ಮೋದಿಯದ್ದು ಅಭಿವೃದ್ಧಿಯಲ್ಲ, ಚುನಾವಣಾ ಗಿಮಿಕ್: ಖಾದರ್
ಮೈಸೂರು, ಜನವರಿ 3: ಮೋದಿ ಚುನಾವಣಾ ಗಿಮಿಕ್ ಮಾಡುತ್ತಿದ್ದಾರೆ. ಜನರ ಅಭಿವೃದ್ಧಿಗಾಗಿ ಯಾವುದೇ ಕಾರ್ಯ ಮಾಡಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಆರೋಪಿಸಿದರು.
ಮೈಸೂರಿನ ಜಲದರ್ಶಿನಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ನೋಟು ನಿಷೇಧದಿಂದ ಜನತೆ ಸಂಕಷ್ಟ ಅನುಭವಿಸುವಂತಾಗಿದೆ. ಹಣ ಪಡೆಯಲು ಹೋದ 70ಜನ ಸರತಿ ಸಾಲಿನಲ್ಲಿ ನಿಂತು ಸಾವಿಗೀಡಾಗಿದ್ದಾರೆ. ಸೌಜನ್ಯಕ್ಕೂ ಮೋದಿ ಈ ಕುರಿತು ಮಾತನಾಡಿಲ್ಲ. ಅವರಿಗೆ ಜನರ ಕುರಿತು ಕಾಳಜಿ ಇಲ್ಲ ಎಂದು ಕಿಡಿ ಕಾರಿದರು.[ಕಪ್ಪುಹಣ: ಜನಧನ್ ಖಾತೆದಾರರಿಗೆ ಯು.ಟಿ.ಖಾದರ್ ಎಚ್ಚರಿಕೆ]
ನೋಟಿನ ಸಮಸ್ಯೆ 50ದಿನ ಮೀರಿದರೂ ಬಗೆಹರಿದಿಲ್ಲ. ಮುಂದೆಯೂ ಬಗೆಹರಿಯಲ್ಲ ಎಂದು ತಿಳಿಸಿದರು. ಭಾರತದಲ್ಲಿಯೇ ಇದೇ ಪ್ರಥಮಬಾರಿಗೆ ಎಪಿಎಲ್ ಕಾರ್ಡನ್ನು ಆನ್ ಲೈನ್ ನಲ್ಲಿ ಅರ್ಜಿ ಹಾಕಿ ಪಡೆಯಬಹುದಾಗಿದೆ. ಆನ್ ಲೈನ್ ನಲ್ಲಿ ಆಧಾರ್ ಕಾರ್ಡ್ ನಂಬರ್ ಜೋಡಿಸಿದರೆ ನಿಮಗೆ ಅದೇ ದಿನ ಪಡೆಯಬಹುದು. ಮತ್ತೆ 15ದಿನಗಳ ನಂತರ ಪರಿಶೀಲನೆಗೊಂಡ ಅಧಿಕೃತ ಕಾರ್ಡ್ ನಿಮ್ಮ ಕೈಸೇರಲಿದೆ ಎಂದರು.
ಕೆಲವರು ಪಡಿತರ ಕೊಂಡೊಯ್ದು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಕ್ಯಾಶ್ ಕೂಪನ್ ನೀಡಲಾಗುತ್ತಿದೆ. ಇದು ಈಗ ಸದ್ಯ ಮೈಸೂರು, ಮಂಗಳೂರು, ಬೆಂಗಳೂರಿನಲ್ಲಿ ಜಾರಿಯಲ್ಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಉಪಸ್ಥಿತರಿದ್ದರು.