮಿಸಲು ಅನುಮತಿ ಸಿಕ್ಕದೆ.
ಹಳೆ ಮೈಸೂರು ಭಾಗದಲ್ಲಿ ಪರಿವಾರ ಮತ್ತು ಉತ್ತರ ಕರ್ನಾಟಕದಲ್ಲಿ ತಳವಾರ ಜನಾಂಗದವರು ಕಾನೂನು ತೊಡಕಿನಿಂದ ಉದ್ಯೋಗ ವಂಚಿತರಾಗಿದ್ದರು. ಅವರ ಕೂಗಿಗೆ ಸ್ಪಂದಿಸಿ ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ.
ಇನ್ಫೊಸಿಸ್ ಬಳಿ ಎಸ್ಟಿಪಿಐ
ಮೈಸೂರಿನ ಇನ್ಫಿಸಿಸ್ ಬಳಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ನಿರ್ಮಾಣಕ್ಕೆ 25 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಇಲ್ಲಿ ಇನ್ಕ್ಯೂಬೇಷನ್ ಸೆಂಟರ್ ನಿರ್ಮಾಣವಾಗಲಿದೆ.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಆಂಡ್ ಹಿಯರಿಂಗ್ ಉನ್ನತೀಕರಣಕ್ಕೆ ಚಾಲನೆ ನೀಡಲಾಗಿದೆ. 143 ಕೋಟಿ ವೆಚ್ಚದ ಸೆಂಟರ್ ಆಫ್ ಎಕ್ಸಲೆನ್ಸ್ ಮತ್ತು ಮ್ಯೂಸಿಯಂ ನಿರ್ಮಾಣಕ್ಕೆ ಹಣಕಾಸು ನೀಡಲಾಗಿದೆ.
ಮೋದಿಗೆ ಗಾದಿ
ಅಭಿವೃದ್ಧಿ ಸಾಧನೆಯ ವಿವರದ ಕೊನೆಯ ಪುಟದಲ್ಲಿ ಪ್ರತಾಪ್ ಸಿಂಹ ಅವರು ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ ಇರುವ ಚಿತ್ರಗಳ ಜತೆಗೆ ವಿವಿಧ ನಾಯಕರ ಚಿತ್ರಗಳನ್ನು ಹಾಕಲಾಗಿದೆ. 2019ರಲ್ಲಿ ಮೋದಿ ಅವರಿಗೆ ಮತ್ತೆ ಗಾದಿ ನೀಡಿದರೆ ದೇಶಕ್ಕೆ ಪ್ರಗತಿಯ ಹಾದಿ ದೊರಕುತ್ತದೆ ಎಂದು ಹೇಳಲಾಗಿದೆ.