ಅಂಗಡಿಗೆ ನುಗ್ಗಿ ವಿವಿಧ ಬ್ರ್ಯಾಂಡ್ ಮೊಬೈಲ್ ಕದ್ದ ಖತರ್ನಾಕ್ ಕಳ್ಳರು
ಮೈಸೂರು, ಮಾರ್ಚ್ 8 : ಟಿ.ನರಸೀಪುರ ಬಸ್ ನಿಲ್ದಾಣದ ಬಳಿ ಇರುವ ಮೊಬೈಲ್ ಅಂಗಡಿಗೆ ದುಷ್ಕರ್ಮಿಗಳು ನುಗ್ಗಿ ಮೊಬೈಲ್, ನಗದು ಹಣ ದೋಚಿ ಪರಾರಿಯಾಗಿದ್ದಾರೆ.
ಟಿ.ನರಸೀಪುರ ಬಸ್ ನಿಲ್ದಾಣದ ಬಳಿ ಇರುವ ಸುರೇಶ್ ಎಂಬುವರ ಮೊಬೈಲ್ ಅಂಗಡಿಯಲ್ಲಿ ಈ ಕೃತ್ಯ ನಡೆದಿದೆ. ಸುಮಾರು ಒಂದು ಲಕ್ಷ ರು ಮೌಲ್ಯದ ಮೊಬೈಲ್ ಫೋನ್ ಗಳು ಸೇರಿದಂತೆ ಎರಡು ಸಾವಿರ ರು ನಗದು ಕಳವು ಮಾಡಿದ್ದಾರೆ. ಈ ಬಗ್ಗೆ ಟಿ.ನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು: ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಇಂಡವಾಳು ಗ್ರಾಮದಲ್ಲಿ ನಡೆದಿದೆ.
ಭೈರಾಪುರ ಗ್ರಾಮದ ನಿವಾಸಿ ೪೦ ವರ್ಷದ ಕಾಂತರಾಜು ಎಂಬಾತನೇ ಮೃತ ದುರ್ದೈವಿ. ಇಂಡವಾಳು ಗ್ರಾಮದಲ್ಲಿ ಮೂರು ದಿನಗಳಿಂದ ಮಾರಮ್ಮನ ಜಾತ್ರೆ ಜಾತ್ರೆ ಪ್ರಯುಕ್ತ ದೀಪಾಲಂಕಾರ ಮಾಡಲಾಗಿತ್ತು.
ವಿದ್ಯುತ್ ದೀಪಾಲಂಕಾರ ತೆರವುಗೊಳಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೈಕ್ ಕಾರು ಮುಖಾಮುಖಿ ಡಿಕ್ಕಿ : ಬೈಕ್ ಕಾರು ಮುಖಾಮುಖಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೊಪ್ಪ ಗ್ರಾಮದ ಬಿ.ಎಂ.ರಸ್ತೆಯಲ್ಲಿ ನಡೆದಿದೆ.
ಎಡಗಾಲು ಮುರಿದು ಗಂಭೀರ ಗಾಯಗೊಂಡಿರುವ ವೆಂಕಟೇಶ್ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬೈಲುಕುಪ್ಪೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.