ಎಚ್ಡಿ ಕೋಟೆಯ ನುಗು ಜಲಾಶಯಕ್ಕೆ ಹಾರಿ ತಾಯಿ, ಮಕ್ಕಳು ಆತ್ಮಹತ್ಯೆ
ಮೈಸೂರು, ಜನವರಿ.02: ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಮಹಿಳೆಯೊಬ್ಬಳು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಎಚ್ ಡಿ ಕೋಟೆ ಬಳಿಯ ನುಗು ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನ ಗುಂಡತ್ತೂರಿನ ಸಣ್ಣಸ್ವಾಮಿಗೌಡ ಎಂಬುವರ ಪತ್ನಿ ಗೀತಾ (30) ಮಗಳು ಸಿಂಚನಾ (8) ಅರ್ಚನಾ (6) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.[ರೈತರ ನಗು ನಿಲ್ಲಿಸಿದ ಎಚ್ಡಿ ಕೋಟೆ ವ್ಯಾಪ್ತಿಯ ನುಗು ಜಲಾಶಯ]
ಗೀತಾ ತನ್ನ ಮಕ್ಕಳಾದ ಸಿಂಚನಾ ಮತ್ತು ಅರ್ಚನಾ ಜೊತೆಗೆ ಎಚ್ ಡಿ ಕೋಟೆ ಬಳಿಯ ನುಗು ಜಲಾಶಯಕ್ಕೆ ತೆರಳಿದ್ದಾರೆ. ಸ್ವಲ್ಪ ಹೊತ್ತು ಮಕ್ಕಳೊಂದಿಗೆ ಅಲ್ಲಿಯೇ ಇದ್ದ ಆಕೆ ಬಳಿಕ ಜನರು ಇಲ್ಲದಿರುವುದನ್ನು ಗಮನಿಸಿದ್ದಾಳೆ. ಈ ಸಂದರ್ಭ ತನ್ನ ಇಬ್ಬರು ಹೆಣ್ಣು ಮಕ್ಕಳಾದ ಸಿಂಚನಾ ಮತ್ತು ಅರ್ಚನಾರನ್ನು ತಬ್ಬಿಕೊಂಡು ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.[ನಿಂದಿಸಿದ ಮಾಜಿ ಪತ್ನಿಗೆ ಚಾಕುವಿನಿಂದ ಇರಿದ ಪತಿರಾಯ]
ಶುಕ್ರವಾರ ಸಂಜೆ ಜಲಾಶಯದಲ್ಲಿ ಹೆಣ ತೇಲುತ್ತಿರುವುದನ್ನು ಕಂಡ ಸ್ಥಳೀಯರು ಸರಗೂರು ಪೊಲೀಸದ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸರಗೂರು ಠಾಣೆಯ ಪಿಎಸ್ಐ ಕೆ.ಸುರೇಶ್ ತೆರಳಿ ಸ್ಥಳ ಪರಿಶೀಲಿಸಿ ಶವಗಳನ್ನು ಮೇಲೆತ್ತಿದ್ದಾರೆ. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು ಪ್ರಕರಣ ದಾಖಲಿಸಿಕೊಂಡ ಸರಗೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.