ಇಂಥ ವಿಕೃತ ಮನಸ್ಸಿನ ಕಿಡಿಗೇಡಿಗಳು ನಿಮ್ಮೂರಲ್ಲೂ ಇರಬಹುದು
ಮೈಸೂರು, ಮೇ 31 : ವಿಕೃತ ಮನಸ್ಸಿನ ಕಿಡಿಗೇಡಿಗಳು ಎಲ್ಲೆಡೆಯೂ ಸಿಗುತ್ತಾರೆ. ಇವರಿಗೆ ಏನಾದರೊಂದು ಕೃತ್ಯ ಎಸಗಿ ಜನರಿಗೆ ತೊಂದರೆ ನೀಡದಿದ್ದರೆ ಸಮಾಧಾನವಿಲ್ಲ.
ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡುತ್ತಾ ವಿಕೃತ ಆನಂದ ಪಡುವ ಕಿಡಿಗೇಡಿಗಳಿಂದಾಗಿ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ. ಶಾಲಾ ಕಾಲೇಜು, ಬಸ್ ತಂಗುದಾಣ, ಸಾರ್ವಜನಿಕ ಶೌಚಾಲಯದ ಗೋಡೆಗಳಲ್ಲಿ ಅಶ್ಲೀಲ ಪದಗಳನ್ನು ಬರೆದೋ, ನಲ್ಲಿಗಳನ್ನು ಮುರಿದೋ, ಛಾವಣಿಯ ಹಂಚು ಒಡೆದೋ ಒಟ್ಟಾರೆ ಏನಾದರೊಂದು ಮಾಡಿ ಸಂತೋಷ ಪಡುವ ಕಿಡಿಗೇಡಿಗಳಿಗೆ ಕೊರತೆಯಿಲ್ಲ. ಇಂತಹವರು ಮೈಸೂರು ಜಿಲ್ಲೆಯಲ್ಲಿ ಬೇಕಾದಷ್ಟಿದ್ದಾರೆ. ನಿಮ್ಮೂರಲ್ಲೂ ಇರಬಹುದು.
ಇಂತಹ ಕಿಡಿಗೇಡಿಗಳು ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಪ್ರೌಢಶಾಲೆಯ ಆವರಣದಲ್ಲಿ ನಿರ್ಮಿಸಲಾಗಿದ್ದ ನಲ್ಲಿಗಳನ್ನು ಮುರಿದು ನೀರಿನ ಟ್ಯಾಂಕ್ ಒಡೆದು ವಿಕೃತ ಅಟ್ಟಹಾಸವನ್ನು ಮೆರೆದಿದ್ದಾರೆ. [ಪುಟ್ಟಬಸಮ್ಮನ ಜಗಳದಿಂದ ಅಂಗನವಾಡಿ ಕೂಸು ಬಡ!]
ಮಕ್ಕಳ ಹಿತದೃಷ್ಟಿಯಿಂದ ಬೈಲಕುಪ್ಪೆ ಪ್ರೌಢಶಾಲೆ ಆವರಣದಲ್ಲಿ ಅಡುಗೆಮನೆ ಹೊರಗೆ ಮಕ್ಕಳು ಕೈ ತೊಳೆಯಲು ಅನುಕೂಲವಾಗಲೆಂದು ಟ್ಯಾಂಕ್ ನಿರ್ಮಿಸಿ ನೂತನವಾಗಿ ನಲ್ಲಿಗಳನ್ನು ಅಳವಡಿಸಲಾಗಿತ್ತು. ಮಧ್ಯಾಹ್ನ ಬಿಸಿಯೂಟ ಮಾಡುವ ಮಕ್ಕಳಿಗೆ ನೀರಿನ ನಲ್ಲಿಯಿಲ್ಲದೆ ಕೈತೊಳೆಯಲು ಅನಾನುಕೂಲವಾಗಿತ್ತು. ಇದನ್ನು ಮನಗಂಡ ಶಾಲಾ ಆಡಳಿತ ಮಂಡಳಿ ಸಂಬಂಧಿಸಿದವರ ಗಮನಕ್ಕೆ ತಂದು ನಲ್ಲಿಗಳನ್ನು ನಿರ್ಮಿಸಿ ಮಕ್ಕಳಿಗೆ ನೀರಿನ ವ್ಯವಸ್ಥೆ ಮಾಡಿಸಿಕೊಡುವಲ್ಲಿ ಯಶಸ್ವಿಯಾಗಿತ್ತು.
ಆದರೆ ಯಾರೋ ಕಿಡಿಗೇಡಿಗಳು ನಲ್ಲಿಗಳನ್ನು ಮುರಿದುಹಾಕಿದ್ದಲ್ಲದೆ, ಇದೇ ಆವರಣದಲ್ಲಿರುವ ಶೌಚಾಲದ ನೀರಿನ ಟ್ಯಾಂಕ್ ಒಡೆದು ಹಾಕಿದ್ದಾರೆ. ರಾತ್ರಿ ಶಾಲಾ ಆವರಣಕ್ಕೆ ನುಗ್ಗಿದ ಕಿಡಿಗೇಡಿ ಕೃತ್ಯ ಎಸಗಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಭಾಗ್ಯ ಅವರು, ಶಾಲೆಯ ಆವರಣಕ್ಕೆ ಕಾಂಪೌಂಡ್ ವ್ಯವಸ್ಥೆ ಇಲ್ಲದಿರುವುದರಿಂದ ಶಾಲಾ ಆವರಣಕ್ಕೆ ನುಗ್ಗುವ ಕಿಡಿಗೇಡಿಗಳು ಶಾಲೆಯ ಆಸ್ತಿಗೆ ಹಾನಿ ಮಾಡಿ ಹೋಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. [ಇದು ನಿಮ್ಮ ಮಕ್ಕಳ ಭವಿಷ್ಯ ಬದಲಾಯಿಸುವ ಸುದ್ದಿ]