ಮೈಸೂರಿಗೆ ಆಗಮಿಸಿದ ಮೋದಿ, ಸೋಮವಾರ ಹಲವು ಕಾರ್ಯಕ್ರಮಗಳಲ್ಲಿ ಭಾಗಿ
ಮೈಸೂರು, ಫೆಬ್ರವರಿ 19: ಇಂದು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ನಿನ್ನೆ ರಾತ್ರಿಯೇ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಭಾನುವಾರ ರಾತ್ರಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲು ಹಾಕಿ, ಹೂ ನೀಡಿ ಸ್ವಾಗತಿಸಿದರು.
ಮೈಸೂರಿಗೆ ಇಂದು ಪ್ರಧಾನಿ ಮೋದಿ ಆಗಮನ
ಈ ಸಂದರ್ಭ, "ಸಿದ್ದರಾಮಯ್ಯ ಜೀ ಹೌ ಆರ್ ಯು?" (ಹೇಗಿದ್ದೀರಿ) ಎಂದು ಮೋದಿ ಪ್ರಶ್ನಿಸಿದರು. ಈ ಸಂದರ್ಭ ಶಾಲು ಹಾಕಿದ ಸಿದ್ದರಾಮಯ್ಯ "ಐಯಾಮ್ ಫೈನ್" (ನಾನು ಆರಾಮವಾಗಿದ್ದೇನೆ) ಎಂದು ಹೇಳಿದರು.
ರಾಜ್ಯಪಾಲ ವಜೂಭಾಯಿ ವಾಲಾ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿವಿ ಸದಾನಂದ ಗೌಡ, ಪ್ರಕಾಶಸ್ ಜಾವಡೇಕರ್, ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಡಿಜಿಪಿ ನೀಲಮಣಿ ರಾಜು ಹಾಗೂ ಹಲವು ಬಿಜೆಪಿ ನಾಯಕರು ಈ ಸಂದರ್ಭ ಹಾಜರಿದ್ದರು.
ಪ್ರಧಾನಿ ವಾಸ್ತವ್ಯಕ್ಕೆ ಲಲಿತ ಮಹಲ್ ಲಭ್ಯವಿಲ್ಲ, ಎಲ್ಲಿ ಉಳೀತಾರೆ?
ವಿಮಾನ ನಿಲ್ದಾಣದಿಂದ ಸಿಎಂ ಸಿದ್ದರಾಮಯ್ಯ ನಿರ್ಗಮಿಸುವಾಗ ಮೋದಿ ಮೋದಿ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ ಘಟನೆಯೂ ಇದೇ ಸಂದರ್ಭ ನಡೆಯಿತು.
ನಂತರ ಮಹಾತ್ಮಗಾಂಧಿ ರಸ್ತೆಯಲ್ಲಿರುವ ರಾಡಿಷನ್ ಬ್ಲ್ಯೂ ಹೋಟೆಲ್ ಗೆ ಪ್ರಧಾನಿ ನರೇಂದ್ರ ಮೋದಿ ತೆರಳಿದರು. ನಂತರ ಅಧಿಕಾರಿಗಳ ಜತೆ ಪುಟ್ಟ ಸಭೆ ನಡೆಸಿದರು. ನಂತರ ಹೋಟೆಲ್ ನ ಮೊದಲ ಮಹಡಿಯಲ್ಲಿ ವಾಸ್ತವ್ಯ ಹೂಡಿರುವ ಪ್ರಧಾನಿ ವಿಶ್ರಾಂತಿಗೆ ಜಾರಿದರು.
ಬೆಳಿಗ್ಗೆ ಹೋಟೆಲ್ ನಿಂದಲೇ ಹೈದರಾಬಾದ್ ನಲ್ಲಿ ನಡೆಯಲಿರುವ 'ವರ್ಲ್ಡ್ ಕಾನ್ಫರೆನ್ಸ್ ಆನ್ ಇನ್ಫಾರ್ಮೇಷನ್ ಟೆಕ್ನಾಲಜಿ' ಕಾರ್ಯಕ್ರಮವನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಶ್ರವಣ ಬೆಳಗೊಳಕ್ಕೆ ತೆರಳಿ ಬಾಹುಬಲಿಯ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮೈಸೂರಿಗೆ ವಾಪಸಾಗಲಿದ್ದು ಮೈಸೂರು-ಬೆಂಗಳೂರು ವಿದ್ಯುತ್ ಚಾಲಿತ ರೈಲ್ವೇ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.
ಸಂಜೆ ವೇಳೆ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಬಿಜೆಪಿ ಸಮಾವೇಶ ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದು ಅಲ್ಲಿಂದ ನವದೆಹಲಿಗೆ ವಾಪಾಸಾಗಲಿದ್ದಾರೆ.