ನಂಜನಗೂಡಿನ ಅಂಗನವಾಡಿಯಲ್ಲಿ ಬಣ್ಣದ ಚಿತ್ತಾರ!
ಮೈಸೂರು, ಮೇ 13 : ಸಾಮಾನ್ಯವಾಗಿ ಅಂಗನವಾಡಿ ಎಂದ ತಕ್ಷಣ ಮುರುಕುಲು ಗುಡಿಸಲು, ಸುಣ್ಣಬಣ್ಣ ಕಾಣದ ಕೊಠಡಿಯ ಕಟ್ಟಡ.. ಅದರೊಳಗೆ ಸಿಂಬಳ ಸುರಿಸುತ್ತ ಮಾಸಲು ಬಟ್ಟೆ ತೊಟ್ಟು ನೆಲದಲ್ಲಿ ಕುಳಿತು ಶಿಶುಗೀತೆ ಹಾಡುವ ಮಕ್ಕಳು.. ಹೀಗೆ ನಾವು ಹತ್ತಿರದಿಂದ ಕಂಡ ದುಸ್ಥಿತಿಯಲ್ಲಿರುವ ಅಂಗನವಾಡಿಗಳ ಚಿತ್ರಣ ಕಣ್ಮುಂದೆ ಹಾದು ಹೋಗುತ್ತದೆ.
ಆದರೆ ನಾವೊಮ್ಮೆ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮ ಪಂಚಾಯಿತಿಯ ಬಿಳುಗಲಿಯಲ್ಲಿ ನಿರ್ಮಾಣವಾಗಿರುವ ಅಂಗನವಾಡಿ ಕೇಂದ್ರವನ್ನು ನೋಡಿದರೆ ಅಚ್ಚರಿಯಾಗುತ್ತದೆ. ಅಷ್ಟೇ ಅಲ್ಲ ಅಂಗನವಾಡಿ ಕೇಂದ್ರ ಎಂದರೆ ಹೀಗಿರಬೇಕೆಂಬ ಅಭಿಲಾಷೆಯೂ ಮೂಡುತ್ತದೆ.
ಪುಟ್ಟ ಕಟ್ಟಡ ಅದರ ಸುತ್ತಲೂ ಕಾಂಪೌಂಡ್. ಆ ಕಾಂಪೌಂಡ್ನ ಗೋಡೆಗಳಲ್ಲಿ ಬಣ್ಣದ ಚಿತ್ತಾರದಲ್ಲಿ ಅರಳಿ ನಿಂತ ಬಣ್ಣ ಬಣ್ಣದ ಮರಗಿಡಗಳು, ಪ್ರಾಣಿಪಕ್ಷಿಗಳು. ಒಂದು ಕಡೆ ಸಾಕು ಪ್ರಾಣಿಗಳಾದರೆ ಮತ್ತೊಂದು ಕಡೆ ವನ್ಯಮೃಗಗಳು. ಇದರೊಂದಿಗೆ ಕೋಳಿ, ಸೇರಿದಂತೆ ಪಕ್ಷಿಗಳ ಪರಿಚಯ.. ಪರಿಸರ ಪ್ರಜ್ಞೆ ಬೆಳೆಸುವ ಮರ.. ಅದರ ಪಕ್ಕ ಕುಳಿತ ಗಿಳಿ.. [ಇದು ನಿಮ್ಮ ಮಕ್ಕಳ ಭವಿಷ್ಯ ಬದಲಾಯಿಸುವ ಸುದ್ದಿ]
ಕಾಂಪೌಂಡ್ ಒಳಗೆ ಹೋದರೆ ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ಕೆಲವು ಸಲಕರಣೆಗಳು.. ಯಾವುದೇ ಖಾಸಗಿ ಪ್ಲೇ ಹೋಂಗಳಿಗಿಂತ ಕಡಿಮೆ ಇಲ್ಲದಂತೆ ನಿರ್ಮಾಣವಾಗಿರುವ ಈ ಅಂಗನವಾಡಿ ಕೇಂದ್ರ ನಿಜಕ್ಕೂ ಗಮನಸೆಳೆಯುತ್ತದೆ.
ನೋಡಿದ ತಕ್ಷಣ ಆಕರ್ಷಿಸುವ ಅಂಗನವಾಡಿ ಕೇಂದ್ರದತ್ತ ಮಕ್ಕಳು ಕೂಡ ಖುಷಿಯಿಂದಲೇ ಆಗಮಿಸುತ್ತವೆ. ಎಲ್ಲೆಡೆ ಇಂತಹ ಅಂಗನವಾಡಿಗಳನ್ನು ನಿರ್ಮಿಸುವುದು ಸರ್ಕಾರದ ಗುರಿಯಂತೆ. ನಂಜನಗೂಡು ತಾಲೂಕಿನಲ್ಲಿ ಸುಮಾರು 20 ಅಂಗನವಾಡಿ ಕೇಂದ್ರಗಳನ್ನು ಬಾಲವಿಕಸನ ಯೋಜನೆಯಡಿ ನಿರ್ಮಿಸಲಾಗುತ್ತಿದೆ. [ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ]
ಈ ಅಂಗನವಾಡಿ ಕೇಂದ್ರಗಳು ಮೂಲ ಸೌಕರ್ಯಗಳನ್ನೊಳಗೊಂಡು ಪರಿಸರ, ಪ್ರಾಣಿಪಕ್ಷಿಗಳ ಬಗೆಗೆ ಪುಟ್ಟ ಮಕ್ಕಳಿಗೆ ಪ್ರಜ್ಞೆ ಮೂಡಿಸಲು ಸಹಕಾರಿಯಾಗುತ್ತಿದೆ. ಈ ಕುರಿತಂತೆ ಮಾತನಾಡಿರುವ ಸಿಡಿಪಿಓ ಗೀತಾಲಕ್ಷ್ಮಿ ಅವರು ಅಂಗನವಾಡಿ ಮಕ್ಕಳಿಗೆ ಆಟಪಾಠಗಳ ಜತೆ ಜತೆಗೆ ಪ್ರಾಣಿ ಪಕ್ಷಿ, ಗಿಡಮರಗಳ ಚಿತ್ರಗಳನ್ನು ನೋಡಿ ಗುರುತಿಸಲು ಅನುಕೂಲವಾಗುವಂತೆ ಬಾಲವಿಕಸನ ಯೋಜನೆಯಡಿ ಈ ರೀತಿಯ ಅಂಗನವಾಡಿ ಕೇಂದ್ರಗಳನ್ನು ಸರ್ಕಾರ ನಿರ್ಮಿಸುತ್ತಿರುವುದಾಗಿ ಹೇಳಿದ್ದಾರೆ. ರಾಜ್ಯದಾದ್ಯಂತ ಇಂತಹ ಅಂಗನವಾಡಿಗಳು ನಿರ್ಮಾಣವಾದರೆ ಬಡಜನತೆಯ ಮಕ್ಕಳಿಗೆ ಅನುಕೂಲವಾಗಲಿದೆ.